Apr 24, 2026 Languages : ಕನ್ನಡ | English

ಕೃಷಿಯಲ್ಲಿ ಎಐ ಮ್ಯಾಜಿಕ್ - ಬೆಂಗಳೂರಿನಲ್ಲಿ ನಡೆದ ಕೃಷಿ ಮಹಾಸಂಗಮದ ಹೈಲೈಟ್ಸ್ ಇಲ್ಲಿದೆ ನೋಡಿ!!

ಬೆಂಗಳೂರು ಅಂದ ತಕ್ಷಣ ನಮಗೆ ನೆನಪಾಗುವುದು ಐಟಿ-ಬಿಟಿ ಕಂಪನಿಗಳು. ಆದರೆ, ಅದೇ ಬೆಂಗಳೂರು ಈಗ ಕೃಷಿ ತಂತ್ರಜ್ಞಾನದ (Agri-Tech) ಕೇಂದ್ರವಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ "ಗ್ಲೋಬಲ್ ಅಗ್ರಿ ಟೆಕ್ ಸಮ್ಮಿಟ್-2026" ಕಾರ್ಯಕ್ರಮ ಇದಕ್ಕೆ ಸಾಕ್ಷಿ. ಈ ಸಮಾವೇಶದ ಹರಿಕಾರರಾದ ಎಫ್‌ಕೆಸಿಸಿಐ ಅಧ್ಯಕ್ಷೆ ಶ್ರೀಮತಿ ಉಮಾರೆಡ್ಡಿ ಅವರು ಕೇವಲ ಉದ್ಯಮಿಯಷ್ಟೇ ಅಲ್ಲ, ದೂರದೃಷ್ಟಿಯುಳ್ಳ ನಾಯಕಿ. ಅವರ ಈ ಪ್ರಯತ್ನ ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.

ರೈತರಿಗಾಗಿ ಮರಳಿದೆ 'ಕೃಷಿಭಾಗ್ಯ
ರೈತರಿಗಾಗಿ ಮರಳಿದೆ 'ಕೃಷಿಭಾಗ್ಯ

ಕೃಷಿ ಲಾಭದಾಯಕವಾಗಲಿ ಎಂಬ ಆಶಯ
ನಮ್ಮ ದೇಶ ಕೃಷಿ ಪ್ರಧಾನವಾದರೂ, ಇಂದಿನ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿರುವುದು ಆತಂಕದ ಸಂಗತಿ. ಯಾಕೆ ಹೀಗಾಗುತ್ತಿದೆ? ಉತ್ತರ ಸರಳ—ಕೃಷಿ ಲಾಭದಾಯಕವಾಗಿ ಉಳಿಯುತ್ತಿಲ್ಲ. ಈ ಸಮ್ಮಿಟ್‌ನ ಮುಖ್ಯ ಉದ್ದೇಶವೇ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವುದು. ಕೃಷಿಯಲ್ಲಿ ಲಾಭ ಕಾಣಲು ಶುರುವಾದರೆ, ಪಟ್ಟಣಕ್ಕೆ ವಲಸೆ ಹೋಗುವ ಯುವಕರು ಖಂಡಿತಾ ಮತ್ತೆ ಮಣ್ಣಿನ ಕಡೆ ಮುಖ ಮಾಡುತ್ತಾರೆ. ಇದಕ್ಕೆ ಸರ್ಕಾರದ ಜೊತೆಗೆ ಕೈಗಾರಿಕೆಗಳೂ ಕೈಜೋಡಿಸಬೇಕಿರುವುದು ಇಂದಿನ ಅಗತ್ಯ.

ತಂತ್ರಜ್ಞಾನದ ರಾಜಧಾನಿಯಾಗಲಿ ನಮ್ಮ ಕೃಷಿ!
ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಹೇಗೆ ಜಗತ್ತಿನ ಗಮನ ಸೆಳೆದಿದೆಯೋ, ಅದೇ ರೀತಿ ಕೃಷಿ ತಂತ್ರಜ್ಞಾನದಲ್ಲೂ ಮಾದರಿಯಾಗಬೇಕು. ಈಗಿನ ಕಾಲ ಬದಲಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡಬೇಕಿದೆ. ಈ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಸಾವಯವ ಕೃಷಿ ಪ್ರದರ್ಶನ ಮತ್ತು ಹೊಸ ಬಗೆಯ ಯಂತ್ರೋಪಕರಣಗಳು ರೈತರಿಗೆ ಹೊಸ ಆವಿಷ್ಕಾರಗಳನ್ನು ಪರಿಚಯಿಸಿವೆ. ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು.

ಒಣಭೂಮಿ ರೈತರಿಗೆ 'ಕೃಷಿಭಾಗ್ಯ'ದ ಬೆಂಬಲ
ಕರ್ನಾಟಕದಲ್ಲಿ ಒಣಭೂಮಿಯ ಪ್ರಮಾಣ ಹೆಚ್ಚಿದೆ. ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಇರುವುದು ನಮ್ಮಲ್ಲೇ. ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ಕೃಷಿ ಮಾಡುವುದು ಒಂದು ಸವಾಲು. ಇಂತಹ ರೈತರಿಗೆ ನೆರವಾಗಲೆಂದೇ ನಮ್ಮ ಸರ್ಕಾರ 'ಕೃಷಿಭಾಗ್ಯ' ಯೋಜನೆಯನ್ನು ಜಾರಿಗೆ ತಂದಿತ್ತು. ಮಧ್ಯದಲ್ಲಿ ಈ ಯೋಜನೆ ಸ್ಥಗಿತಗೊಂಡಿದ್ದರೂ, ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಮರುಜಾರಿಗೊಳಿಸಿದೆ. ಇದಲ್ಲದೆ, ಸುಮಾರು 83 ಲಕ್ಷ ರೈತರಿಗೆ 70 ಸಾವಿರ ಕೋಟಿ ರೂಪಾಯಿಗಳ ಕೃಷಿ ಸಾಲ ನೀಡುವ ಮೂಲಕ ಸರ್ಕಾರ ರೈತರ ಬೆನ್ನಿಗೆ ನಿಂತಿದೆ.

ಅಭಿವೃದ್ಧಿಯ ಪಥದಲ್ಲಿ ಕರ್ನಾಟಕ
ನಮ್ಮ ರಾಜ್ಯ ಈಗಾಗಲೇ ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈಗ ಕೃಷಿ ಕ್ಷೇತ್ರದಲ್ಲೂ ಹೆಚ್ಚಿನ ಹೂಡಿಕೆಗಳು ಬರಬೇಕಿದೆ. ಕಳೆದ ವರ್ಷ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಗಳಿಗೆ ₹8 ಸಾವಿರ ಕೋಟಿ ಮೀಸಲಿಡಲಾಗಿತ್ತು. ಕೃಷಿಯಲ್ಲಿ ಹೊಸ ಹೂಡಿಕೆಗಳು ಬಂದಾಗ ಮಾತ್ರ ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಮತ್ತು ಗೌರವ ಸಿಗಲು ಸಾಧ್ಯ.

ಕೃಷಿ ಕೇವಲ ಹೊಟ್ಟೆ ತುಂಬಿಸುವ ಕಾಯಕವಾಗಬಾರದು, ಅದು ಗೌರವಯುತವಾದ ಉದ್ಯಮವಾಗಬೇಕು. ಕೈಗಾರಿಕೆಗಳು, ಸರ್ಕಾರ ಮತ್ತು ರೈತರು ಒಂದಾಗಿ ಕೆಲಸ ಮಾಡಿದರೆ 'ಬ್ರ್ಯಾಂಡ್ ಕರ್ನಾಟಕ' ಕೃಷಿ ರಂಗದಲ್ಲೂ ಮಿನುಗುವುದರಲ್ಲಿ ಸಂಶಯವಿಲ್ಲ. ರೈತರು ಇಂತಹ ತಾಂತ್ರಿಕ ಸಮಾವೇಶಗಳ ಲಾಭ ಪಡೆದು, ಹೊಸ ತಲೆಮಾರಿನ ಕೃಷಿಕರಾಗಿ ರೂಪುಗೊಳ್ಳಲಿ ಎಂಬುವುದೇ ಈ ಸಮ್ಮಿಟ್‌ನ ಆಶಯ.