Apr 21, 2026 Languages : ಕನ್ನಡ | English

ಲೋಕಸಭೆಯಲ್ಲಿ ಇನ್ಮುಂದೆ 816 ಸೀಟುಗಳು - ಮಹಿಳೆಯರಿಗಾಗಿಯೇ ಮೀಸಲಿವೆ 273 ಸ್ಥಾನ!!

ನಮ್ಮ ದೇಶ ಈಗ ಒಂದು ಐತಿಹಾಸಿಕ ಬದಲಾವಣೆಯ ಹೊಸ್ತಿಲಲ್ಲಿದೆ. ದಶಕಗಳಿಂದ ಕೇವಲ ಚರ್ಚೆಯಾಗುತ್ತಿದ್ದ ‘ಮಹಿಳಾ ಮೀಸಲಾತಿ’ ಈಗ ಹತ್ತಿರವಾಗುತ್ತಿದೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸೀಟುಗಳನ್ನು ಮೀಸಲಿಡುವ ‘ನಾರಿ ಶಕ್ತಿ ವಂದನ ಅಧಿನಿಯಮ’ಕ್ಕೆ ಮಹತ್ವದ ತಿದ್ದುಪಡಿ ತರಲಾಗುತ್ತಿದ್ದು, ಇದು 2029 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಇದು ಕೇವಲ ಕಾನೂನಲ್ಲ, ಭಾರತದ ಪುತ್ರಿಯರು ತಮ್ಮ ಹಕ್ಕಿಗಾಗಿ ಇನ್ನು ಕಾಯುವ ಅಗತ್ಯವಿಲ್ಲ ಎನ್ನುವ ಭರವಸೆ.

ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಹೊಸ ರೂಪ
ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಹೊಸ ರೂಪ

ಬರುವ ಏಪ್ರಿಲ್ 16, 17 ಮತ್ತು 18ರಂದು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ಮುದ್ರೆ ಬೀಳಲಿದೆ. ಹೊಸ ಪ್ಲಾನ್ ಪ್ರಕಾರ, ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 816ಕ್ಕೆ ಏರಿಸಲಾಗುವುದು. ವಿಶೇಷ ಅಂದ್ರೆ, ಇದರಲ್ಲಿ 273 ಸೀಟುಗಳು ಮಹಿಳೆಯರಿಗೇ ಮೀಸಲಿರುತ್ತವೆ! 2023ರಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾದಾಗ ಇಟ್ಟ ಮೊದಲ ಹೆಜ್ಜೆ ಈಗ ದೊಡ್ಡ ಮೈಲುಗಲ್ಲಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಹೊಸ ಕಳೆ ತರಲಿದೆ.

ಆಡಳಿತದಲ್ಲಿ ಮಹಿಳೆಯರ ಮ್ಯಾಜಿಕ್

ಗಮನಿಸಿ ನೋಡಿ, ಇವತ್ತು ನಮ್ಮ ದೇಶದಲ್ಲಿ ರಾಷ್ಟ್ರಪತಿಯಿಂದ ಹಿಡಿದು ಹಣಕಾಸು ಸಚಿವರವರೆಗೆ ಮಹಿಳೆಯರೇ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಂತೂ ಸುಮಾರು 14 ಲಕ್ಷ ಮಹಿಳೆಯರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ ಪಂಚಾಯತ್‌ಗಳಲ್ಲಿ ಶೇ.50 ರಷ್ಟು ಮಹಿಳೆಯರೇ ಇದ್ದಾರೆ. ಈ ಶಕ್ತಿ ಈಗ ಸಂಸತ್ತಿನವರೆಗೂ ಹಬ್ಬಬೇಕಿದೆ.

ಯಾವಾಗ ನಿರ್ಧಾರ ತೆಗೆದುಕೊಳ್ಳುವ ಜಾಗದಲ್ಲಿ ಮಹಿಳೆಯರು ಇರುತ್ತಾರೋ, ಆಗ ವ್ಯವಸ್ಥೆಯಲ್ಲಿ ಒಂದು ‘ಸೂಕ್ಷ್ಮತೆ’ ಬರುತ್ತದೆ. ಶಿಕ್ಷಣ, ಆರೋಗ್ಯ, ನೀರು ಮತ್ತು ಪೌಷ್ಟಿಕಾಂಶದಂತಹ ಮೂಲಭೂತ ವಿಷಯಗಳಲ್ಲಿ ಕೆಲಸ ವೇಗವಾಗಿ ನಡೆಯುತ್ತದೆ. ಇದಕ್ಕೆ 'ಜಲ ಜೀವನ್ ಮಿಷನ್' ಯಶಸ್ಸೇ ಸಾಕ್ಷಿ.

ಬದಲಾವಣೆ ಇಂದೇ ಶುರು!

ಮಹಿಳಾ ಸಬಲೀಕರಣ ಅಂದ್ರೆ ಅದು ಬರೀ ಭಾಷಣವಲ್ಲ. 2014 ರಿಂದ ಸರ್ಕಾರವು ಹೆಣ್ಣು ಮಗುವಿನ ಪ್ರತಿಯೊಂದು ಹಂತಕ್ಕೂ ಯೋಜನೆಗಳನ್ನು ರೂಪಿಸಿದೆ:

ಬೇಟಿ ಬಚಾವೋ ಬೇಟಿ ಪಢಾವೋ: ಹೆಣ್ಣು ಮಕ್ಕಳ ರಕ್ಷಣೆಗಾಗಿ.

ಸುಕನ್ಯಾ ಸಮೃದ್ಧಿ: ಶಿಕ್ಷಣ ಮತ್ತು ಭವಿಷ್ಯದ ಆರ್ಥಿಕ ಭದ್ರತೆಗಾಗಿ.

ಮಾತೃ ವಂದನಾ: ಗರ್ಭಿಣಿಯರಿಗೆ 5,000 ರೂ. ಆರ್ಥಿಕ ನೆರವು.

ಮುದ್ರಾ ಯೋಜನೆ: ಸ್ವಂತ ಉದ್ಯಮ ಆರಂಭಿಸಲು ಸಾಲದ ಸೌಲಭ್ಯ.

ಪಂಚಾಯತ್‌ನಿಂದ ಸಂಸತ್ತಿನವರೆಗೆ..

ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಇರುವ ಲಕ್ಷಾಂತರ ಮಹಿಳೆಯರು ಈಗ ದೊಡ್ಡ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ. ಈ ಹೊಸ ಕಾನೂನು ಅವರಿಗೆ ದೆಹಲಿಯ ಸಂಸತ್ತಿನವರೆಗೂ ದಾರಿ ಮಾಡಿಕೊಡಲಿದೆ. ಇದು ಮಹಿಳೆಯರ ಗೌರವಕ್ಕೆ ನೀಡುತ್ತಿರುವ ನಿಜವಾದ ಕಾಣಿಕೆ.

ದೇಶದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳಿಗೆ ಒಂದು ಮಾತು—ನಿಮ್ಮ ಕನಸುಗಳನ್ನು ನನಸು ಮಾಡಲು ಸರ್ಕಾರ ನಿಮ್ಮ ಜೊತೆಗಿದೆ. ಈ ಪ್ರಕ್ರಿಯೆಯಲ್ಲಿ ನೀವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ. ನಿಮ್ಮ ಭಾಗದ ಸಂಸದರನ್ನು ಭೇಟಿ ಮಾಡಿ, ನಿಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳಿ. ಪ್ರಜಾಪ್ರಭುತ್ವದಲ್ಲಿ ನಿಮ್ಮ ಧ್ವನಿ ಎಷ್ಟು ಗಟ್ಟಿಯಾಗುತ್ತದೋ, ದೇಶ ಅಷ್ಟು ಬೇಗ 'ವಿಕಸಿತ ಭಾರತ'ವಾಗುತ್ತದೆ.