ನಾಳೆ ನಡೆಯಲಿರುವ ರಾಜ್ಯಸಭೆಯ ಉಪಸಭಾಪತಿ ಚುನಾವಣೆಗೆ ರಾಜಕೀಯ ವಲಯದಲ್ಲಿ ಈಗ ದೊಡ್ಡ ಚರ್ಚೆ ಶುರುವಾಗಿದೆ. ವಿಶೇಷ ಏನೆಂದರೆ, ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿ, ನಾವು ಯಾಕೆ ಈ ನಿರ್ಧಾರ ತಗೊಂಡಿದ್ದೇವೆ ಅನ್ನೋದಕ್ಕೆ ಮೂರು ಪ್ರಮುಖ ಕಾರಣಗಳನ್ನು ಕೊಟ್ಟಿದ್ದಾರೆ.
ಸರ್ಕಾರಕ್ಕೆ 'ಸಮಾಲೋಚನೆ' ಅಂದ್ರೆ ಗೊತ್ತಿಲ್ವಾ?
ಜೈರಾಮ್ ರಮೇಶ್ ಅವರ ಮೊದಲ ಆರೋಪವೇ ಇದು. ಸಾಮಾನ್ಯವಾಗಿ ಇಂತಹ ದೊಡ್ಡ ಸಾಂವಿಧಾನಿಕ ಹುದ್ದೆಗಳ ನೇಮಕಾತಿ ಮಾಡುವಾಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಒಂದು ಸೌಜನ್ಯದ ಚರ್ಚೆ ನಡೆಯಬೇಕು. "ಆದರೆ ಮೋದಿ ಸರ್ಕಾರ ಈ ಬಗ್ಗೆ ಯಾವುದೇ ಅರ್ಥಪೂರ್ಣ ಸಮಾಲೋಚನೆ ಮಾಡಿಲ್ಲ, ನಮ್ಮ ಅಭಿಪ್ರಾಯಕ್ಕೆ ಬೆಲೆಯೇ ಕೊಟ್ಟಿಲ್ಲ" ಅನ್ನೋದು ಕಾಂಗ್ರೆಸ್ ಮತ್ತು ವಿಪಕ್ಷಗಳ ಒಕ್ಕೊರಲ ದೂರು.
First, the Modi Govt has not appointed a Deputy Speaker in the Lok Sabha for 7 years. This has never happened before.
— Jairam Ramesh (@Jairam_Ramesh) April 16, 2026
Second, the Deputy Speaker’s counterpart in the Rajya Sabha is the Deputy Chairman. Shri Harivansh’s second term ended on April 9th. A day later he was nominated…
ವಿಪಕ್ಷಗಳು ಕೊಟ್ಟ ಆ 3 ಕಾರಣಗಳು ಇಲ್ಲಿವೆ
1. ಲೋಕಸಭೆಯಲ್ಲೇ ಇಲ್ದ ಮೇಲೆ ಇಲ್ಲಿ ಹೇಗೆ?
ಕಳೆದ 7 ವರ್ಷಗಳಿಂದ ಲೋಕಸಭೆಯಲ್ಲಿ ಉಪಸಭಾಪತಿ (Deputy Speaker) ಹುದ್ದೆಯೇ ಖಾಲಿ ಇದೆ. ಭಾರತದ ಸಂಸದೀಯ ಇತಿಹಾಸದಲ್ಲೇ ಇಷ್ಟು ದೀರ್ಘ ಕಾಲ ಈ ಹುದ್ದೆಯನ್ನು ಭರ್ತಿ ಮಾಡದೆ ಇರುವುದು ಇದೇ ಮೊದಲು. ಲೋಕಸಭೆಯಲ್ಲೇ ನಿಯಮ ಪಾಲಿಸದ ಸರ್ಕಾರಕ್ಕೆ ಈಗ ರಾಜ್ಯಸಭೆಯ ಬಗ್ಗೆ ಯಾಕೆ ಅಷ್ಟು ಆತುರ? ಅನ್ನೋದು ವಿಪಕ್ಷಗಳ ಪ್ರಶ್ನೆ.
2. ನಾಮನಿರ್ದೇಶಿತ ಸದಸ್ಯರಿಗೆ ಆದ್ಯತೆ ನೀಡಿದ್ದು ಸರಿನಾ?
ಇನ್ನು ಎರಡನೇ ಕಾರಣ ಸ್ವಲ್ಪ ತಾಂತ್ರಿಕವಾಗಿದೆ. ಹರಿವಂಶ್ ಅವರ ಎರಡನೇ ಅವಧಿ ಏಪ್ರಿಲ್ 9ಕ್ಕೆ ಮುಗಿದಿತ್ತು. ಬೆನ್ನಲ್ಲೇ ರಾಷ್ಟ್ರಪತಿಗಳು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ (Nominated) ಮಾಡಿದರು. ಹೀಗೆ ನಾಮನಿರ್ದೇಶನಗೊಂಡ ವ್ಯಕ್ತಿಯನ್ನು ಉಪಸಭಾಪತಿ ಹುದ್ದೆಗೆ ತರುವುದು ಸರಿಯಲ್ಲ, ಇದು ಈ ಹಿಂದೆಂದೂ ನಡೆದಿಲ್ಲ ಅನ್ನೋದು ಜೈರಾಮ್ ರಮೇಶ್ ವಾದ.
3. ಒಂಟಿ ನಿರ್ಧಾರದ ವಿರುದ್ಧ ಪ್ರತಿಭಟನೆ
ಯಾರನ್ನೂ ಕೇಳದೆ, ವಿಪಕ್ಷಗಳ ಮನವಿಯನ್ನು ಆಲಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. "ನಮಗೆ ಹರಿವಂಶ್ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಅಗೌರವ ಇಲ್ಲ. ಆದರೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲದ ಕಾರಣ ನಾವು ಅನಿವಾರ್ಯವಾಗಿ ಏಪ್ರಿಲ್ 17ರ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಳೆ ಏನಾಗಬಹುದು?
ಸದ್ಯದ ಪರಿಸ್ಥಿತಿ ನೋಡಿದರೆ ಆಡಳಿತಾರೂಢ ಎನ್ಡಿಎ (NDA) ಪರವಾಗಿ ಹರಿವಂಶ್ ಅವರೇ ಮರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ವಿರೋಧ ಪಕ್ಷಗಳು ಒಟ್ಟಾಗಿ ಈ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದು ಸರ್ಕಾರದ ಧೋರಣೆಗೆ ಒಂದು ರೀತಿಯ 'ಸೈಲೆಂಟ್' ಪ್ರತಿಭಟನೆಯಾಗಿದೆ.