ಕಲ್ಯಾಣ ಕರ್ನಾಟಕದಲ್ಲಿ ಈಗ ಮಹಾ ಕ್ರಾಂತಿ - ಈಶ್ವರ ಖಂಡ್ರೆ ಡಿಸಿಎಂ ಆಗ್ತಾರಾ? ಮಠಾಧೀಶರ ನೇರ ರಂಗಪ್ರವೇಶ!!

ಬೀದರ್: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಸರ್ಕಸ್ ದಿನದಿಂದ ದಿನಕ್ಕೆ ಭಾರಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಗಡಿ ನಾಡು ಬೀದರ್‌ನ ಪ್ರಭಾವಿ ನಾಯಕ, ಸಚಿವ ಈಶ್ವರ್ ಖಂಡ್ರೆ ಅವರಿಗೆ ಈ ಬಾರಿ ಹೊಸ ಸರ್ಕಾರದಲ್ಲಿ ಕಡ್ಡಾಯವಾಗಿ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಲೇಬೇಕು ಎಂದು ಈಗ ಕಲ್ಯಾಣ ಕರ್ನಾಟಕ ಭಾಗದ ಸ್ವಾಮೀಜಿಗಳ ಒಕ್ಕೂಟ ನೇರವಾಗಿ ರಂಗಪ್ರವೇಶ ಮಾಡಿದೆ.

ಖಂಡ್ರೆ ಪರಿವಾರದ ಕೊಡುಗೆ ನೆನೆದ ಶ್ರೀಗಳು
ಖಂಡ್ರೆ ಪರಿವಾರದ ಕೊಡುಗೆ ನೆನೆದ ಶ್ರೀಗಳು

ಬೀದರ್ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆದಿದ್ದು, ವಿವಿಧ ಮಠಗಳ ಪ್ರಮುಖ ಮಠಾಧೀಶರು ಮತ್ತು ಸ್ವಾಮೀಜಿಗಳು ಒಟ್ಟಾಗಿ ಸೇರಿ ಈಶ್ವರ್ ಖಂಡ್ರೆ ಅವರಿಗೆ ಡಿಸಿಎಂ ಪಟ್ಟ ನೀಡುವಂತೆ ಹೈಕಮಾಂಡ್‌ಗೆ ಹಾಗೂ ಹೊಸದಾಗಿ ನಾಯಕತ್ವ ವಹಿಸಿಕೊಳ್ಳಲಿರುವ ಸಿಎಂ ಅವರಿಗೆ ಬಹಿರಂಗವಾಗಿ ಒತ್ತಾಯಿಸಿದ್ದಾರೆ.

"ಧರ್ಮಸಿಂಗ್ ನಂತರ ಈ ಭಾಗಕ್ಕೆ ದೊಡ್ಡ ಪ್ರಾತಿನಿಧ್ಯ ಸಿಕ್ಕಿಲ್ಲ!"

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಕಲ್ಯಾಣ ಕರ್ನಾಟಕ ಭಾಗಕ್ಕೆ ದೀರ್ಘಕಾಲದಿಂದ ಆಗುತ್ತಿರುವ ರಾಜಕೀಯ ಅನ್ಯಾಯವನ್ನು ಎತ್ತಿ ತೋರಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಕಾಲದ ನಂತರ ಈ ಭಾಗದ ಯಾವುದೇ ನಾಯಕನಿಗೂ ರಾಜ್ಯ ರಾಜಕೀಯದಲ್ಲಿ ಅತ್ಯುನ್ನತ ಹಾಗೂ ಪ್ರಭಾವಿ ಹುದ್ದೆಗಳು ಸಿಕ್ಕಿಲ್ಲ. ಇದರಿಂದಾಗಿ ಈ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಎಲ್ಲೋ ಒಂದು ಕಡೆ ಹಿನ್ನಡೆಯಾಗಿದೆ ಎಂಬುದು ಸ್ವಾಮೀಜಿಗಳ ಬೇಸರವಾಗಿದೆ.

"ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲಿವೆ. ಗಡಿ ನಾಡಿನ ಜನರ ಧ್ವನಿಯಾಗಿ ಕೆಲಸ ಮಾಡಲು ಅವರಿಗೆ ಈ ದೊಡ್ಡ ಜವಾಬ್ದಾರಿ ಸಿಗಲೇಬೇಕು," ಎಂದು ಸ್ವಾಮೀಜಿಗಳು ಕಟ್ಟುನಿಟ್ಟಾಗಿ ಹೇಳಿದರು.

ಖಂಡ್ರೆ ಪರಿವಾರದ ಕೊಡುಗೆ ಮತ್ತು ಸರ್ವ ಜನಾಂಗದ ನಾಯಕತ್ವ

ಬೀದರ್ ಜಿಲ್ಲೆಯ ಇತಿಹಾಸದಲ್ಲಿ ಖಂಡ್ರೆ ಪರಿವಾರದ ಕೊಡುಗೆಯನ್ನು ಮಠಾಧೀಶರು ಈ ಸಂದರ್ಭದಲ್ಲಿ ಕೊಂಡಾಡಿದರು.

ಸ್ವಾಮೀಜಿಗಳ ಖಡಕ್ ವಾದ: "ಈಶ್ವರ್ ಖಂಡ್ರೆ ಅವರು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಶಾಸಕರಾಗಿ, ಸಚಿವರಾಗಿ ಇಡೀ ಜಿಲ್ಲೆಯಲ್ಲಿ ಸಾಲು ಸಾಲು ಅಭಿವೃದ್ಧಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಇಡೀ ದೇಶಾದ್ಯಂತ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಕೇವಲ ತಮ್ಮ ಸಮುದಾಯ ಮಾತ್ರವಲ್ಲದೆ, ಇತರೆ ಎಲ್ಲಾ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೂ ಸಮಾನ ಆದ್ಯತೆ ನೀಡಿ, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ," ಎಂದು ಸ್ವಾಮೀಜಿಗಳ ಒಕ್ಕೂಟ ಮೆಚ್ಚುಗೆ ವ್ಯಕ್ತಪಡಿಸಿತು.

ಸುದ್ದಿಗೋಷ್ಠಿಯಲ್ಲಿ ಮಠಾಧೀಶರ ದಂಡು!

ಈಶ್ವರ್ ಖಂಡ್ರೆ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂಬ ಈ ಮಹತ್ವದ ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಶ್ರೀಗಳು ಒಟ್ಟಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಭಾಲ್ಕಿ ಹಿರೇಮಠದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಹಳಬರ್ಗಾದ ಶಿವಾನಂದ ಶ್ರೀಗಳು, ಹಾವಗಿ ಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಭೇಮಳಖೇಡ ಮಠದ ಶ್ರೀಗಳು ಹಾಗೂ ಮುಚಳಂಬ ಮಠದ ಪೂಜ್ಯ ಸ್ವಾಮೀಜಿಗಳು ಸೇರಿದಂತೆ ಸುತ್ತಮುತ್ತಲಿನ ವಿವಿಧ ಮಠಗಳ ಮಠಾಧೀಶರು ಒಮ್ಮತದಿಂದ ಖಂಡ್ರೆ ಪರ ಧ್ವನಿ ಎತ್ತಿದರು.

ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಸಮಾಜದ ವಿವಿಧ ಸ್ತರಗಳಿಂದ ಮತ್ತು ಮಠಾಧೀಶರಿಂದ ಈಶ್ವರ್ ಖಂಡ್ರೆ ಪರ ಕೇಳಿ ಬರುತ್ತಿರುವ ಈ ಡಿಮ್ಯಾಂಡ್ ಈಗ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಮಟ್ಟದ ರಾಜಕೀಯ ತಲೆನೋವು ತಂದಿಟ್ಟಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕನಿಗೆ ಡಿಸಿಎಂ ಪಟ್ಟ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Latest News