ಬೆಂಗಳೂರು: ಕಳ್ಳರು ಈಗಾಗಲೇ ಹೊಸ ಹೊಸ ಪ್ರಯತ್ನಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡಿರುವ ಘಟನಗೆಳು ನಮ್ಮ ಕಣ್ಣ ಮುಂದೆ ಸಾಕಷ್ಟು ನಡೆದಿವೆ. ಹೆಚ್ಚು ಕಳ್ಳತನ ಪ್ರಕರಣಗಳು, ಬರಿ ದುಡ್ಡು ಬಂಗಾರ ಕಳ್ಳತನ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇದೀಗ ಕಂಡು ಬಂದಿರುವ ಘಟನೆ ನಿಜಕ್ಕೂ ಎಲ್ಲರನ್ನೂ ಬೆರಗಾಗಿಸಿದೆ ಕಾರಣ ಇವರು ಕಳ್ಳತನ ಮಾಡಿರುವ ವಸ್ತು ಏನು ಎಂದು ನೀವೇ ನೋಡಿ. ಹೌದು ಜೆ.ಬಿ ನಗರದಲ್ಲಿ ನಡೆದ ವಿಚಿತ್ರ ಕಳ್ಳತನದಿಂದ ಜನರು ಬೆಚ್ಚಿಬಿದ್ದಿದ್ದಾರೆ. “ಚಿನ್ನ ಅಲ್ಲ, ಬೆಳ್ಳಿ ಅಲ್ಲ, ಮನೆಯ ಮುಂದಿನ ಶೂಗಳಿಗೂ ಕನ್ನ ಹಾಕ್ತಾರಾ?” ಎಂಬ ಪ್ರಶ್ನೆ ನಿವಾಸಿಗಳಲ್ಲಿ ಕೇಳಿಬರುತ್ತಿದೆ.
ಹೌದು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಇಬ್ಬರು ಖದೀಮರು ಬೈಕ್ನಲ್ಲಿ ಬಂದು, ಮನೆ ಮುಂದೆ ಇಟ್ಟಿದ್ದ ಕಾಸ್ಟ್ಲೀ ಶೂಗಳನ್ನು ಎತ್ತಿಕೊಂಡು ಪರಾರಿಯಾದರು. ಇದು ಮೊದಲ ಬಾರಿಗೆ ನಡೆದ ಘಟನೆ ಅಲ್ಲ. ಇದೇ ಪ್ರದೇಶದಲ್ಲಿ ಎರಡನೇ ಬಾರಿ ಇಂತಹ ಕಳ್ಳತನ ನಡೆದಿರುವುದರಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮನೆಯಲ್ಲಿ ಜನ ಇದ್ದರೂ, ಖದೀಮರು ಧೈರ್ಯವಾಗಿ ಬಂದು ಶೂಗಳನ್ನು ಕದ್ದಿದ್ದಾರೆ. ಗೇಟ್ ತೆರೆದು, ಅತ್ತ ಇತ್ತ ನೋಡಿಕೊಂಡು ಕ್ಷಣಾರ್ಧದಲ್ಲಿ ಶೂಗಳನ್ನು ಎತ್ತಿಕೊಂಡು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಜನರಲ್ಲಿ ಹೊಸ ಆತಂಕವನ್ನು ಹುಟ್ಟಿಸಿದೆ. ಸಾಮಾನ್ಯವಾಗಿ ಕಳ್ಳತನವೆಂದರೆ ಚಿನ್ನ, ಬೆಳ್ಳಿ, ಹಣ ಅಥವಾ ವಾಹನಗಳ ಬಗ್ಗೆ ಕೇಳಿಬರುತ್ತಿತ್ತು. ಆದರೆ ಈಗ ಶೂ-ಚಪ್ಪಲಿಗೂ ಕನ್ನ ಹಾಕುತ್ತಿರುವುದು ಜನರಲ್ಲಿ ಅಸುರಕ್ಷಿತ ಭಾವನೆ ಮೂಡಿಸಿದೆ. ಸ್ಥಳೀಯರು “ಶೂ ಚಪ್ಪಲಿಯನ್ನೂ ಬಿಡಲ್ಲ ಅಂದರೆ ಬದುಕೋದು ಹೇಗೆ?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಖದೀಮರನ್ನು ಪತ್ತೆಹಚ್ಚಬೇಕೆಂಬ ಬೇಡಿಕೆ ಜನರಿಂದ ಕೇಳಿಬರುತ್ತಿದೆ.
ಒಟ್ಟಾರೆ ಹೇಳಬೇಕು ಅಂದರೆ, ಜೆ.ಬಿ ನಗರದಲ್ಲಿ ನಡೆದ ಕಾಸ್ಟ್ಲೀ ಶೂಗಳ ಕಳ್ಳತನವು ಜನರಲ್ಲಿ ಆಕ್ರೋಶ, ಭಯ ಮತ್ತು ಬೇಸರ ಮೂಡಿಸಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಖದೀಮರನ್ನು ಪತ್ತೆಹಚ್ಚಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.