Mar 25, 2026 Languages : ಕನ್ನಡ | English

ಕಾಫಿ ನಾಡಿನಲ್ಲಿ ನಾಗಾಲ್ಯಾಂಡ್ ಸುಂದರಿಯ ದುರಂತ ಅಂತ್ಯ - ಡೈರಿಯಲ್ಲಿ ಬಯಲಾಯ್ತು ಕಾಮುಕರ ಕರಾಳ ಮುಖ!!

ಚಿಕ್ಕಮಗಳೂರು: ಬದುಕಿನ ಕನಸು ಹೊತ್ತು ದೂರದ ನಾಗಾಲ್ಯಾಂಡ್‌ನಿಂದ 'ಕಾಫಿ ನಾಡು' ಚಿಕ್ಕಮಗಳೂರಿಗೆ ಬಂದಿದ್ದ 22 ವರ್ಷದ ಯುವತಿಯೊಬ್ಬಳು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ಕುಟುಂಬದ ಜವಾಬ್ದಾರಿ ಹೊತ್ತು ಕೆಲಸಕ್ಕೆ ಸೇರಿದ್ದ ಈಕೆಯನ್ನು ಕಾಮುಕರ ಕಿರುಕುಳ ಬಲಿ ಪಡೆದಿದೆ ಎಂಬ ಆಘಾತಕಾರಿ ವಿಷಯ ಈಗ ಹೊರಬಿದ್ದಿದೆ. ನಗರದ ಗ್ಲೋಬಲ್ ವಿಲೇಜ್ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಲಿನ್ಸುಲಾ (22) ಎಂಬ ಯುವತಿಯೇ ಆತ್ಮಹ*ತ್ಯೆಗೆ ಶರಣಾದ ದುರ್ದೈವಿ. ಈಕೆಯ ಸಾವಿನ ಹಿಂದೆ ಇಬ್ಬರು ವ್ಯಕ್ತಿಗಳ ಮಾನಸಿಕ ಮತ್ತು ದೈಹಿಕ ಕಿರುಕುಳದ ಕರಾಳ ಕಥೆಯಿದೆ ಎಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು: ನಾಗಾಲ್ಯಾಂಡ್ ಯುವತಿಯ ಘೋರ ದುರಂತ!! | Photo Credit: https://x.com/HateDetectors
ಚಿಕ್ಕಮಗಳೂರು: ನಾಗಾಲ್ಯಾಂಡ್ ಯುವತಿಯ ಘೋರ ದುರಂತ!! | Photo Credit: https://x.com/HateDetectors

ಡೈರಿಯಲ್ಲಿ ಅಡಗಿದೆ ಸಾವಿನ ರಹಸ್ಯ

ಲಿನ್ಸುಲಾ ಸಾವಿನ ನಂತರ ಪೊಲೀಸರಿಗೆ ಸಿಕ್ಕಿರುವ ಆಕೆಯ ಡೈರಿ ಈಗ ಪ್ರಮುಖ ಸಾಕ್ಷಿಯಾಗಿದೆ. ಈ ಡೈರಿಯಲ್ಲಿ ಆಕೆ ತಾನು ಅನುಭವಿಸಿದ ನರಕಯಾತನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ. ರಾಜೇಶ್ ಮತ್ತು ತೇಜಸ್ ಎಂಬ ಇಬ್ಬರು ವ್ಯಕ್ತಿಗಳು ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಹೆಸರಿಸಿದ್ದಾಳೆ ಎಂದು ವರದಿಯಾಗಿದೆ.

ಕುಟುಂಬದ ಜವಾಬ್ದಾರಿಗಾಗಿ ನೋವು ನುಂಗಿದ್ದಳು

ಲಿನ್ಸುಲಾ ಕೇವಲ ತನ್ನ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿರಲಿಲ್ಲ. ನಾಗಾಲ್ಯಾಂಡ್‌ನಲ್ಲಿರುವ ತನ್ನ ವಯಸ್ಸಾದ ಪೋಷಕರು ಮತ್ತು ಅವರ ಆರೋಗ್ಯದ ಜವಾಬ್ದಾರಿ ಈಕೆಯ ಮೇಲಿತ್ತು. ತಾನು ಕೆಲಸ ಬಿಟ್ಟರೆ ಮನೆಯವರಿಗೆ ತೊಂದರೆಯಾಗುತ್ತದೆ, ಸಂಬಳ ಸಿಗುವುದಿಲ್ಲ ಎಂಬ ಭಯದಿಂದಲೇ ಆಕೆ ಇಬ್ಬರು ಕಿರಾತಕರ ಕಿರುಕುಳವನ್ನು ಸಹಿಸಿಕೊಂಡಿದ್ದಳು. ಆದರೆ, ದಿನದಿಂದ ದಿನಕ್ಕೆ ಈ ಕಿರುಕುಳ ಮಿತಿ ಮೀರಿದ್ದರಿಂದ, ಮನನೊಂದ ಯುವತಿ ಈ ತೀವ್ರ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಘಟನೆ ಬೆಳಕಿಗೆ ಬಂದ ತಕ್ಷಣ ನಾಗಾಲ್ಯಾಂಡ್ ಮೂಲದವರೇ ಆದ ಲಶೀಲಾ ಇಂಚುಗರ್ ಎಂಬುವವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಯುವತಿಯ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ. ನಾಗಾಲ್ಯಾಂಡ್‌ನಲ್ಲಿರುವ ಲಿನ್ಸುಲಾ ಕುಟುಂಬಕ್ಕೆ ವಿಷಯ ಮುಟ್ಟಿಸಲಾಗಿದ್ದು, ಕಾಫಿ ನಾಡಿನಲ್ಲಿ ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ದೂರದ ಊರುಗಳಿಂದ ಬದುಕಲು ಬರುವ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವುದು ಸಮಾಜದ ಜವಾಬ್ದಾರಿ. ಕೆಲಸದ ಸ್ಥಳದಲ್ಲಿ ಇಂತಹ ಕಿರುಕುಳಗಳು ನಡೆಯುತ್ತಿದ್ದರೆ ತಕ್ಷಣವೇ ಪೊಲೀಸರ ಅಥವಾ ಮಹಿಳಾ ಸಹಾಯವಾಣಿಯ ನೆರವು ಪಡೆಯಿರಿ. ನೋವನ್ನು ನುಂಗಿಕೊಂಡು ಇಂತಹ ನಿರ್ಧಾರ ಕೈಗೊಳ್ಳುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ.

Latest News