ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹೋಗೋದು ಎಷ್ಟೋ ಜನರ ಕನಸಾಗಿದೆ. ಆ ಮಂದಿರದಲ್ಲಿ ಏನೋ ಒಂದು ಶಕ್ತಿ ಇದ್ದು, ರಾಮಲಲ್ಲಾನ ಆ ನಗು ಮುಖ ನೋಡಿದರೆ ಎಲ್ಲ ನೋವನ್ನು ಒಂದು ಕ್ಷಣ ಮರೆಯಬಹುದು. ರಾಮ ಮಂದಿರ ನಿರ್ಮಾಣವಾದಾಗಿನಿಂದ, ಪ್ರತಿದಿನ ಲಕ್ಷಾಂತರ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲದೆ, ಜಗತ್ತಿನ ಮೂಲೆ ಮೂಲೆಗಳಿಂದ ಹಿಂದೂ ಭಕ್ತರು ಅಯೋಧ್ಯೆಗೆ ಬಂದು ಪುನೀತರಾಗುತ್ತಿದ್ದಾರೆ. ಈ ನಡುವೆ, ಜರ್ಮನಿಯಿಂದ ಬಂದ ಪುಟ್ಟ ಬಾಲಕನೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆ ಬಾಲಕನ ಮುಗ್ಧ ಮಾತುಗಳು ಮತ್ತು ರಾಮನ ಮೇಲಿನ ಭಕ್ತಿ ಎಲ್ಲರ ಮನ ಗೆದ್ದಿದೆ.
ಜರ್ಮನಿಯ 'ಆಂಜನೇಯ'ನ ಅಯೋಧ್ಯಾ ಭೇಟಿ
ಈ ವೈರಲ್ ವಿಡಿಯೋದಲ್ಲಿ ಕಾಣಿಸುವ ಬಾಲಕ ಜರ್ಮನಿ ಮೂಲದವನು. ವಿಶೇಷವೆಂದರೆ, ಆತ ತನ್ನ ಹೆಸರನ್ನು 'ಆಂಜನೇಯ' ಎಂದು ಪರಿಚಯಿಸಿಕೊಂಡಿದ್ದಾನೆ. ವಿದೇಶದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಹೆಸರನ್ನು ಉಳಿಸಿಕೊಂಡಿರುವುದು ಆಶ್ಚರ್ಯದ ಸಂಗತಿ. ಮಾಧ್ಯಮದವರು ಆತನನ್ನು ಮಾತನಾಡಿಸಿದಾಗ, ಆತ ಬಹಳ ಉತ್ಸಾಹದಿಂದ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾನೆ. "ನಾನು ಜರ್ಮನಿಯಿಂದ ಬಂದಿದ್ದೇನೆ, ನನ್ನ ಹೆಸರು ಆಂಜನೇಯ ಎಂದು ಆತ ಮುದ್ದಾಗಿ ಹೇಳುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ಬಿಸಿಲಿನ ನಡುವೆಯೂ ಭಕ್ತಿಯ ಪರಾಕಾಷ್ಠೆ
ಅಯೋಧ್ಯೆಯ ಶ್ರೀರಾಮ ಮಂದಿರವನ್ನು ನೋಡಿದ ನಂತರ ಆ ಬಾಲಕನಿಗೆ ಹೇಗನಿಸಿತು ಎಂಬ ಪ್ರಶ್ನೆಗೆ, ಆತ ಬಹಳ ಪ್ರಾಮಾಣಿಕವಾಗಿ ಉತ್ತರಿಸಿದ್ದಾನೆ. ಪ್ರೆಸೆಂಟ್ ಭಾರತದಲ್ಲಿ ಸಮ್ಮರ್ ಇರುವ ಕಾರಣ ಬಿಸಿಲು ಮತ್ತು ಸೆಖೆ ಹೆಚ್ಚಾಗಿದೆ. ಇದರ ಬಗ್ಗೆಯೂ ಈ ಬಾಲಕ ಮಾತನಾಡಿದ್ದಾನೆ.
ದೇವಸ್ಥಾನ ನಿಜವಾಗಿಯೂ ಅದ್ಭುತವಾಗಿದೆ, ತುಂಬಾ ಚೆನ್ನಾಗಿದೆ. ಆದರೆ ಇಲ್ಲಿ ವಿಪರೀತ ಬಿಸಿಲು ಮತ್ತು ಸೆಖೆ ಇದೆ. ಭಾರತದ ಹವಾಮಾನ ಹೀಗೆಯೇ ಇರುತ್ತದೆ ಎಂದು ನನಗೆ ಗೊತ್ತು. ಆದರೂ ಈ ಬಿಸಿಲನ್ನು ನಾನು ನಿಭಾಯಿಸಬಲ್ಲೆ. ಇಲ್ಲಿಗೆ ಬಂದಿದ್ದು ನನಗೆ ಒಂದು ಮರೆಯಲಾಗದ ಮತ್ತು ಒಳ್ಳೆಯ ಅನುಭವ ನೀಡಿದೆ ಎಂದು ಆಂಜನೇಯ ಹೇಳಿದ್ದಾನೆ.
ಜರ್ಮನಿಯಂತಹ ತಂಪು ಹವಾಮಾನದ ದೇಶದಿಂದ ಬಂದಿದ್ದರೂ, ಇಲ್ಲಿನ ಬಿಸಿಲನ್ನು ಲೆಕ್ಕಿಸದೆ ರಾಮನ ದರ್ಶನ ಪಡೆದ ಬಾಲಕನ ಸಾಹಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಜನರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು, "ರಾಮನ ಭಕ್ತರು ಜಗತ್ತಿನಾದ್ಯಂತ ಇದ್ದಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ. ವಿದೇಶಿ ಬಾಲಕನೊಬ್ಬ ಭಾರತೀಯ ಸಂಪ್ರದಾಯದಂತೆ ರಾಮನ ದರ್ಶನ ಪಡೆದು, ತನ್ನ ಅನುಭವವನ್ನು ಇಷ್ಟು ಸ್ಪಷ್ಟವಾಗಿ ಹಂಚಿಕೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಅಯೋಧ್ಯೆ ಕೇವಲ ಒಂದು ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಜಗತ್ತಿನಾದ್ಯಂತ ಇರುವ ರಾಮಭಕ್ತರನ್ನು ಒಗ್ಗೂಡಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದಕ್ಕೆ ಈ ಪುಟ್ಟ ಆಂಜನೇಯನೇ ಸಾಕ್ಷಿ. ಬಾಲಕನ ಮುಗ್ಧತೆ ಮತ್ತು ಆತನ ಪೋಷಕರು ಆತನಿಗೆ ನೀಡಿರುವ ಸಂಸ್ಕಾರದ ಬಗ್ಗೆ ಜನ ಶ್ಲಾಘಿಸುತ್ತಿದ್ದಾರೆ.