Feb 16, 2026 Languages : ಕನ್ನಡ | English

ಬಾಗಲಕೋಟೆ ಬ್ರೇಕಿಂಗ್: ಮೂರಾರ್ಜಿ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು!

ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿರುವ ಮೂರಾರ್ಜಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ಏಕಾಏಕಿ ನಾಪತ್ತೆಯಾಗಿದ್ದ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿತ್ತು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿಯರು, ತಡರಾತ್ರಿ ವಿಜಯಪುರದಲ್ಲಿ ಪತ್ತೆಯಾಗಿದ್ದಾರೆ. ಮೂರಾರ್ಜಿ ವಸತಿ ಶಾಲೆಯ 10ನೇ ತರಗತಿಯ ನಾಲ್ಕು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೊರಟಿದ್ದು, ಶಾಲಾ ಆಡಳಿತದ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳು ಎದ್ದಿವೆ. ಪ್ರಿನ್ಸಿಪಾಲ್ ಮಲಕಪ್ಪ ಹಡಪದ ಹಾಗೂ ವಾರ್ಡನ್ ಚಿನ್ನಪ್ಪ ಮೇತ್ರಿ ಅವರ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಮೂರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಪತ್ತೆ – ವಿಜಯಪುರದಲ್ಲಿ ಪತ್ತೆ!
ಮೂರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಪತ್ತೆ – ವಿಜಯಪುರದಲ್ಲಿ ಪತ್ತೆ!

ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದ ನಾಲ್ಕೈದು ಗಂಟೆಗಳ ಬಳಿಕವೇ ಸಿಬ್ಬಂದಿ ಎಚ್ಚೆತ್ತಿದ್ದು, ತಡರಾತ್ರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ದೂರು ದಾಖಲಿಸಿದ ನಂತರ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ವಿದ್ಯಾರ್ಥಿನಿಯರ ಲೋಕೇಷನ್ ಪತ್ತೆಹಚ್ಚಿದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿನಿಯರು ವಸತಿ ಶಾಲೆಯ ಕಂಪೌಂಡ್ ಹಾರಿ ಹೊರ ಹೋಗಿದ್ದಾರೆ. ನಂತರ ಅವರು ಬಸ್ ಮೂಲಕ ವಿಜಯಪುರಕ್ಕೆ ತೆರಳಿರುವುದು ತಿಳಿದುಬಂದಿದೆ. ನಸುಕಿನ ಜಾವ 2 ಗಂಟೆಗೆ ವಿಜಯಪುರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.

ಈ ಘಟನೆ ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ಬಯಲಿಗೆಳೆದಿದ್ದು, ವಿದ್ಯಾರ್ಥಿನಿಯರ ಸುರಕ್ಷತೆ ಕುರಿತಂತೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರು ಏಕೆ ಹಾಸ್ಟೆಲ್‌ನಿಂದ ಹೊರಟರು, ಅವರ ನಿರ್ಧಾರದ ಹಿಂದೆ ಏನು ಕಾರಣ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೂರಾರ್ಜಿ ವಸತಿ ಶಾಲೆಯಂತಹ ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಈ ಘಟನೆ ಆಡಳಿತದ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ. ವಿದ್ಯಾರ್ಥಿನಿಯರು ಪತ್ತೆಯಾಗಿರುವುದು ಸಂತೋಷದ ಸಂಗತಿಯೇ ಆಗಿದ್ದರೂ, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. 

Latest News