ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ದಂಡ ಹಾಕಿದರೂ ಜನರು ಬದಲಾಗದಿರುವುದು, ಮನೆ ಮುಂದೆ ಕಸ ಹಾಕಿದರೂ ಭಯವಿಲ್ಲದಿರುವುದು ನಗರದಲ್ಲಿ ಸ್ವಚ್ಚತೆಗೆ ದೊಡ್ಡ ಸವಾಲಾಗಿ ಇದೀಗ ಮೆತ್ತೆ ಪರಿಣಮಿಸಿದೆ. ರಸ್ತೆಮೇಲೆ ಕಸ ಎಸೆಯುವ ಜನರ ನಿರ್ಲಕ್ಷ್ಯದಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಆದ್ರೆ ಅವರಿಗೆ ಅದು ಅರಿವಿಗೆ ಬರುತ್ತಿಲ್ಲ, ಒಂದು ವೇಳೆ ಅವರ ಉದ್ದೇಶ ಅದೇ ಆಗಿದ್ದರೆ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಟ ಅನಿರುದ್ ಅವರು ವಿಡಿಯೋ ಮೂಲಕ ಈ ವಿಷಯ ಹಂಚಿಕೊಂಡಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು "ಡೋಂಟ್ ಕೇರ್" ಮನೋಭಾವ ತಾಳಿರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಕಸ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕಾದ ಸ್ಥಳದಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರು ಕಸದ ಸಮಸ್ಯೆ ಬಗ್ಗೆ ನಟ ಅನಿರುದ್ಧ್ ತಮ್ಮ ಬೇಸರವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಜೆಪಿ ನಗರದ 1ನೇ ಹಂತದಲ್ಲಿ ಅವರು ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸಿದೆ. ಶಾಖಾಂಬರಿ ನಗರದ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಕಂಡುಬಂದಿದ್ದು, ಇಡೀ ರಸ್ತೆಯುದ್ದಕ್ಕೂ ಕಸ, ಕಡ್ಡಿ, ಪ್ಲಾಸ್ಟಿಕ್ ಕವರ್ಗಳನ್ನು ಎಸೆದಿರುವುದು ಕಂಡುಬಂದಿದೆ.
ಪಾದಾಚಾರಿ ಮಾರ್ಗ ಪೂರ್ತಿ ಕಸದ ರಾಶಿಯಿಂದ ತುಂಬಿಕೊಂಡಿದ್ದು, ಜನಸಾಮಾನ್ಯರು ಓಡಾಡುವುದು ಕಷ್ಟವಾಗಿದೆ. ಸ್ವಚ್ಚತೆಗೆ ಸಂಬಂಧಿಸಿದಂತೆ ಜನರು ಜಾಗೃತರಾಗದಿದ್ದರೆ, ನಗರದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. "ನಮ್ಮ ನಾಡು, ನಮ್ಮ ಊರು, ನಮ್ಮ ರೋಡು" ಎಂಬ ಸಂದೇಶದ ಮೂಲಕ ನಟ ಅನಿರುದ್ಧ್ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹೌದು ಸ್ವಚ್ಚತೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮನೆ ಮುಂದೆ ಕಸ ಹಾಕುವುದನ್ನು ನಿಲ್ಲಿಸಿ, ಸರಿಯಾದ ಸ್ಥಳದಲ್ಲಿ ಕಸವನ್ನು ಹಾಕುವುದು ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.