Apr 24, 2026 Languages : ಕನ್ನಡ | English

ಬ್ಯಾಂಕಾಕ್‌ನಿಂದ ಬಟ್ಟೆಗಳ ನಡುವೆ ಅಡಗಿಸಿಟ್ಟಿದ್ದ 17 ಕೆಜಿ - 'ಹೈಟೆಕ್ ಕಿಕ್ ಮಾದಕ ವಸ್ತು ಬೆಂಗಳೂರಿಗೆ ಎಂಟ್ರಿ!!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಬರೀ ಪ್ರಯಾಣಿಕರ ಓಡಾಟಕ್ಕೆ ಮಾತ್ರವಲ್ಲ, ಕಿರಾತಕ ಹೈಟೆಕ್ ಕಳ್ಳಸಾಗಾಣಿಕೆದಾರರ ಅಡ್ಡವಾಗಿಯೂ ಬದಲಾಗುತ್ತಿದೆ. ಆದರೆ, ಈ ಬಾರಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಬ್ಯಾಂಕಾಕ್‌ನಿಂದ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿ ತಂದಿದ್ದ ಭಾರಿ ಪ್ರಮಾಣದ 'ಹೈಡ್ರೋಪೋನಿಕ್ ಮಾದಕ ವಸ್ತು'ವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ನೀರಿನಲ್ಲಿ ಬೆಳೆಸುವ ಈ ಗಿಡಕ್ಕೆ ಚಿನ್ನದ ಬೆಲೆ
ನೀರಿನಲ್ಲಿ ಬೆಳೆಸುವ ಈ ಗಿಡಕ್ಕೆ ಚಿನ್ನದ ಬೆಲೆ

ಏನಿದು ಹೈಡ್ರೋಪೋನಿಕ್ ಮಾದಕ ವಸ್ತು?

ಸಾಮಾನ್ಯವಾಗಿ ಈ ಮಾದಕ ವಸ್ತುವನ್ನು ಮಣ್ಣಿನಲ್ಲಿ ಬೆಳೆಸಲಾಗುತ್ತದೆ. ಆದರೆ, ಈ ಹೈಡ್ರೋಪೋನಿಕ್ ಮಾದಕ ವಸ್ತು ಎಂಬುದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕೇವಲ ಪೌಷ್ಟಿಕಾಂಶಯುಕ್ತ ನೀರಿನಲ್ಲಿ ಬೆಳೆಸುವ ಗಿಡ. ಇದು ಸಾಮಾನ್ಯ ಮಾದಕ ವಸ್ತುವಿಗಿಂತ ಹೆಚ್ಚು ಕಿಕ್ ನೀಡುತ್ತದೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಚಿನ್ನದಷ್ಟೇ ಬೆಲೆ ಇರುತ್ತದೆ. ಇದನ್ನೇ ಟಾರ್ಗೆಟ್ ಮಾಡಿದ ಖದೀಮರು ಬೆಂಗಳೂರಿನತ್ತ ಮುಖ ಮಾಡಿದ್ದರು.

ಸತತ ಎರಡು ಕಾರ್ಯಾಚರಣೆ, 6 ಕೋಟಿ ಮಾಲು!

ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಸತತ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಇಬ್ಬರು ಆರೋಪಿಗಳು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಅವರ ನಡೆಯ ಮೇಲೆ ಅನುಮಾನಗೊಂಡ ಅಧಿಕಾರಿಗಳು, ಅವರನ್ನು ತಡೆದು ಲಗೇಜ್ ಬ್ಯಾಗ್ ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.

ವಶಪಡಿಸಿಕೊಂಡ ಮಾಲು: ಒಟ್ಟು 17.6 ಕೆಜಿ ತೂಕದ ಹೈಡ್ರೋಪೋನಿಕ್ ಮಾದಕ ವಸ್ತು.

ಮಾರುಕಟ್ಟೆ ಮೌಲ್ಯ: ಬರೋಬ್ಬರಿ 6 ಕೋಟಿ 15 ಲಕ್ಷ ರೂಪಾಯಿ!

ಅವರು ಬ್ಯಾಗ್‌ನೊಳಗೆ ಬಟ್ಟೆಗಳ ನಡುವೆ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಯಾರಿಗೂ ಸಂಶಯ ಬಾರದಂತೆ ಈ ಮಾದಕ ವಸ್ತುವನ್ನು ಪ್ಯಾಕ್ ಮಾಡಿದ್ದರು. ಆದರೆ ಅಧಿಕಾರಿಗಳ ತೀಕ್ಷ್ಣ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆರೋಪಿಗಳ ಪ್ಲಾನ್ ಹೇಗಿತ್ತು?

ಬ್ಯಾಂಕಾಕ್‌ನಿಂದ ಈ ಮಾದಕ ವಸ್ತು ತರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಲ್ಲಿಂದ ಅಗ್ಗದ ದರಕ್ಕೆ ಇದನ್ನು ಖರೀದಿಸಿ ಅಥವಾ ಸಾಗಾಣಿಕೆ ಮಾಡಲು ಒಪ್ಪಿಕೊಂಡು, ಬೆಂಗಳೂರಿನಂತಹ ಮೆಟ್ರೋ ಸಿಟಿಗಳಲ್ಲಿ ದೊಡ್ಡ ದೊಡ್ಡ ಡೀಲ್‌ಗಳನ್ನು ಕುದುರಿಸುವುದು ಇವರ ಪ್ಲಾನ್ ಆಗಿತ್ತು. ಸದ್ಯ ಇಬ್ಬರು ಆರೋಪಿಗಳನ್ನು ಕಸ್ಟಮ್ಸ್ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಪಾಸ್‌ಪೋರ್ಟ್ ಮತ್ತು ಮೊಬೈಲ್‌ಗಳನ್ನು ಸೀಜ್ ಮಾಡಿದ್ದಾರೆ.

"ಇದು ಕೇವಲ ಇಬ್ಬರು ವ್ಯಕ್ತಿಗಳು ಮಾಡಿದ ಕೆಲಸವಲ್ಲ, ಇದರ ಹಿಂದೆ ದೊಡ್ಡ ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ಇರುವ ಸಂಶಯವಿದೆ. ಇವರು ಈ ಮಾದಕ ವಸ್ತುವನ್ನು ಯಾರಿಗೆ ತಲುಪಿಸಬೇಕಿತ್ತು? ಬೆಂಗಳೂರಿನಲ್ಲಿ ಇವರ ಸಂಪರ್ಕದಲ್ಲಿ ಯಾರಿದ್ದಾರೆ? ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದೇವೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಚುರುಕು

ದೇವನಹಳ್ಳಿ ಏರ್ಪೋರ್ಟ್ ಪೊಲೀಸರು ಕೂಡ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹಿನ್ನೆಲೆ ಕೆದಕುತ್ತಿದ್ದಾರೆ. ಕೇವಲ ಹಣದ ಆಸೆಗೆ ಬಿದ್ದು ಈ ರೀತಿ ಮಾದಕ ವಸ್ತು ಸಾಗಾಣಿಕೆ ಮಾಡಿ ಈಗ ಇಡೀ ಬದುಕನ್ನೇ ಜೈಲು ಪಾಲಾಗಿಸಿಕೊಂಡಿದ್ದಾರೆ ಈ ಕಿರಾತಕರು. ಸಿಲಿಕಾನ್ ಸಿಟಿಯ ಯುವಜನತೆಯನ್ನು ಗುರಿಯಾಗಿಸಿಕೊಂಡು ಬರುತ್ತಿದ್ದ ಈ ಭಾರಿ ಪ್ರಮಾಣದ ಅಮಲು ಪದಾರ್ಥ ಈಗ ಪೊಲೀಸರ ವಶದಲ್ಲಿದೆ.

Latest News