Mar 29, 2026 Languages : ಕನ್ನಡ | English

640 ಬಾಕ್ಸ್‌ಗಳ ಮದ್ಯ ಎಲ್ಲಿ ಹೋಯಿತು? ರಾಮನಗರದಲ್ಲಿ ಬಯಲಾಯ್ತು ಅಕ್ರಮ ಮದ್ಯದ ಜಾಲ!!

ಸರ್ಕಾರಿ ಅಧಿಕಾರಿಗಳ ಕೈಯಲ್ಲೇ ಅವಧಿ ಮೀರಿದ ಮದ್ಯ (Expired Liquor) ಸಿಕ್ಕಿಬಿದ್ದರೆ ಹೇಗಿರುತ್ತದೆ? ರಾಮನಗರದಲ್ಲಿ ಸದ್ಯ ಇದೇ ತರದ ಒಂದು ಅಕ್ರಮ ಪ್ರಕರಣ ಬಯಲಾಗಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ (KSBC) ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಿರುವ ಈ ಕೆಲಸ ಮದ್ಯ ಪ್ರಿಯರ ನಿದ್ದೆಗೆಡಿಸಿದೆ.

ಸರ್ಕಾರಿ ಅಧಿಕಾರಿಗಳೇ ಮದ್ಯದ ಕಳ್ಳರು
ಸರ್ಕಾರಿ ಅಧಿಕಾರಿಗಳೇ ಮದ್ಯದ ಕಳ್ಳರು

ರಾಮನಗರದ ಅರ್ಚಕರಹಳ್ಳಿ ಬಳಿ ಇರುವ ಕರ್ನಾಟಕ ಪಾನೀಯ ನಿಗಮದ ಗೋದಾಮಿನಲ್ಲಿ ಹಲವು ದಿನಗಳಿಂದ ಈ ದಂಧೆ ನಡೀತಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಬೇರೆ ಬೇರೆ ಕಡೆ ದಾಳಿ ಮಾಡಿ, ಅವಧಿ ಮೀರಿದ ಬಿಯರ್ ಮತ್ತು ವೋಡ್ಕಾ ಬಾಟಲಿಗಳನ್ನು ಸೀಜ್ ಮಾಡಿದ್ದರು. ಈ ಮದ್ಯವನ್ನು ನಿಯಮದಂತೆ ನಾಶಪಡಿಸಬೇಕಿತ್ತು. ಅಬಕಾರಿ ಡಿಸಿ ಕೂಡ ಇದನ್ನು ನಾಶಪಡಿಸಲು ಸೂಚನೆ ಕೊಟ್ಟಿದ್ದರು.

ಆದರೆ, ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಆ ಹಣಕ್ಕೆ ಆಸೆ ಬಿದ್ದು, ತಾವೇ ಒಂದು ಪ್ಲಾನ್ ಮಾಡಿದರು. ದಾಳಿ ವೇಳೆ ಸೀಜ್ ಮಾಡಿದ 640 ಬಾಕ್ಸ್ ಮದ್ಯದಲ್ಲಿ, 20 ಬಾಕ್ಸ್ ಮದ್ಯವನ್ನು ನಾಶಪಡಿಸದೆಯೇ ಗೋದಾಮಿನಿಂದ ಕದ್ದು ತಮ್ಮ ಮನೆಗೆ ಸಾಗಿಸುತ್ತಿದ್ದರು.

ಈ ದಂಧೆಯನ್ನು ಎಷ್ಟು ಚಾಲಾಕಿಯಾಗಿ ಮಾಡಿದ್ದಾರೆ ಅಂದ್ರೆ, ಯಾರಿಗೂ ಗೊತ್ತಾಗದಂತೆ ಗೋದಾಮಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿಸಿ, ಈ ಬಾಕ್ಸ್‌ಗಳನ್ನು ಲಾರಿಗಳಲ್ಲಿ ಸಾಗಿಸಿ ಸೂಪರ್ ವೈಸರ್ ಸುರೇಶ್ ಮನೆಗೆ ತಲುಪಿಸುತ್ತಿದ್ದರು. ಈ 20 ಬಾಕ್ಸ್‌ಗಳಲ್ಲಿ ಕಿಂಗ್ ಫಿಶರ್, ಯುಬಿ ಎಕ್ಸ್‌ಪರ್ಟ್ ಬಿಯರ್ ಮತ್ತು ಮ್ಯಾಜಿಕ್ ಮೂಮೆಂಟ್ ವೋಡ್ಕಾದಂತಹ ಮದ್ಯಗಳಿದ್ದವು. ಇವುಗಳ ಅವಧಿ ಮುಗಿದು 3-4 ತಿಂಗಳು ಕಳೆದಿದ್ದರೂ, ಹಳ್ಳಿಗಾಡಿನ ಕಡೆ ಸಪ್ಲೈ ಮಾಡಿ ಹಣ ಸಂಪಾದಿಸೋದು ಇವರ ಉದ್ದೇಶವಾಗಿತ್ತು.

ಪೊಲೀಸರ ಎಂಟ್ರಿ, ಸೂಪರ್ ವೈಸರ್ ಅರೆಸ್ಟ್!

ವಿಷಯ ತಿಳಿದು ಐಜೂರು ಠಾಣೆ ಪೊಲೀಸರು ದಾಳಿ ನಡೆಸಿದಾಗ ಅಸಲಿ ವಿಷಯ ಬಯಲಾಯಿತು. ಸೂಪರ್ ವೈಸರ್ ಸುರೇಶ್ (52) ಮನೆಯಲ್ಲಿ 20 ಬಾಕ್ಸ್ ಅವಧಿ ಮೀರಿದ ಮದ್ಯ ಪತ್ತೆಯಾಗಿದೆ. ಪೊಲೀಸರು ತಕ್ಷಣ ಆತನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಗೋದಾಮಿನ ಉಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೀತಿದೆ.

ಮದ್ಯ ಪ್ರಿಯರೇ ಎಚ್ಚರ!

ಈ ಘಟನೆ ಈಗ ಇಲಾಖೆಯ ಹಿರಿಯ ಅಧಿಕಾರಿಗಳನ್ನೂ ಬೆಚ್ಚಿ ಬೀಳಿಸಿದೆ. ಬಾರ್‌ಗಳಲ್ಲಿ ಅಥವಾ ಗ್ರಾಮೀಣ ಅಂಗಡಿಗಳಲ್ಲಿ ಮದ್ಯ ಕೊಳ್ಳುವಾಗ ಈ ವಿಷಯ ನಿಮಗೆ ಎಚ್ಚರಿಕೆ ಗಂಟೆಯಾಗಬೇಕು. ಅವಧಿ ಮೀರಿದ ಮದ್ಯ ಕುಡಿದರೆ ಆರೋಗ್ಯ ಹಾಳಾಗೋದು ಗ್ಯಾರಂಟಿ. ಅದಕ್ಕಾಗಿಯೇ ಯಾವಾಗಲೂ ಸೀಲ್ ಆಗಿರುವ, ಸರಿಯಾದ ಎಕ್ಸ್‌ಪೈರಿ ಡೇಟ್ ನೋಡಿ ಮದ್ಯ ಕೊಳ್ಳೋದು ಒಳ್ಳೆಯದು.

ಸರ್ಕಾರಿ ನೌಕರರೇ ಇಂತಹ ಕೆಲಸಕ್ಕೆ ಕೈ ಹಾಕಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹಣಕ್ಕಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು.