ಕಾಫಿ ನಾಡಿನ ಜನತೆಗೆ, ಅದರಲ್ಲೂ ಎನ್.ಆರ್. ಪುರ ತಾಲೂಕಿನ ಹತ್ತಾರು ಹಳ್ಳಿಗಳ ಜನರಿಗೆ ನಿನ್ನೆ ಸಂಭ್ರಮದ ದಿನ. ಕಳೆದ 60 ವರ್ಷಗಳಿಂದ ಗ್ರಾಮಸ್ಥರು ಕಾಣುತ್ತಿದ್ದ ಕನಸು ಕೊನೆಗೂ ನನಸಾಗಿದೆ. ಭದ್ರಾ ಹಿನ್ನೀರಿನ ಹಂದೂರು ಬಳಿ ನಿರ್ಮಾಣಗೊಂಡಿರುವ ಜಿಲ್ಲೆಯ ಅತಿ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಸೋಮವಾರ) ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ಈ ಸೇತುವೆಯ ವಿಶೇಷವೆಂದರೆ ಇದಕ್ಕೆ 'ಸಿದ್ದರಾಮಯ್ಯ ಸೇತುವೆ' ಎಂದೇ ಹೆಸರಿಡಲಾಗಿದೆ. 2017ರಲ್ಲಿ ಸಿದ್ದರಾಮಯ್ಯ ಅವರೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿ ಇದನ್ನು ಉದ್ಘಾಟಿಸಿರುವುದು ವಿಶೇಷ. ಸುಮಾರು 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ 504 ಮೀಟರ್ ಉದ್ದವಿದೆ.
ಇಂದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಲೋಕಾರ್ಪಣೆಗೊಳಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ & ಶಂಕುಸ್ಥಾಪನೆ ನೆರವೇರಿಸಿದ ಸ್ಮರಣೀಯ ಕ್ಷಣ pic.twitter.com/u6heGrmUTx
— Siddaramaiah (@siddaramaiah) April 13, 2026
30 ಕಿಮೀ ಸುತ್ತಾಟಕ್ಕೆ ಬಿತ್ತು ಬ್ರೇಕ್
ಈ ಸೇತುವೆ ನಿರ್ಮಾಣವಾಗುವ ಮೊದಲು ಹಂದೂರು ಮತ್ತು ಹೊನ್ನೆಕೂಡಿಗೆ ಭಾಗದ ರೈತರು ಹಾಗೂ ಗ್ರಾಮಸ್ಥರು ಎನ್.ಆರ್. ಪುರ ಪಟ್ಟಣಕ್ಕೆ ಬರಬೇಕೆಂದರೆ ಬರೋಬ್ಬರಿ 30 ರಿಂದ 35 ಕಿಲೋಮೀಟರ್ ಸುತ್ತಾಡಿಕೊಂಡು ಬರಬೇಕಿತ್ತು. ಅದರಲ್ಲೂ ಮಳೆಗಾಲದಲ್ಲಂತೂ ಇವರ ಕಷ್ಟ ಹೇಳತೀರದಾಗಿತ್ತು. ಆದರೆ ಈಗ ಈ ಸೇತುವೆಯಿಂದಾಗಿ ಕೇವಲ 3 ಕಿಲೋಮೀಟರ್ನಲ್ಲಿ ಪಟ್ಟಣವನ್ನು ತಲುಪಬಹುದಾಗಿದೆ. ಈ ಮೂಲಕ ಹತ್ತಾರು ಹಳ್ಳಿಗಳ ಜನರ ಪ್ರಯಾಣದ ಅವಧಿ ಮತ್ತು ಖರ್ಚು ಎರಡೂ ಉಳಿತಾಯವಾದಂತಾಗಿದೆ.
ಅದ್ಧೂರಿ ಸ್ವಾಗತ ಮತ್ತು ಪುತ್ಥಳಿ ಅನಾವರಣ
ಸಿಎಂ ಸಿದ್ದರಾಮಯ್ಯ ಅವರು ಸೇತುವೆ ಬಳಿ ಬರುತ್ತಿದ್ದಂತೆಯೇ ಸ್ಥಳೀಯ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ದೇವರಿಗೆ ಪೂಜೆ ಸಲ್ಲಿಸಿ, ಟೇಪ್ ಕತ್ತರಿಸುವ ಮೂಲಕ ಸಿಎಂ ಸೇತುವೆಯನ್ನು ಜನರಿಗಾಗಿ ಮುಕ್ತಗೊಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಸಿದ್ದರಾಮಯ್ಯ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಬಾಲಕೃಷ್ಣ, ಕೆ.ಎಸ್. ಆನಂದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈಗ ಇದೊಂದು ಪ್ರವಾಸಿ ತಾಣ
ಕೇವಲ ಸಂಪರ್ಕಕ್ಕೆ ಮಾತ್ರವಲ್ಲದೆ, ಈ ಸೇತುವೆ ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ಭದ್ರಾ ಹಿನ್ನೀರಿನ ಅದ್ಭುತ ನೋಟವನ್ನು ಈ ಸೇತುವೆಯ ಮೇಲೆ ನಿಂತು ಸವಿಯಬಹುದು. ಸಂಜೆ ವೇಳೆಗೆ ಜಿಲ್ಲೆಯ ನಾನಾ ಭಾಗಗಳಿಂದ ಜನರು ಇಲ್ಲಿಗೆ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ.
"ಸಿದ್ದರಾಮಯ್ಯ ಸೇತುವೆ" ಈ ಭಾಗದ ಕೃಷಿ, ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, "ನನ್ನ ಅವಧಿಯಲ್ಲೇ ಕೆಲಸ ಶುರುವಾಗಿ, ನನ್ನಿಂದಲೇ ಉದ್ಘಾಟನೆಯಾಗುತ್ತಿರುವುದು ತುಂಬಾ ಸಂತೋಷ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.