Apr 11, 2026 Languages : ಕನ್ನಡ | English

ಬಂಗಾಳದ ಭವಿಷ್ಯಕ್ಕೆ ಬಿಜೆಪಿ 'ಬ್ರಹ್ಮಾಸ್ತ್ರ': ಅಲ್ಪಸಂಖ್ಯಾತರಾಗುವ ಭೀತಿಯಲ್ಲಿರೋ ಬಂಗಾಳಿಗಳ ರಕ್ಷಣೆಗೆ ಮೋದಿ ಮಾಸ್ಟರ್ ಪ್ಲಾನ್!!

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯ ಕಾವು ಈಗ ಪರಾಕಾಷ್ಠೆ ತಲುಪಿದೆ. ಇವತ್ತು ಮುರ್ಶಿದಾಬಾದ್ ಜಿಲ್ಲೆಯ ಜಂಗೀಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. 'ಬಂಗಾಳದ ಅಸ್ಮಿತೆ ಮತ್ತು ಭವಿಷ್ಯವನ್ನು ಉಳಿಸಲು ಇದು ಸಕಾಲ' ಎಂದು ಹೇಳುವ ಮೂಲಕ ಮೋದಿ ಅವರು ಚುನಾವಣಾ ಅಖಾಡಕ್ಕೆ ಹೊಸ ತಿರುವು ನೀಡಿದ್ದಾರೆ.

ಮಮತಾ ಸರ್ಕಾರದ ವಿರುದ್ಧ ಮೋದಿ ನೇರ ವಾಗ್ದಾಳಿ; | Photo Credit: PTI
ಮಮತಾ ಸರ್ಕಾರದ ವಿರುದ್ಧ ಮೋದಿ ನೇರ ವಾಗ್ದಾಳಿ; | Photo Credit: PTI

ಈ ಭಾಷಣದಲ್ಲಿ ಮೋದಿ ಅವರು ಎತ್ತಿದ ಪ್ರಮುಖ ವಿಷಯಗಳ ಡಿಟೇಲ್ಸ್ ಇಲ್ಲಿದೆ ನೋಡಿ.

ಮುಸ್ಲಿಂ ಬಹುಸಂಖ್ಯಾತರಿರುವ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಿಂತು ಮೋದಿ ಅವರು ಒಂದು ದೊಡ್ಡ ಮಾತನ್ನಾಡಿದ್ದಾರೆ. "ರಾಜ್ಯದ ಹಲವು ಭಾಗಗಳಲ್ಲಿ ಜನಸಂಖ್ಯೆಯ ಸಮತೋಲನ ಅತಿ ವೇಗವಾಗಿ ಬದಲಾಗುತ್ತಿದೆ. ಇಲ್ಲಿನ ಮೂಲ ನಿವಾಸಿಗಳಾದ ಬಂಗಾಳಿಗಳೇ ತಮ್ಮ ಸ್ವಂತ ನೆಲದಲ್ಲಿ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಬಂದಿದೆ. ಆದರೆ ಬಿಜೆಪಿ ಇದಕ್ಕೆ ಯಾವತ್ತೂ ಅವಕಾಶ ಕೊಡಲ್ಲ" ಎಂದು ಗುಡುಗಿದ್ದಾರೆ. ಇದು ಈಗ ಬಂಗಾಳದ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಕೇವಲ ಆರು ತಿಂಗಳೊಳಗೆ ಬಂಗಾಳದಲ್ಲಿ 'ಏಕರೂಪ ನಾಗರಿಕ ಸಂಹಿತೆ' (UCC) ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಪ್ರಣಾಳಿಕೆಯಲ್ಲಿ ಘೋಷಿಸಿದ ಬೆನ್ನಲ್ಲೇ ಮೋದಿ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. "ತುಷ್ಟೀಕರಣದ ರಾಜಕೀಯಕ್ಕೆ (Appeasement Politics) ಮಂಗಳ ಹಾಡಲು ಯುಸಿಸಿ ಜಾರಿ ಮಾಡುವುದು ಅನಿವಾರ್ಯ. ದೇಶದ ಭದ್ರತೆ ನಮಗೆ ಎಲ್ಲಕ್ಕಿಂತ ಮುಖ್ಯ" ಎಂದು ಮೋದಿ ಈ ಸಮಾವೇಶದಲ್ಲಿ ಶಪಥ ಮಾಡಿದ್ದಾರೆ.

ಟಿಎಂಸಿ ಪಕ್ಷದ ಹಳೆಯ ಘೋಷಣೆಯಾದ 'ಮಾ-ಮಾಟಿ-ಮಾನುಷ್' (ತಾಯಿ-ಮಣ್ಣು-ಮನುಷ್ಯ) ಬಗ್ಗೆ ಮೋದಿ ಅವರು ಮಮತಾ ದೀದಿಗೆ ಟಾಂಗ್ ನೀಡಿದ್ದಾರೆ. "ಈಗ ಟಿಎಂಸಿ ಪಕ್ಷಕ್ಕೆ ಮಾ, ಮಾಟಿ ಅಥವಾ ಮಾನುಷ್ ಮೇಲೆ ಪ್ರೀತಿ ಇಲ್ಲ. ಅವರು ಅಧಿಕಾರ ಉಳಿಸಿಕೊಳ್ಳಲು ಕೇವಲ 'ನುಸುಳುಕೋರರ' (Infiltrators) ಮತ್ತು ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಅವಲಂಬಿತರಾಗಿದ್ದಾರೆ" ಎಂದು ಮೋದಿ ಲೇವಡಿ ಮಾಡಿದ್ದಾರೆ. ಬಂಗಾಳದ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ನುಸುಳುವಿಕೆಯೇ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪ.

ಈ ಬಾರಿಯ ಚುನಾವಣೆ ಕೇವಲ ಸರ್ಕಾರ ಬದಲಿಸುವುದಕ್ಕಲ್ಲ, ಬದಲಿಗೆ ಬಂಗಾಳದ ಸಂಸ್ಕೃತಿ ಮತ್ತು ಗುರುತನ್ನ ಉಳಿಸಿಕೊಳ್ಳುವುದಕ್ಕಿರೋ ಹೋರಾಟ ಅಂತ ಮೋದಿ ಬಣ್ಣಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸರ್ಕಾರ ನುಸುಳುಕೋರರಿಗೆ ಬೆಂಬಲ ನೀಡುವ ಮೂಲಕ ಬಂಗಾಳದ ಭದ್ರತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

"ಬಂಗಾಳದ ಜನರಿಗೆ ನ್ಯಾಯ ಸಿಗಬೇಕಿದೆ. ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ವಂಚನೆಗೆ ಅಂತ್ಯ ಹಾಡಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಘನತೆಯನ್ನು ಮತ್ತೆ ಎತ್ತಿ ಹಿಡಿಯುತ್ತೇವೆ" ಎಂದು ಭರವಸೆ ನೀಡುವ ಮೂಲಕ ಮೋದಿ ತಮ್ಮ ಭಾಷಣ ಮುಗಿಸಿದ್ದಾರೆ.

ಒಟ್ಟಿನಲ್ಲಿ, ಬಂಗಾಳದ ಅಂಗಳದಲ್ಲಿ ಈಗ 'ಯುಸಿಸಿ' ಮತ್ತು 'ನುಸುಳುಕೋರರ' ವಿಚಾರವೇ ಮೇಲುಗೈ ಸಾಧಿಸುತ್ತಿದೆ. ಮಮತಾ ಬ್ಯಾನರ್ಜಿ ಅವರ ಕೋಟೆಯನ್ನ ಮೋದಿ ಈ ಬಾರಿ ಭೇದಿಸುತ್ತಾರಾ? ಅಥವಾ ದೀದಿ ತನ್ನ ಪಾರುಪತ್ಯ ಮುಂದುವರಿಸುತ್ತಾರಾ? ಅನ್ನೋದನ್ನ ಕಾದು ನೋಡಬೇಕು.

Latest News