Dec 12, 2025 Languages : ಕನ್ನಡ | English

ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಯೋಧ ಸಾವು!! ಇನ್ನೇನು ಊರಿಗೆ ಬರಬೇಕು ಆಗಿದ್ದೆ ಈ ದುರಂತ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಆಡಗಲ್ ಗ್ರಾಮದ ಯೋಧ ದುರ್ಗಪ್ಪ ಮಾದರ ದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಕರ್ತವ್ಯದ ವೇಳೆ ಸಂಭವಿಸಿದ ಈ ದುರ್ಘಟನೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ. ದೆಹಲಿಯಲ್ಲಿ ಕರ್ತವ್ಯದ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಗಪ್ಪ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಈ ಸುದ್ದಿ ಗ್ರಾಮದಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಿದೆ.

ಬಾಗಲಕೋಟೆ ಯೋಧ ಸಾವು
ಬಾಗಲಕೋಟೆ ಯೋಧ ಸಾವು

ದುರ್ಗಪ್ಪ 2010ರಲ್ಲಿ ಭಾರತೀಯ ಸೇನೆಗೆ ಸೇರಿದರು. ಬೆಂಗಳೂರಿನ ಎಂಇಜಿ ಸೆಂಟರ್ ನಲ್ಲಿ ತರಬೇತಿ ಪಡೆದ ಅವರು 2012ರಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು, ಅಲಹಾಬಾದ್ ಬಳಿಕ ದೆಹಲಿಯ ಆರ್ಮಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಕರ್ತವ್ಯದ ಮೇಲಿದ್ದಾಗಲೇ ಅಪಘಾತ ಸಂಭವಿಸಿ ಅವರ ಜೀವ ಕಳೆದುಕೊಂಡರು. ಮೃತ ಯೋಧ ಆಡಗಲ್ ಗ್ರಾಮದ ನಿವಾಸಿ. ಪತ್ನಿ ಪೂಜಾ, ಸಹೋದರಿ ಹಾಗೂ ತಾಯಿ ಇದ್ದಾರೆ. ಡಿಸೆಂಬರ್ 10ರಂದು ಸ್ವಗ್ರಾಮಕ್ಕೆ ರಜೆ ಪಡೆದು ಬರಲು ಯೋಜಿಸಿದ್ದರು. ಗ್ರಾಮದಲ್ಲಿ ನಡೆಯಲಿರುವ ಕೋನಮ್ಮದೇವಿ ಕಾರ್ತಿಕೋತ್ಸವದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಆದರೆ ವಿಧಿಯಾಟದಲ್ಲಿ ರಸ್ತೆ ಅಪಘಾತವು ಅವರ ಕನಸುಗಳನ್ನು ನಾಶಮಾಡಿತು.

ಯೋಧನ ಪಾರ್ಥಿವ ಶರೀರ ಸೋಮವಾರ ಸಂಜೆ ಆಡಗಲ್ ಗ್ರಾಮಕ್ಕೆ ತಲುಪಲಿದೆ. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಗ್ರಾಮದಲ್ಲಿ ಶೋಕಾಚರಣೆ ನಡೆಯುತ್ತಿದೆ. ಯೋಧನ ತ್ಯಾಗವನ್ನು ನೆನೆದು ಗ್ರಾಮಸ್ಥರು ಕಣ್ಣೀರಿನಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.