Apr 7, 2026 Languages : ಕನ್ನಡ | English

ಗೋವಾದಲ್ಲಿ ಮಿನಿ ಕೂಪರ್ ಅಟ್ಟಹಾಸ - ರಿಬ್ಬನ್ ಕತ್ತರಿಸುವ ಮುನ್ನವೇ ಯುವತಿಯ ಪ್ರಾಣ ಹೀರಿದ ಐಶಾರಾಮಿ ಕಾರು!!

ಗೋವಾ ಅಂದ ಕೂಡಲೇ ನೆನಪಾಗೋದು ಅಲ್ಲಿನ ಸುಂದರ ರಸ್ತೆಗಳು ಮತ್ತು ಪ್ರವಾಸೋದ್ಯಮ. ಆದರೆ ಅದೇ ರಸ್ತೆಗಳು ಈಗ ರಕ್ತಸಿಕ್ತವಾಗಿವೆ. ಭಾನುವಾರ ರಾತ್ರಿ ಗೋವಾದಲ್ಲಿ ನಡೆದ ಒಂದು ಭೀಕರ ಅಪಘಾತದಲ್ಲಿ 23 ವರ್ಷದ ಯುವತಿಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ. ಅತಿ ವೇಗವಾಗಿ ಬಂದ ಐಶಾರಾಮಿ 'ಮಿನಿ ಕೂಪರ್' ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ.

50 ಮೀಟರ್ ದೂರಕ್ಕೆ ಹಾರಿ ಬಿದ್ದ ಯುವತಿ
50 ಮೀಟರ್ ದೂರಕ್ಕೆ ಹಾರಿ ಬಿದ್ದ ಯುವತಿ

ಮೃತಪಟ್ಟ ಯುವತಿಯನ್ನು ದೀಕ್ಷಾ ಪರ್ವಾಡ್ಕರ್ (23) ಎಂದು ಗುರುತಿಸಲಾಗಿದೆ. ಆಕೆಯ ಸಹೋದ್ಯೋಗಿ 26 ವರ್ಷದ ಅರುಣ್‌ಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ಗೋವಾದ ಪಂಚತಾರಾ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಬಾಂಬೋಲಿಂ-ದೋನಾ ಪೌಲಾ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಬಳಿ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಗುದ್ದಿದ ರಭಸಕ್ಕೆ ದೀಕ್ಷಾ ಮತ್ತು ಅರುಣ್ ಬೈಕ್‌ನಿಂದ ಸುಮಾರು 50 ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದೀಕ್ಷಾ ಸಾವನ್ನಪ್ಪಿದ್ದಾರೆ. ಕಾರಿನ ಏಟಿಗೆ ಬೈಕ್ ಕೂಡ ನಜ್ಜುಗುಜ್ಜಾಗಿದೆ.

ಅಪಘಾತ ಮಾಡಿದ ಮಿನಿ ಕೂಪರ್ ಕಾರನ್ನು ಓಡಿಸುತ್ತಿದ್ದವನು 21 ವರ್ಷದ ಡೇರಿಯಸ್ ಡಯಾಸ್. ಈತ ಗೋವಾದ ಪ್ರಭಾವಿ ಉದ್ಯಮಿ ಆಂಡ್ರ್ಯೂ ಡಯಾಸ್ ಅವರ ಮಗ. ಆಂಡ್ರ್ಯೂ ಅವರು ಗೋವಾದಲ್ಲಿ ಬೇಕರಿ ಮತ್ತು ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಈ ಮಿನಿ ಕೂಪರ್ ಕಾರನ್ನು ಇತ್ತೀಚೆಗಷ್ಟೇ ಖರೀದಿಸಲಾಗಿತ್ತು. ಕಾರಿನ ಬಾಗಿಲುಗಳಿಗೆ ಇನ್ನೂ ರಿಬ್ಬನ್ ಕೂಡ ಇತ್ತಂತೆ! ಕಾರಿಗೆ ಇನ್ನೂ ಅಧಿಕೃತ ನಂಬರ್ ಪ್ಲೇಟ್ ಕೂಡ ಬಂದಿರಲಿಲ್ಲ, ಕೇವಲ ತಾತ್ಕಾಲಿಕ ನಂಬರ್ ಇತ್ತು ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಡೇರಿಯಸ್ ಡಯಾಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106ರ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವು ಸಂಭವಿಸುವುದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೃತ ಯುವತಿಯ ಕುಟುಂಬದವರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ. "ಪೊಲೀಸರು ಈ ಕೇಸ್‌ನಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ತನಿಖೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ, ಎಲ್ಲವನ್ನೂ ಮುಚ್ಚಿಡಲಾಗುತ್ತಿದೆ" ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಶ್ರೀಮಂತ ಉದ್ಯಮಿಯ ಮಗನಾಗಿರುವುದರಿಂದ ಕೇಸ್ ಹಳ್ಳ ಹಿಡಿಯುತ್ತಾ ಎನ್ನುವ ಭಯ ಅವರ ಕುಟುಂಬದಲ್ಲಿದೆ.

ಒಬ್ಬ ಯುವತಿ ತನ್ನ ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡು ಕೆಲಸಕ್ಕೆ ಹೋಗಿ ಬರುವಾಗ, ಇನ್ಯಾರೋ ಮಾಡಿದ ಅತಿ ವೇಗದ ಚಾಲನೆಯಿಂದಾಗಿ ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರಂತ. ರಸ್ತೆಯಲ್ಲಿ ಸಂಚರಿಸುವಾಗ ನಾವು ಎಷ್ಟೇ ಜಾಗರೂಕರಾಗಿದ್ದರೂ, ಇಂತಹ ಬೇಜವಾಬ್ದಾರಿ ಚಾಲಕರಿಂದಾಗಿ ಅಮಾಯಕರು ಬಲಿಯಾಗುತ್ತಿರುವುದು ಬೇಸರದ ಸಂಗತಿ.

Latest News