Apr 12, 2026 Languages : ಕನ್ನಡ | English

ರಾಜಕೀಯದಲ್ಲಿ ಅನುದಾನದ ಯುದ್ಧ - 'ಸಾಹುಕಾರ' ಸತೀಶ್ ಜಾರಕಿಹೊಳಿ ಎಸೆದ ಸವಾಲುಗಳು ಇಲ್ಲಿದೆ ನೋಡಿ!!

ಚಿಕ್ಕೋಡಿ ಭಾಗದ ರಾಜಕೀಯ ಅಖಾಡ ಈಗ ಸಖತ್ ರಂಗೇರಿದೆ. "ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ಸಿಗುತ್ತಿಲ್ಲ" ಎಂದು ಬಿಜೆಪಿ ನಾಯಕ ನಿಖಿಲ್ ಕತ್ತಿ ನೀಡಿದ್ದ ಹೇಳಿಕೆಗೆ, ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕತ್ತಿ ಅವರ ಆರೋಪಗಳನ್ನು ಅಕ್ಷರಶಃ ಪುಡಿಪುಡಿ ಮಾಡಿದ್ದಾರೆ.

ನಿಖಿಲ್ ಕತ್ತಿ ಆರೋಪಕ್ಕೆ ಸತೀಶ್ ಜಾರಕಿಹೊಳಿ ಖಡಕ್ ಟಾಂಗ್
ನಿಖಿಲ್ ಕತ್ತಿ ಆರೋಪಕ್ಕೆ ಸತೀಶ್ ಜಾರಕಿಹೊಳಿ ಖಡಕ್ ಟಾಂಗ್

ರಾಜಕೀಯ ಅಂದಮೇಲೆ ಆರೋಪ-ಪ್ರತ್ಯಾರೋಪಗಳು ಕಾಮನ್. ಆದರೆ ಈ ಬಾರಿ ಚಿಕ್ಕೋಡಿ ಭಾಗದಲ್ಲಿ ಅನುದಾನದ ವಿಚಾರವಾಗಿ ದೊಡ್ಡ ಯುದ್ಧವೇ ಶುರುವಾಗಿದೆ. "ನಮಗೆ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರ ಹಣ ಕೊಡುತ್ತಿಲ್ಲ" ಎಂದು ಬಿಜೆಪಿ ನಾಯಕ ನಿಖಿಲ್ ಕತ್ತಿ ಕಿಡಿಕಾರಿದ್ದರು. ಇದಕ್ಕೆ ಈಗ ಬೆಳಗಾವಿಯ 'ಸಾಹುಕಾರ' ಎಂದೇ ಖ್ಯಾತರಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಖಡಕ್ ಉತ್ತರ ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ನಿಖಿಲ್ ಕತ್ತಿ ಅವರ ಮಾತಿಗೆ ಲಾಜಿಕ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. "ಒಂದೆಡೆ ಅನುದಾನ ಸಿಗುತ್ತಿಲ್ಲ ಅಂತೀರಾ, ಇನ್ನೊಂದೆಡೆ ಹೊಸ ಹೊಸ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸುತ್ತೀರಾ. ಅನುದಾನ ಇಲ್ಲದಿದ್ದರೆ ಪೂಜೆ ಮಾಡೋಕೆ ಹೇಗೆ ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ನಿಖಿಲ್ ಕತ್ತಿ ಅವರ ಕಾಲೆಳೆದಿದ್ದಾರೆ. ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ಹೇಗಾದರೂ ಮಾಡಿ ಹಣ ತಂದು ಕೆಲಸ ಮಾಡಬಹುದು, ಇಲ್ಲದಿದ್ದರೆ ಹೀಗೆ ನೆಪ ಹೇಳುತ್ತಾ ಕೂರಬೇಕಾಗುತ್ತದೆ ಎಂದು ಸಚಿವರು ಲೇವಡಿ ಮಾಡಿದ್ದಾರೆ.

"ನಾವು ಬಿಜೆಪಿ ಕಾಲದಲ್ಲೂ ಅಭಿವೃದ್ಧಿ ಮಾಡಿದ್ದೇವೆ"

ಸತೀಶ್ ಜಾರಕಿಹೊಳಿ ಅವರು ತಮ್ಮ ಕೆಲಸದ ವೈಖರಿಯನ್ನು ಉದಾಹರಣೆಯಾಗಿ ನೀಡಿದ್ದಾರೆ. "ನೋಡಿ, ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ನಾನು ವಿರೋಧ ಪಕ್ಷದಲ್ಲಿದ್ದೆ. ಆದರೂ ಎಲ್ಲಿಯೂ ಅನುದಾನ ಇಲ್ಲ ಅಂತ ಕೂರಲಿಲ್ಲ. ನಮ್ಮ ಇಚ್ಛಾಶಕ್ತಿಯಿಂದ ಹಣ ತಂದು ನನ್ನ ಮತಕ್ಷೇತ್ರದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇನೆ. ಬೇಕಿದ್ದರೆ ದಡ್ಡಿ ಮತ್ತು ಹೆಬ್ಬಾಳ ಗ್ರಾಮದ ರಸ್ತೆಗಳನ್ನು ಒಮ್ಮೆ ಹೋಗಿ ನೋಡಿ ಬನ್ನಿ, ಕೆಲಸ ಹೇಗೆ ನಡೆದಿದೆ ಅಂತ ಗೊತ್ತಾಗುತ್ತೆ" ಎಂದು ಸವಾಲು ಹಾಕಿದ್ದಾರೆ.

"ಅಭಿವೃದ್ಧಿ ಮಾಡಬೇಕು ಎಂಬ ಛಲ ಇದ್ದರೆ ಖಂಡಿತಾ ಆಗುತ್ತೆ. ಆದರೆ ನಿಖಿಲ್ ಕತ್ತಿ ಅವರಿಗೆ ಆ ಇಚ್ಛಾಶಕ್ತಿ ಇದ್ದಂತಿಲ್ಲ. ಸುಮ್ಮನೆ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ" ಎಂದು ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಸರ್ಕಾರ ಇದ್ದರೂ ಜನರ ಕೆಲಸ ಮಾಡುವುದು ಒಬ್ಬ ಜನಪ್ರತಿನಿಧಿಯ ಕರ್ತವ್ಯ, ಅದನ್ನು ಬಿಟ್ಟು ಅನುದಾನದ ನೆಪ ಹೇಳುವುದು ಶೋಭೆ ತರುವುದಿಲ್ಲ ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.

ಸಂಕೇಶ್ವರದಲ್ಲಿ ಸಾಹುಕಾರನ ಹವಾ

ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ್ದ ಸಚಿವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಇದೇ ವೇಳೆ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆದಾಗ, ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಈಗ ನಿಖಿಲ್ ಕತ್ತಿ ವರ್ಸಸ್ ಸತೀಶ್ ಜಾರಕಿಹೊಳಿ ಎಂಬಂತಾಗಿದೆ. ಸಚಿವರ ಈ ಖಡಕ್ ಮಾತಿಗೆ ನಿಖಿಲ್ ಕತ್ತಿ ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕು.

Latest News