Apr 29, 2026 Languages : ಕನ್ನಡ | English

ಮಾಂಸದ ಅಡುಗೆಗಾಗಿ ಶುರುವಾದ ಜಗಳ ಮರಣಾಂತಿಕ ದಾಳಿಯಲ್ಲಿ ಅಂತ್ಯ - ಗಂಡನನ್ನೇ ಮುಗಿಸಿದ ಹೆಂಡತಿ!!

ನಾಲಿಗೆ ರುಚಿಗಾಗಿ ಮಾಡುವ ಒಂದು ಹೊತ್ತಿನ ಅಡುಗೆ ಮನುಷ್ಯನ ಪ್ರಾಣವನ್ನೇ ತೆಗೆಯಬಹುದು ಎಂದರೆ ನಂಬಲೇಬೇಕು. ತೆಲಂಗಾಣದ ಕಾಮರೆಡ್ಡಿಯಲ್ಲಿ ಅಂತಹದ್ದೇ ಒಂದು ಘೋರ ಕೃತ್ಯ ನಡೆದಿದೆ. ಕೇವಲ ಮಾಂಸದ ಅಡುಗೆ ಮಾಡಿಲ್ಲ ಎಂಬ ಸಣ್ಣ ವಿಚಾರಕ್ಕೆ ಶುರುವಾದ ಕಿತ್ತಾಟ, ಈಗ ಇಬ್ಬರು ಪುಟ್ಟ ಮಕ್ಕಳನ್ನು ಅನಾಥರನ್ನಾಗಿಸಿದೆ.

ಬಡತನದ ಬೇಗೆಯಲ್ಲಿ ಬೆಂದ ಸಂಸಾರ ಈಗ ಸ್ಮಶಾನ
ಬಡತನದ ಬೇಗೆಯಲ್ಲಿ ಬೆಂದ ಸಂಸಾರ ಈಗ ಸ್ಮಶಾನ

ಅಸಲಿಗೆ ಅಲ್ಲಿ ಆಗಿದ್ದೇನು?

ಕಾಮರೆಡ್ಡಿಯಲ್ಲಿ ಕೋದಂಡ ಶಿವಾಜಿ ಮತ್ತು ಲಕ್ಷ್ಮಿ ದಂಪತಿ ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೊರನೋಟಕ್ಕೆ ಸುಂದರವಾಗಿದ್ದ ಈ ಸಂಸಾರದ ಒಳಗೆ ಆರ್ಥಿಕ ಸಂಕಷ್ಟದ ಬೆಂಕಿ ಬೇಯುತ್ತಿತ್ತು. ಹಣಕಾಸಿನ ತೊಂದರೆಯಿಂದಾಗಿ ದಂಪತಿಗಳ ನಡುವೆ ದಿನಾಲೂ ಸಣ್ಣಪುಟ್ಟ ವಿಷಯಕ್ಕೂ ಕಿತ್ತಾಟ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

'ಮಾಂಸ' ತಂದ ಕುತ್ತು!

ಘಟನೆಯ ದಿನ ರಾತ್ರಿ, ಶಿವಾಜಿ ಮನೆಗೆ ಬಂದಾಗ ಊಟಕ್ಕೆ ಮಾಂಸದ ಅಡುಗೆ ಮಾಡಿಲ್ಲ ಎಂಬ ವಿಷಯ ಗೊತ್ತಾಗಿದೆ. ಇದೇ ವಿಚಾರವಾಗಿ ಪತ್ನಿ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಈಗಾಗಲೇ ಸಂಸಾರ ನಡೆಸಲು ಹಣವಿಲ್ಲದೆ, ಜೀವನದ ಜಂಜಾಟದಿಂದ ಬೇಸತ್ತಿದ್ದ ಲಕ್ಷ್ಮಿಗೆ ಗಂಡನ ಈ ಪ್ರಶ್ನೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಿಟ್ಟಿನ ಭರದಲ್ಲಿ ವಿವೇಚನೆ ಕಳೆದುಕೊಂಡ ಲಕ್ಷ್ಮಿ, ಮನೆಯಲ್ಲಿದ್ದ ಮಚ್ಚಿನಿಂದ ಪತಿ ಶಿವಾಜಿಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾಳೆ. ಏಟಿನ ತೀವ್ರತೆ ಎಷ್ಟಿತ್ತೆಂದರೆ ಶಿವಾಜಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಾರೆ.

ಅನಾಥರಾದ ಮಕ್ಕಳು!

ಮನೆಯೊಳಗೆ ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ದೃಶ್ಯ ಕಂಡು ದಂಗಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಲಕ್ಷ್ಮಿಯನ್ನು ಅರೆಸ್ಟ್ ಮಾಡಿದ್ದಾರೆ.

ಈ ಇಡೀ ಘಟನೆಯಲ್ಲಿ ಅತೀ ಹೆಚ್ಚು ನೋವುಣ್ಣುತ್ತಿರುವುದು ಆ ದಂಪತಿಯ ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು. ತಂದೆ ಸಾವನ್ನಪ್ಪಿದ್ದಾನೆ, ತಾಯಿ ಈಗ ಜೈಲು ಪಾಲಾಗಿದ್ದಾಳೆ. ಕೇವಲ ಒಂದು ಹೊತ್ತಿನ ಊಟದ ಹಠಕ್ಕೆ ಬಿದ್ದ ತಂದೆ ಮತ್ತು ಸಿಟ್ಟು ತಡೆಯಲಾರದ ತಾಯಿ ಮಾಡಿದ ಈ ಎಡವಟ್ಟಿನಿಂದಾಗಿ, ಆ ಪುಟ್ಟ ಕಂದಮ್ಮಗಳು ಈಗ ದಿಕ್ಕಿಲ್ಲದಂತಾಗಿವೆ.

ಪೊಲೀಸ್ ತನಿಖೆ

ಸಿಐ ನರಹರಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. "ದೀರ್ಘಕಾಲದ ಆರ್ಥಿಕ ಒತ್ತಡ ಮತ್ತು ಅತಿಯಾದ ಸಿಟ್ಟೇ ಈ ಕೊಲೆಗೆ ಪ್ರೇರಣೆ" ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಸಿಟ್ಟು ಬಂದಾಗ ಸುಮ್ಮನಿರುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಕರಾಳ ಘಟನೆಯೇ ಸಾಕ್ಷಿ. ಸಣ್ಣ ಜಗಳ ದೊಡ್ಡ ದುರಂತಕ್ಕೆ ದಾರಿಯಾದದ್ದು ನಿಜಕ್ಕೂ ಬೇಸರದ ಸಂಗತಿ.