ಗುಜರಾತ್ ರಾಜ್ಯದಲ್ಲಿ ನಡೆದ ಅಪರೂಪದ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಕೇರೆ ಹಾವು ಚಲಿಸುತ್ತಿದ್ದ ವೇಳೆ ಅಕಸ್ಮಾತ್ ವಿದ್ಯುತ್ ಶಾಕ್ ಹೊಡೆದು, ಇನ್ನೇನು ಅಸು ನೀಗುವ ಸ್ಥಿತಿಗೆ ತಲುಪಿತ್ತು. ಹಾವು ಚಲನೆ ನಿಂತು, ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇದ್ದುದನ್ನು ಸ್ಥಳೀಯರು ಗಮನಿಸಿದರು. ಈ ವಿಷಯವನ್ನು ತಕ್ಷಣವೇ ಸ್ಥಳೀಯ ಉರಗ ಸಂರಕ್ಷಕ ಮುಕೇಶ್ ಅವರಿಗೆ ತಿಳಿಸಲಾಯಿತು. ಸ್ಥಳಕ್ಕೆ ಧಾವಿಸಿದ ಮುಕೇಶ್, ಹಾವಿನ ಸ್ಥಿತಿ ಗಂಭೀರವಾಗಿರುವುದನ್ನು ಕಂಡು ತಕ್ಷಣವೇ ಸಿ.ಪಿ.ಆರ್ (Cardio Pulmonary Resuscitation) ಚಿಕಿತ್ಸೆ ನೀಡಿದರು. ಸಾಮಾನ್ಯವಾಗಿ ಮಾನವರಿಗೆ ನೀಡುವ ಈ ತುರ್ತು ಚಿಕಿತ್ಸೆ, ಹಾವಿಗೆ ನೀಡಿದಾಗ ಅದ್ಭುತವಾಗಿ ಪರಿಣಾಮಕಾರಿಯಾಯಿತು.
ಮುಕೇಶ್ ಅವರ ತ್ವರಿತ ಕ್ರಮದಿಂದ ಹಾವು ಮತ್ತೆ ಉಸಿರಾಟ ಆರಂಭಿಸಿ, ನಿಧಾನವಾಗಿ ಚಲನೆ ಪುನಃ ಪಡೆಯಿತು. ಹಾವಿನ ಜೀವ ಉಳಿದಿರುವುದನ್ನುಕಂಡ ಸ್ಥಳೀಯರು ಆಶ್ಚರ್ಯಗೊಂಡು, ಮುಕೇಶ್ ಅವರ ಧೈರ್ಯ ಹಾಗೂ ತಜ್ಞತೆಯನ್ನು ಶ್ಲಾಘಿಸಿದರು. ಪ್ರಕೃತಿಯ ಜೀವಿಗಳ ಸಂರಕ್ಷಣೆಗಾಗಿ ಮುಕೇಶ್ ಅವರ ಈ ಕಾರ್ಯವು ಮಾದರಿಯಾಗಿದೆ. ಸಾಮಾನ್ಯವಾಗಿ ಹಾವುಗಳ ಬಗ್ಗೆ ಜನರಲ್ಲಿ ಭಯವಿದ್ದರೂ, ಅವು ಪರಿಸರ ಸಮತೋಲನಕ್ಕೆ ಅತ್ಯಂತ ಮುಖ್ಯವಾದ ಜೀವಿಗಳು. ಹಾವುಗಳ ಸಂರಕ್ಷಣೆ, ಪರಿಸರದ ಆರೋಗ್ಯಕ್ಕೆ ಅಗತ್ಯವೆಂದು ತಜ್ಞರು ಹೇಳುತ್ತಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮುಕೇಶ್ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. “ಹಾವುಗಳಿಗೂ ಜೀವ ಉಳಿಸುವ ಹಕ್ಕಿದೆ” ಎಂಬ ಸಂದೇಶವನ್ನು ಈ ಘಟನೆ ಸಾರುತ್ತಿದೆ. ಗುಜರಾತ್ನಲ್ಲಿ ನಡೆದ ಈ ಅಪರೂಪದ ಘಟನೆ, ಮಾನವೀಯತೆ ಹಾಗೂ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.