May 9, 2026 Languages : ಕನ್ನಡ | English

ಗಾರ್ಡನ್ ಸಿಟಿ ಈಗ 'ಕ್ರೈಮ್ ಸಿಟಿ'ಯಾಗ್ತಿದೆಯಾ? NCRB ವರದಿಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ!!

ಬೆಂಗಳೂರು: ನಮ್ಮ ಬೆಂಗಳೂರು ಅಂದ್ರೆ ಐಟಿ-ಬಿಟಿ, ಗಾರ್ಡನ್ ಸಿಟಿ ಅಂತ ಹೆಮ್ಮೆಯಿಂದ ಹೇಳ್ತೀವಿ. ಆದರೆ ಮಹಿಳೆಯರ ಸುರಕ್ಷತೆ ವಿಷಯಕ್ಕೆ ಬಂದ್ರೆ ಮಾತ್ರ ನಗರದ ಸ್ಥಿತಿ ಅಷ್ಟೇನೂ ಸರಿ ಇಲ್ಲ ಅನ್ನೋದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ರ ಹೊಸ ವರದಿಯಿಂದ ಗೊತ್ತಾಗಿದೆ. ದೇಶದ 19 ಮಹಾನಗರಗಳ ಪೈಕಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಬೆಂಗಳೂರು ಈಗ 3ನೇ ಸ್ಥಾನದಲ್ಲಿದೆ!

ದೇಶದಲ್ಲೇ 3ನೇ ಸ್ಥಾನಕ್ಕೇರಿದ ಬೆಂಗಳೂರಿನ ಅಪರಾಧದ ಹಾದಿ | Photo Credit: AI
ದೇಶದಲ್ಲೇ 3ನೇ ಸ್ಥಾನಕ್ಕೇರಿದ ಬೆಂಗಳೂರಿನ ಅಪರಾಧದ ಹಾದಿ | Photo Credit: AI

ಅಂಕಿ-ಅಂಶಗಳು ಏನು ಹೇಳುತ್ತಿವೆ?

ವರದಿಯ ಪ್ರಕಾರ, ದೇಶದಲ್ಲೇ ಮಹಿಳೆಯರಿಗೆ ಅತಿ ಹೆಚ್ಚು ಅಪಾಯಕಾರಿಯಾಗಿರುವ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಎರಡನೇ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ಮೂರನೇ ಸ್ಥಾನಕ್ಕೆ ಬಂದು ನಿಂತಿದೆ.

ಒಟ್ಟು ಪ್ರಕರಣಗಳು: 2024ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,748 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಈ ಸಂಖ್ಯೆ 4,870 ಇತ್ತು. ಅಂದ್ರೆ ಕೇಸ್‌ಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆಯಾದರೂ, ಸ್ಥಾನದಲ್ಲಿ ಮಾತ್ರ ಬದಲಾವಣೆ ಇಲ್ಲ.

ಅತ್ಯಾಚಾರ ಪ್ರಕರಣಗಳು: ಕಳೆದ ವರ್ಷ 169 ಪ್ರಕರಣಗಳಿದ್ದರೆ, ಈ ಬಾರಿ 168 ದಾಖಲಾಗಿವೆ. ಒಂದು ಕೇಸ್ ಕಡಿಮೆಯಾಗಿದೆ ಅಷ್ಟೇ, ಇದನ್ನ ದೊಡ್ಡ ಮಟ್ಟದ ಇಳಿಕೆ ಅಂತ ಹೇಳೋಕೆ ಆಗಲ್ಲ.

ಲೈಂಗಿಕ ಕಿರುಕುಳ: ಕಿರುಕುಳ ಪ್ರಕರಣಗಳು 210ರಿಂದ 180ಕ್ಕೆ ಇಳಿದಿರುವುದು ಸ್ವಲ್ಪ ಸಮಾಧಾನದ ಸಂಗತಿ.

ದೌರ್ಜನ್ಯದಲ್ಲಿ ಬೆಂಗಳೂರೇ ಮೊದಲು!

ಇಡೀ ದೇಶದಲ್ಲೇ ಮಹಿಳೆಯರ ಮೇಲಿನ ಹಲ್ಲೆ ಅಥವಾ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂಬುದು ನಿಜಕ್ಕೂ ಆತಂಕಕಾರಿ ವಿಷಯ. ಇಲ್ಲಿ ಅಂತಹ ಸುಮಾರು 897 ಪ್ರಕರಣಗಳು ವರದಿಯಾಗಿವೆ. ಇನ್ನು ವರದಕ್ಷಿಣೆ ಸಾವುಗಳ ಪಟ್ಟಿಯಲ್ಲಿ ಜೈಪುರದ ಜೊತೆ ಸೇರಿ ಬೆಂಗಳೂರು 4ನೇ ಸ್ಥಾನದಲ್ಲಿದೆ.

NCRB ವರದಿಯ ಪ್ರಕಾರ, ಮಹಾನಗರಗಳಲ್ಲಿ ನಡೆಯುವ ಮಹಿಳಾ ಅಪರಾಧಗಳಲ್ಲಿ ಶೇ. 28.4ರಷ್ಟು ಕೇಸ್‌ಗಳು ಪತಿ ಅಥವಾ ಸಂಬಂಧಿಕರಿಂದ ನಡೆಯುವ ಕ್ರೌರ್ಯಕ್ಕೆ ಸಂಬಂಧಿಸಿವೆ. ಕಿಡ್ನಾಪ್ ಪ್ರಕರಣಗಳು ಶೇ. 20.1ರಷ್ಟಿದ್ದರೆ, ಇನ್ನುಳಿದವು ಇತರ ದೌರ್ಜನ್ಯಗಳಾಗಿವೆ.

ವರದಿ ಬಗ್ಗೆ ಮಹಿಳಾ ಸಂಘಟನೆಗಳ ಆಕ್ಷೇಪ

ಪೊಲೀಸರು ಎಷ್ಟು ಕ್ರಮ ಕೈಗೊಂಡರೂ ಅಪರಾಧಗಳು ಯಾಕೆ ಕಡಿಮೆಯಾಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ನಾಯಕಿ ವಿಮಲಾ ಕೆ.ಎಸ್. ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

"ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಕಡಿಮೆಯಾಗಿವೆ ಎಂಬ ವರದಿಯನ್ನು ನಂಬಲು ಕಷ್ಟ. ಪ್ರತಿದಿನ ಪತ್ರಿಕೆಗಳಲ್ಲಿ ಲೈಂಗಿಕ ದೌರ್ಜನ್ಯದ ಸುದ್ದಿಗಳು ಬರ್ತಾನೇ ಇವೆ. ಬಹುಶಃ ಎಷ್ಟೋ ಪ್ರಕರಣಗಳು ದಾಖಲೇ ಆಗ್ತಿಲ್ಲವೋ ಅಥವಾ ಯಾವುದೋ ಒತ್ತಡಕ್ಕೆ ಮುಚ್ಚಿಹಾಕಲಾಗುತ್ತಿದೆಯೋ ಎಂಬ ಸಂಶಯವಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಸಂತ್ರಸ್ತರು ಭರವಸೆ ಕಳೆದುಕೊಳ್ಳುತ್ತಿದ್ದಾರೆ," ಎನ್ನುವುದು ಅವರ ಅಭಿಪ್ರಾಯ.

ನಾವು ಎಚ್ಚೆತ್ತುಕೊಳ್ಳಬೇಕಿದೆ!

ಪೊಲೀಸರು 'ಪಿಂಕ್ ಹೊಯ್ಸಳ', 'ಸುರಕ್ಷಾ ಆ್ಯಪ್' ಅಂತೆಲ್ಲಾ ಹೊಸ ಸೌಲಭ್ಯ ತರುತ್ತಿದ್ದಾರೆ. ಆದರೆ ಕೇವಲ ಸೌಲಭ್ಯಗಳಿಂದ ಮಹಿಳೆಯರ ಸುರಕ್ಷತೆ ಸಾಧ್ಯವಿಲ್ಲ. ಸಮಾಜದ ಮನಸ್ಥಿತಿ ಬದಲಾಗಬೇಕಿದೆ ಮತ್ತು ಕಾನೂನು ಅತಿ ವೇಗವಾಗಿ ಕೆಲಸ ಮಾಡಬೇಕಿದೆ. ಬೆಂಗಳೂರು ನಗರ ನಮಗೆ ಎಷ್ಟು ಮುಖ್ಯವೋ, ಇಲ್ಲಿನ ಮಹಿಳೆಯರ ಗೌರವ ಮತ್ತು ಸುರಕ್ಷತೆಯೂ ಅಷ್ಟೇ ಮುಖ್ಯ.

Latest News