Apr 15, 2026 Languages : ಕನ್ನಡ | English

ಜಮೀರ್ ಅಹ್ಮದ್‌ಗೆ ಬಿಗ್ ಶಾಕ್ - "ಹೋಗಿ ದೆಹಲಿ ನಾಯಕರಿಗೆ ಉತ್ತರ ಕೊಡು" ಎಂದ ಸಿದ್ದರಾಮಯ್ಯ!!

ದಾವಣಗೆರೆ ಉಪಚುನಾವಣೆ ಟಿಕೆಟ್ ಕಿರಿಕ್ ಈಗ ಸಚಿವ ಜಮೀರ್ ಅಹ್ಮದ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. "ಹೈಕಮಾಂಡ್ ನಿನ್ನ ಮೇಲೆ ಫುಲ್ ಗರಂ ಆಗಿದೆ, ನೀನೇ ಹೋಗಿ ಸಮಜಾಯಿಷಿ ಕೊಡು" ಎಂದು ಸಿಎಂ ಸಿದ್ದರಾಮಯ್ಯ ಅವರು ಜಮೀರ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ರಾಜ್ಯ ರಾಜಕಾರಣದಲ್ಲಿ ಈಗ ಜಮೀರ್ ಅಹ್ಮದ್ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಶುರುವಾಗಿದೆ.

ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ನಲ್ಲಿ ಅಸ್ಥಿರತೆ
ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ನಲ್ಲಿ ಅಸ್ಥಿರತೆ

ದಾವಣಗೆರೆ ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ನಾಯಕರಿಗೆ ಆದ್ಯತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಜೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅಂತಹ ಹಿರಿಯ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್‌ಗೆ ದೊಡ್ಡ ಶಾಕ್ ಕೊಟ್ಟಿದೆ. ಆದರೆ, ಈ ನಾಯಕರ ಬಂಡಾಯದ ಹಿಂದೆ ಸಚಿವ ಜಮೀರ್ ಅಹ್ಮದ್ ಅವರ ಕೈವಾಡವಿದೆ ಎಂಬ ಗಂಭೀರ ಆರೋಪ ಈಗ ಕೇಳಿಬಂದಿದೆ.

ಜಮೀರ್ ಮೇಲೆ ಸಿಎಂ ಕೆಂಗಣ್ಣು

ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರನ್ನ ಕರೆಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. "ನಜೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆಗೆ ನೀನೇ ಪ್ರಚೋದನೆ ನೀಡಿದ್ದೀಯಾ?" ಎಂದು ಸಿಎಂ ನೇರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಾಯಕರಿಗೂ ಈ ಬಗ್ಗೆ ದೂರು ಹೋಗಿದ್ದು, ಅವರು ಜಮೀರ್ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಜಮೀರ್‌ಗೆ ಖಡಕ್ ಆಗಿ ಹೇಳಿದ್ದಿಷ್ಟು

"ಪಕ್ಷದ ಶಿಸ್ತು ಮೀರಿದರೆ ಸುಮ್ಮನಿರಲು ಸಾಧ್ಯವಿಲ್ಲ. ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ. ನೀನೇ ದೆಹಲಿಗೆ ಹೋಗಿ ನಾಯಕರಿಗೆ ಸೂಕ್ತ ವಿವರಣೆ ನೀಡಬೇಕು. ಇಲ್ಲವಾದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ."

ಸಿಎಂ ಪ್ರಶ್ನೆಗಳಿಗೆ ಉತ್ತರಿಸಿರುವ ಜಮೀರ್, ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ನಾನು ಕೇರಳದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದೆ. ಆಮೇಲೆ ವೈಯಕ್ತಿಕ ಕೆಲಸದ ಮೇಲೆ ಮುಂಬೈಗೆ ಹೋಗಿದ್ದೆ. ಬಂಡಾಯಗಾರರಿಗೂ ನನಗೂ ಯಾವುದೇ ಸಂಬಂಧವಿಲ್ಲ," ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಜಮೀರ್ ಅವರ ಈ ಮಾತುಗಳನ್ನು ಹೈಕಮಾಂಡ್ ಎಷ್ಟರಮಟ್ಟಿಗೆ ನಂಬುತ್ತದೆ ಎಂಬುದು ಸದ್ಯದ ಪ್ರಶ್ನೆ.

ದಾವಣಗೆರೆ ಉಪಚುನಾವಣೆ ಕಾಂಗ್ರೆಸ್‌ಗೆ ಇಮೇಜ್‌ನ ಪ್ರಶ್ನೆಯಾಗಿದೆ. ಇಂತಹ ಸಮಯದಲ್ಲಿ ಅಲ್ಪಸಂಖ್ಯಾತ ನಾಯಕರ ಅಸಮಾಧಾನ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಸಿದ್ದರಾಮಯ್ಯ ಅವರಿಗಿದೆ. ಈಗಾಗಲೇ ಇಬ್ಬರು ನಾಯಕರು ರಾಜೀನಾಮೆ ನೀಡಿಯಾಗಿರುವುದರಿಂದ, ಈ ಬಂಡಾಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎನ್ನಲಾದ ಜಮೀರ್ ಮೇಲೆ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಸಚಿವ ಜಮೀರ್ ಅಹ್ಮದ್ ಅವರ ನಡೆ ಮತ್ತು ಹೈಕಮಾಂಡ್ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೆಹಲಿಗೆ ಹೋಗಿ ಜಮೀರ್ ಹೇಗೆ ಸಮಾಧಾನ ಮಾಡುತ್ತಾರೆ ಅಥವಾ ಹೈಕಮಾಂಡ್ ಜಮೀರ್‌ಗೆ "ಬಿಗ್ ಶಾಕ್" ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.