Apr 1, 2026 Languages : ಕನ್ನಡ | English

ಬೆಂಗಳೂರಿಗರಿಗೆ ಏಪ್ರಿಲ್ 'ಶಾಕ್' - ನೀರಿನ ಬಿಲ್ ಏರಿಕೆ ಜೊತೆಗೆ ಕಸ ವಿಂಗಡಿಸದಿದ್ದರೆ ಬೀಳುತ್ತೆ ಭಾರಿ ದಂಡ!!

ಬೆಂಗಳೂರಿನಲ್ಲಿ ವಾಸಿಸುವವರಿಗೆ ಇದೊಂದು ಸ್ವಲ್ಪ ಬೇಸರದ ಸುದ್ದಿ. ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಜಲಮಂಡಳಿ (BWSSB) ನೀರಿನ ದರವನ್ನು ಶೇ. 3ರಷ್ಟು ಹೆಚ್ಚಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಜಲಮಂಡಳಿಯು ತನ್ನ ನಷ್ಟವನ್ನು ತುಂಬಿಕೊಳ್ಳಲು ಈ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷವೂ ಇದೇ ರೀತಿ ದರ ಏರಿಕೆ ಮಾಡಲಾಗಿತ್ತು, ಇದೀಗ ಮತ್ತೊಮ್ಮೆ ಅದೇ ಹಾದಿಯನ್ನು ತುಳಿದಿದೆ.

ಜಲಮಂಡಳಿಗೆ ಕೋಟಿ ಕೋಟಿ ನಷ್ಟ
ಜಲಮಂಡಳಿಗೆ ಕೋಟಿ ಕೋಟಿ ನಷ್ಟ

ದರ ಏರಿಕೆ ಏಕೆ?

ನೀವು ಕೇಳಬಹುದು, ಯಾಕೆ ಪದೇ ಪದೇ ದರ ಹೆಚ್ಚಿಸ್ತಿದ್ದಾರೆ ಎಂದು. ಜಲಮಂಡಳಿಯ ಮೂಲಗಳ ಪ್ರಕಾರ, ನೀರು ಸರಬರಾಜು ಮಾಡಲು ಮತ್ತು ನಿರ್ವಹಣೆ ಮಾಡಲು ಅವರಿಗೆ ಭಾರಿ ವೆಚ್ಚವಾಗುತ್ತಿದೆ. ವಿದ್ಯುತ್ ಬಿಲ್, ಮೂಲಸೌಕರ್ಯಗಳ ನಿರ್ವಹಣೆ ಹೀಗೆ ತಿಂಗಳಿಗೆ ಸುಮಾರು 200 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಆದರೆ, ಇವರಿಗೆ ಬರುವ ಆದಾಯ ಕೇವಲ 120 ಕೋಟಿ ರೂಪಾಯಿ ಮಾತ್ರ. ಅಂದ್ರೆ, ತಿಂಗಳಿಗೆ 80 ಕೋಟಿ ರೂಪಾಯಿ ನಷ್ಟದಲ್ಲಿದ್ದಾರೆ. ಈ ನಷ್ಟವನ್ನು ಸರಿದೂಗಿಸಲು ಪ್ರತಿ ವರ್ಷ ಶೇ. 3ರಷ್ಟು ದರ ಹೆಚ್ಚಿಸುವ ನಿರ್ಧಾರವನ್ನು 2025ರಲ್ಲೇ ತೆಗೆದುಕೊಳ್ಳಲಾಗಿತ್ತು. ದೀರ್ಘಕಾಲದವರೆಗೆ (ಸುಮಾರು 11 ವರ್ಷ) ದರ ಹೆಚ್ಚಿಸದೇ ಇದ್ದದ್ದೇ ಈಗಿನ ಈ ಕಠಿಣ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ನಿಮ್ಮ ಬಿಲ್ ಎಷ್ಟು ಹೆಚ್ಚಾಗಬಹುದು?

ಈ ದರ ಏರಿಕೆಯಿಂದ ಸಾಮಾನ್ಯ ಗೃಹ ಬಳಕೆದಾರರಿಗೆ ಮತ್ತು ವಾಣಿಜ್ಯ ಬಳಕೆಯವರಿಗೆ ಬಿಸಿ ತಟ್ಟಲಿದೆ:

  • ಗೃಹ ಬಳಕೆದಾರರಿಗೆ: ತಿಂಗಳಿಗೆ ಸರಾಸರಿ 20ರಿಂದ 30 ರೂಪಾಯಿ ಹೆಚ್ಚುವರಿ ಹೊರೆಯಾಗಬಹುದು.

  • ವಾಣಿಜ್ಯ (ಕೈಗಾರಿಕೆ/ಶಾಪ್) ಬಳಕೆದಾರರಿಗೆ: ತಿಂಗಳಿಗೆ ಸುಮಾರು 50ರಿಂದ 60 ರೂಪಾಯಿ ಹೆಚ್ಚುವರಿ ಬಿಲ್ ಬರುವ ಸಾಧ್ಯತೆಯಿದೆ.

ನೀವು ಬಳಸುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಈ ದರ ಹೆಚ್ಚಳ ಇರುತ್ತದೆ. ಉದಾಹರಣೆಗೆ, ಕಡಿಮೆ ನೀರು ಬಳಸುವವರಿಗೆ ಪ್ರತಿ ಲೀಟರ್‌ಗೆ 0.15 ಪೈಸೆ ಹೆಚ್ಚಾದರೆ, ಅತಿ ಹೆಚ್ಚು ನೀರು ಬಳಸುವವರಿಗೆ ಪ್ರತಿ ಲೀಟರ್‌ಗೆ 1 ಪೈಸೆ ವರೆಗೆ ಹೆಚ್ಚಾಗಲಿದೆ.

ಕಸ ವಿಂಗಡಣೆ ಬಗ್ಗೆಯೂ ಎಚ್ಚರ!

ನೀರಿನ ದರದ ಜೊತೆಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯೂ ಒಂದು ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ನಿಮ್ಮ ಕಸವನ್ನು ಹಸಿ, ಒಣ, ಸ್ಯಾನಿಟರಿ ಮತ್ತು ಸ್ಪೆಷಲ್ ಕೇರ್ ವೇಸ್ಟ್ ಎಂದು ವಿಂಗಡಿಸಿ ಕೊಡಲೇಬೇಕು. ಕಸ ವಿಂಗಡಿಸದೆ ಎಲ್ಲವನ್ನೂ ಮಿಶ್ರ ಮಾಡಿ ಕೊಟ್ಟರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ.

  • ಮೊದಲ ಬಾರಿಯ ತಪ್ಪು: 500 ರೂಪಾಯಿ ದಂಡ.

  • ಅದೇ ತಪ್ಪು ಮುಂದುವರಿಸಿದರೆ: 1,000 ರೂಪಾಯಿ ದಂಡ.

ಆದ್ದರಿಂದ, ಬಜೆಟ್ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಮನೆಯಲ್ಲಿ ಕಸವನ್ನು ವಿಂಗಡಿಸಿ ಕೊಡುವ ಅಭ್ಯಾಸವನ್ನೂ ರೂಢಿಸಿಕೊಳ್ಳುವುದು ಒಳ್ಳೆಯದು. ಒಟ್ಟಿನಲ್ಲಿ, ಏಪ್ರಿಲ್ ತಿಂಗಳಿನಿಂದ ಬೆಂಗಳೂರಿಗರಿಗೆ ನೀರಿನ ಬಿಲ್ ಮತ್ತು ಕಸ ನಿರ್ವಹಣೆ ಎರಡೂ ಕಡೆಯಿಂದಲೂ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ.