Apr 9, 2026 Languages : ಕನ್ನಡ | English

ರೈಲ್ವೆ ಮಂತ್ರಿಯಾಗ್ತಾರಾ ಕುಮಾರಣ್ಣ? ಕೇಂದ್ರ ಸಚಿವರ ಜೊತೆ ಹೆಚ್‌ಡಿಕೆ ನಡೆಸಿದ ಹೈಟೆಕ್ ಪರಿಶೀಲನೆ!!

ಚನ್ನಪಟ್ಟಣದ ಕೆ. ಶೆಟ್ಟಹಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಅಭಿವೃದ್ಧಿ, ಎಲೆಕ್ಷನ್ ಮತ್ತು ಖರ್ಗೆ ಅವರ ಹೇಳಿಕೆಗಳ ಬಗ್ಗೆ ತಮ್ಮ ಮನದಾಳ ಹಂಚಿಕೊಂಡರು.

ಹಳಿ ಪಕ್ಕದ ಮೇಲ್ಸೇತುವೆ ಸಮಸ್ಯೆಗೆ ಶೀಘ್ರವೇ ಮುಕ್ತಿ
ಹಳಿ ಪಕ್ಕದ ಮೇಲ್ಸೇತುವೆ ಸಮಸ್ಯೆಗೆ ಶೀಘ್ರವೇ ಮುಕ್ತಿ

"ಇವತ್ತು ನಾವು ಬೆಂಗಳೂರು-ಮೈಸೂರು ರೈಲ್ವೆ ಲೈನ್ ಚೆಕ್ ಮಾಡ್ತಿದ್ದೀವಿ. ಹಳಿಗಳ ಪಕ್ಕದಲ್ಲಿ ಕೆಲವು ಕಡೆ ಈ ಲೆವೆಲ್ ಕ್ರಾಸಿಂಗ್ ಮತ್ತೆ ಮೇಲ್ಸೇತುವೆಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನರಿಗೆ ಓಡಾಡೋಕೆ ತುಂಬಾನೇ ತೊಂದರೆ ಆಗ್ತಿರೋದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕೇ ನಾನೇ ಖುದ್ದಾಗಿ ಕೇಂದ್ರ ಸಚಿವರ ಜೊತೆ ಟ್ರಾವೆಲ್ ಮಾಡಿ, ಎಲ್ಲೆಲ್ಲಿ ಏನೇನು ತಾಂತ್ರಿಕ ತೊಂದರೆ ಇದೆ ಅಂತ ಹತ್ತಿರದಿಂದ ನೋಡ್ತಿದ್ದೇನೆ. ಈ ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಒಂದು ಒಳ್ಳೆಯ ಪರಿಹಾರ ಕೊಡಿಸ್ತೀವಿ," ಎಂದು ಭರವಸೆ ನೀಡಿದರು.

ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಇಂದು ನಡೆಯುತ್ತಿರುವ ಉಪಚುನಾವಣೆಯ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಜೋರಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರುವುದು ನಿಜ. ಆದರೆ, ನಮ್ಮ ಮೈತ್ರಿ ಅಭ್ಯರ್ಥಿಗಳು ಜನರ ಬೆಂಬಲದೊಂದಿಗೆ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ, ಎಂದು ಮೈತ್ರಿ ಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ಮತ್ತು ಆರ್‌ಎಸ್ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ಹೇಳಿಕೆಗೆ ಕುಮಾರಸ್ವಾಮಿ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆತ್ಮವಿಮರ್ಶೆ ಮಾಡಿಕೊಳ್ಳಲಿ: "ಖರ್ಗೆ ಅವರು ರಾಜಕೀಯದಲ್ಲಿ ತುಂಬಾ ಅನುಭವ ಇರುವವರು. ಅಂತಹ ಹಿರಿಯರು ಇಂತಹ ಪದಗಳನ್ನು ಬಳಸುವ ಮೊದಲು ಸ್ವಲ್ಪ ಯೋಚನೆ ಮಾಡಬೇಕಿತ್ತು. ಅವರ ಹೇಳಿಕೆಗಳ ಬಗ್ಗೆ ಅವರೇ ಒಮ್ಮೆ ಆತ್ಮವಿಮರ್ಷೆ ಮಾಡಿಕೊಳ್ಳುವುದು ಒಳ್ಳೆಯದು," ಎಂದಿದ್ದಾರೆ.

ಕಾಂಗ್ರೆಸ್ ಕಾನೂನು ಏನನ್ನುತ್ತೆ?: "ಇದೇ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಇಂತಹ ವಿವಾದಾತ್ಮಕ ಪದಬಳಕೆ ಅಥವಾ ಅವಹೇಳನಕಾರಿ ಮಾತುಗಳ ವಿರುದ್ಧ ಕಠಿಣ ಕಾನೂನು ತಂದಿದೆ ಅಲ್ವಾ? ಈಗ ಅವರದ್ದೇ ಪಕ್ಷದ ನಾಯಕರು ಇಂತಹ ಮಾತುಗಳನ್ನು ಆಡಿದ್ದಾರೆ. ಈಗ ಆ ಕಾನೂನಿನ ಅಡಿಯಲ್ಲಿ ಈ ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ನಾವೆಲ್ಲಾ ಕಾದು ನೋಡಬೇಕಿದೆ," ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿ ಅವರು ರೈಲ್ವೆ ಯೋಜನೆಯ ಮೂಲಕ ಜನರ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಲೇ, ಇತ್ತ ಉಪಚುನಾವಣೆಯ ಗೆಲುವಿನ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಅವರದ್ದೇ ಸರ್ಕಾರದ ಕಾನೂನುಗಳನ್ನು ನೆನಪಿಸುವ ಮೂಲಕ ಚತುರ ರಾಜಕೀಯ ದಾಳ ಉರುಳಿಸಿದ್ದಾರೆ.

ಚನ್ನಪಟ್ಟಣದ ಜನರೊಂದಿಗೆ ಬೆರೆತ ಕುಮಾರಣ್ಣ, ಜನರ ಕಷ್ಟಗಳಿಗೆ ಸ್ಪಂದಿಸುವುದು ಮತ್ತು ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡುವುದು ನಮ್ಮ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದ್ದಾರೆ.

Latest News