May 9, 2026 Languages : ಕನ್ನಡ | English

RCB ಪಂದ್ಯ ಅಹಮದಾಬಾದ್‌ಗೆ ಹೋಗಿದ್ದೇಕೆ? ಮೌನ ಮುರಿದ ಗೃಹ ಸಚಿವ ಜಿ. ಪರಮೇಶ್ವರ್!!

ಆರ್‌ಸಿಬಿ (RCB) ಅಂದ್ರೆ ಅದು ಕೇವಲ ಒಂದು ತಂಡವಲ್ಲ, ನಮ್ಮೂರ ಹೆಮ್ಮೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಪಂದ್ಯ ದಿಢೀರನೆ ಅಹಮದಾಬಾದ್‌ಗೆ ಶಿಫ್ಟ್ ಆಗಿರೋದು ಅಭಿಮಾನಿಗಳಿಗೆ ಸ್ವಲ್ಪ ಬೇಸರ ತಂದಿದೆ. "ಇದಕ್ಕೆ ಸರ್ಕಾರವೇ ಕಾರಣ, ಸರಿಯಾಗಿ ಭದ್ರತೆ ಕೊಟ್ಟಿಲ್ಲ" ಅನ್ನೋ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಮೌನ ಮುರಿದಿದ್ದಾರೆ.

ವಿರೋಧ ಪಕ್ಷಗಳ ಚಾಟಿ ಏಟಿಗೆ ಪರಮೇಶ್ವರ್ ಕೊಟ್ಟ ಖಡಕ್ ತಿರುಗೇಟು
ವಿರೋಧ ಪಕ್ಷಗಳ ಚಾಟಿ ಏಟಿಗೆ ಪರಮೇಶ್ವರ್ ಕೊಟ್ಟ ಖಡಕ್ ತಿರುಗೇಟು

"ವಾಣಿಜ್ಯ ವ್ಯವಹಾರ ಅಷ್ಟೇ, ನಮ್ಮದಲ್ಲ"

ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು, ಪಂದ್ಯವನ್ನು ಸ್ಥಳಾಂತರಿಸುವ ನಿರ್ಧಾರ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐ (BCCI) ಗೆ ಸೇರಿದ್ದು ಎಂದಿದ್ದಾರೆ. "ಅವರವರ ಒಪ್ಪಂದಗಳು ಹೇಗಿರುತ್ತವೆಯೋ ನಮಗೆ ಗೊತ್ತಿಲ್ಲ. ಆದರೆ ಅಹಮದಾಬಾದ್ ಸ್ಟೇಡಿಯಂ ದೊಡ್ಡದಿದೆ, ಅಲ್ಲಿ ಹೆಚ್ಚು ಜನ ಕೂರಬಹುದು. ಅಷ್ಟೇ ಅಲ್ಲದೆ ಟಿಕೆಟ್ ಮಾರಾಟದಿಂದ ಬರುವ ಲಾಭ ಕೂಡ ಜಾಸ್ತಿ ಇರಬಹುದು. ಈ ವಾಣಿಜ್ಯ ಲೆಕ್ಕಾಚಾರ ನೋಡಿ ಅವರೇ ಪಂದ್ಯವನ್ನು ಅಲ್ಲಿಗೆ ಕೊಂಡೊಯ್ದಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಜಾಗ ಸಿಗಲಿ ಅನ್ನೋದು ಅವರ ಉದ್ದೇಶವಿರಬಹುದು, ಇದರಲ್ಲಿ ಸರ್ಕಾರದ ರೋಲ್ ಶೂನ್ಯ ಎಂಬುದು ಅವರ ಖಡಕ್ ಮಾತು.

ಭದ್ರತೆ ಕೊರತೆ ಇದೆಯಾ? ಚಾನ್ಸೇ ಇಲ್ಲ!

ವಿರೋಧ ಪಕ್ಷಗಳು "ಸರ್ಕಾರ ಭದ್ರತೆ ಕೊಡಲು ವಿಫಲವಾಗಿದೆ, ಅದಕ್ಕೆ ಪಂದ್ಯ ಬೇರೆಡೆಗೆ ಹೋಗಿದೆ" ಅಂತ ಚುಚ್ಚಿದ್ದವು. ಇದಕ್ಕೆ ತಿರುಗೇಟು ನೀಡಿದ ಪರಮೇಶ್ವರ್ ಅವರು, "ಬೆಂಗಳೂರು ಪೊಲೀಸರ ಶಕ್ತಿ ಏನು ಅಂತ ನಮಗೆ ಗೊತ್ತು. ಕಳೆದ ವರ್ಷದ ಘಟನೆಗಳಿಂದ ಪಾಠ ಕಲಿತಿದ್ದೇವೆ. ಕುನ್ಹಾ ವರದಿ ಪ್ರಕಾರ ಏನೆಲ್ಲಾ ಬದಲಾವಣೆ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇವೆ. ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಭದ್ರತೆ ಕೊಡುವ ತಾಕತ್ತು ನಮಗಿದೆ. ಭದ್ರತೆ ಕಾರಣಕ್ಕೆ ಪಂದ್ಯ ಶಿಫ್ಟ್ ಆಗಿದೆ ಅನ್ನೋದು ಬರೀ ಸುಳ್ಳು" ಎಂದರು.

ಇನ್ನು, ಶಾಸಕರಿಗೆ 600 ಸೀಟು ಕೊಡಲಿಲ್ಲ ಅಂತ ಪಂದ್ಯ ಶಿಫ್ಟ್ ಮಾಡಿದ್ರಾ? ಅನ್ನೋ ಪ್ರಶ್ನೆಗೆ "ಹಾಗೇನಾದರೂ ಇದ್ದರೆ ದಾಖಲೆ ಬಿಡುಗಡೆ ಮಾಡಲಿ, ಯಾರು ಎಷ್ಟು ಟಿಕೆಟ್ ಕೇಳಿದ್ದಾರೆ ಅನ್ನೋದು ಹೊರಬರಲಿ" ಎಂದು ಸವಾಲು ಹಾಕಿದರು.

ವಿಪಕ್ಷಗಳಿಗೆ ಕೌಂಟರ್

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರ್‌ಸಿಬಿ ಫ್ಯಾನ್ಸ್‌ಗೆ ಮೋಸವಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿದ ಸಚಿವರು, "ಬಿಜೆಪಿ-ಜೆಡಿಎಸ್‌ನವರು ಕ್ರೀಡೆಗೆ ಎಷ್ಟು ಸಪೋರ್ಟ್ ಮಾಡಿದ್ದಾರೆ ಅಂತ ಜನರಿಗೆ ಚೆನ್ನಾಗಿ ಗೊತ್ತು. ಸುಮ್ಮನೆ ರಾಜಕೀಯ ಕಾರಣಕ್ಕೆ ಆರೋಪ ಮಾಡುವುದು ಸರಿಯಲ್ಲ" ಎಂದು ಟಾಂಗ್ ಕೊಟ್ಟರು.

ತಮಿಳುನಾಡು ರಾಜಕೀಯದ ಮೇಲೂ ಒಂದು ಕಣ್ಣು!

ಇದೇ ವೇಳೆ ಪಕ್ಕದ ರಾಜ್ಯ ತಮಿಳುನಾಡಿನ ರಾಜಕೀಯ ಹೈಡ್ರಾಮಾ ಬಗ್ಗೆಯೂ ಪರಮೇಶ್ವರ್ ಮಾತನಾಡಿದರು. ಅಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ಸಂವಿಧಾನದಲ್ಲಿ ಎಲ್ಲದಕ್ಕೂ ನಿಯಮಗಳಿವೆ. ರಾಜ್ಯಪಾಲರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಬಹುಶಃ ಈ ವಿಷಯ ಮುಂದೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ" ಎಂದು ಭವಿಷ್ಯ ನುಡಿದರು.

ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದರೆ ಅಭಿಮಾನಿಗಳಿಗೆ ಹಬ್ಬ ಇರುತ್ತಿತ್ತು ನಿಜ. ಆದರೆ ಸಚಿವರ ಪ್ರಕಾರ, ಇದು ಕ್ರಿಕೆಟ್ ಮಂಡಳಿಯ ಬಿಸಿನೆಸ್ ಪ್ಲಾನ್ ಅಷ್ಟೇ. ಸರ್ಕಾರಕ್ಕೂ ಕ್ರೀಡೆಗೂ ಇರುವ ಸಂಬಂಧ ಭದ್ರತೆ ಕೊಡುವುದು ಮಾತ್ರ, ಮೈದಾನ ಆಯ್ಕೆ ಮಾಡುವುದಲ್ಲ ಎಂದು ಪರಮೇಶ್ವರ್ ಅವರು ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

Latest News