ಬೆಂಗಳೂರಿನ ಪ್ರಾಣಿ ಪ್ರೇಮಿಗಳಿಗೆ ಇವತ್ತು ಸಖತ್ ಗುಡ್ ನ್ಯೂಸ್ ಸಿಕ್ಕಿದೆ. ಇಷ್ಟು ದಿನ ಟಿವಿ ಅಥವಾ ಡಿಸ್ಕವರಿ ಚಾನಲ್ಗಳಲ್ಲಿ ಮಾತ್ರ ನೋಡ್ತಿದ್ದ ಆಫ್ರಿಕನ್ ಚೀತಾಗಳು ಈಗ ನಮ್ಮ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿವೆ! ಹೌದು, ದಕ್ಷಿಣ ಆಫ್ರಿಕಾದಿಂದ ಬರೊಬ್ಬರಿ ನಾಲ್ಕು ಚೀತಾಗಳು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಂದಿಳಿದಿವೆ.
ಮಧ್ಯರಾತ್ರಿ ಚೀತಾಗಳನ್ನು ಸ್ವಾಗತಿಸಿದ ಸಚಿವ ಖಂಡ್ರೆ
ಈ ಹೊಸ ಅತಿಥಿಗಳನ್ನು ಬರಮಾಡಿಕೊಳ್ಳಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಹಾಜರಾಗಿದ್ದರು. ಕಲ್ಬುರ್ಗಿಯಲ್ಲಿ ಕಾರ್ಯಕ್ರಮ ಮುಗಿಸಿ ಬಂದಿದ್ದ ಸಚಿವರು, ಹೈದರಾಬಾದ್ ಮಾರ್ಗವಾಗಿ ನೇರವಾಗಿ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ತೆರಳಿ ಚೀತಾಗಳನ್ನು ಬರಮಾಡಿಕೊಂಡರು. ವಿದೇಶದಿಂದ ಬಂದ ಈ ವೇಗದ ಪ್ರಾಣಿಗಳಿಗೆ ನಮ್ಮ ನಾಡಿನ ಹವಾಮಾನಕ್ಕೆ ತಕ್ಕಂತೆ ಅದ್ದೂರಿ ಸ್ವಾಗತ ದೊರೆತಿದೆ.
ಮಧ್ಯರಾತ್ರಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ನಾಲ್ಕು ಚೀತಾಗಳನ್ನು ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದೆನು. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದ್ರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ತಕ್ಷಣವೇ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶಿ ಅತಿಥಿಗಳನ್ನು… pic.twitter.com/h7RHOt0ihI
— Eshwar Khandre (@eshwar_khandre) April 18, 2026
ಯಾಕೆ ಈ ಚೀತಾಗಳು ಅಷ್ಟು ವಿಶೇಷ?
ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಚೀತಾಗಳು ಯಥೇಚ್ಛವಾಗಿ ಓಡಾಡುತ್ತಿದ್ದವು. ಆದರೆ ಕಾಲಕ್ರಮೇಣ ಅವು ಸಂಪೂರ್ಣವಾಗಿ ಅಳಿದು ಹೋಗಿವೆ. ಈಗಿನ ಜನರೇಶನ್ಗೆ ಈ ಅಪರೂಪದ ಪ್ರಾಣಿಯನ್ನು ನೋಡುವ ಅವಕಾಶವೇ ಇಲ್ಲದಂತಾಗಿತ್ತು. ಅಟ್ಲೀಸ್ಟ್ ಮೃಗಾಲಯದಲ್ಲಾದರೂ ಜನ ಈ ಸುಂದರ ವನ್ಯಜೀವಿಗಳನ್ನು ನೋಡಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಸಾಹಸಕ್ಕೆ ಕೈ ಹಾಕಿದೆ. ಸಚಿವರು ತಮ್ಮ ಫೇಸ್ಬುಕ್ ಖಾತೆಯಲ್ಲೂ ಈ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಹಂಚಿಕೊಂಡಿದ್ದಾರೆ.
ಹಳೇ ತಪ್ಪುಗಳಿಂದ ಕಲಿತ ಪಾಠ: ಬಿಗಿ ಭದ್ರತೆ!
ಈ ಹಿಂದೆ 2022ರಲ್ಲಿ 'ಪ್ರಾಜೆಕ್ಟ್ ಚೀತಾ' ಅಡಿಯಲ್ಲಿ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ಗೆ ಚೀತಾಗಳನ್ನು ತಂದಾಗ ಸಾಕಷ್ಟು ಸಮಸ್ಯೆಗಳಾಗಿದ್ದವು. ಹವಾಮಾನ ವೈಪರೀತ್ಯ, ಇನ್ಫೆಕ್ಷನ್ ಮತ್ತು ಪರಸ್ಪರ ಜಗಳಗಳಿಂದಾಗಿ ಸುಮಾರು 10ಕ್ಕೂ ಹೆಚ್ಚು ಚೀತಾಗಳು ಮೃತಪಟ್ಟಿದ್ದವು. ಆ ಘಟನೆಯಿಂದ ಪಾಠ ಕಲಿತಿರುವ ನಮ್ಮ ಅರಣ್ಯ ಇಲಾಖೆ ಈಗ ಫುಲ್ ಅಲರ್ಟ್ ಆಗಿದೆ.
ಬನ್ನೇರುಘಟ್ಟದಲ್ಲಿ ಏನೆಲ್ಲಾ ವ್ಯವಸ್ಥೆ ಇದೆ?
30 ದಿನಗಳ ಕ್ವಾರಂಟೈನ್: ಬಂದ ತಕ್ಷಣ ಚೀತಾಗಳನ್ನು ಜನರ ಮುಂದೆ ಬಿಡುವುದಿಲ್ಲ. ಮೊದಲು ಒಂದು ತಿಂಗಳು ಅವುಗಳನ್ನು ಪ್ರತ್ಯೇಕವಾಗಿ ಇರಿಸಿ ಹವಾಮಾನಕ್ಕೆ ಹೊಂದಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಸ್ಪೆಷಲ್ ಡಯಟ್: ವಿದೇಶಿ ಅತಿಥಿಗಳಿಗೆ ಬೇಕಾದ ವಿಶೇಷ ಆಹಾರದ ವ್ಯವಸ್ಥೆಯನ್ನು ಅಧಿಕಾರಿಗಳು ಈಗಾಗಲೇ ಮಾಡಿದ್ದಾರೆ.
ಹೆಲ್ತ್ ಚೆಕಪ್: ಪ್ರತಿಕ್ಷಣವೂ ಪಶುವೈದ್ಯಾಧಿಕಾರಿಗಳು ಚೀತಾಗಳ ಮೇಲೆ ಕಣ್ಣಿಟ್ಟಿದ್ದು, ಅವುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಸುರಕ್ಷಿತ ಸಾಗಾಟ: ವಿಮಾನ ನಿಲ್ದಾಣದಿಂದ ಬನ್ನೇರುಘಟ್ಟಕ್ಕೆ ಚೀತಾಗಳನ್ನು ಅತ್ಯಂತ ಜಾಗರೂಕತೆಯಿಂದ ಶಿಫ್ಟ್ ಮಾಡಲಾಗಿದೆ.
ಮಕ್ಕಳಿಗೆ ಇದು ಸಖತ್ ಫೀಸ್ಟ್!
ಬನ್ನೇರುಘಟ್ಟಕ್ಕೆ ಬರುವ ಪ್ರವಾಸಿಗರಿಗೆ ಇನ್ನು ಮುಂದೆ ಸಿಂಹ ಮತ್ತು ಹುಲಿಗಳ ಜೊತೆಗೆ ಈ ಚಿರತೆಗಿಂತಲೂ ವೇಗವಾಗಿ ಓಡುವ ಚೀತಾಗಳನ್ನು ನೋಡುವ ಸೌಭಾಗ್ಯ ಸಿಗಲಿದೆ. ಆದರೆ ಸದ್ಯಕ್ಕೆ ಇವುಗಳು ಕ್ವಾರಂಟೈನ್ನಲ್ಲಿ ಇರುವುದರಿಂದ, ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲು ಸ್ವಲ್ಪ ಸಮಯ ಹಿಡಿಯಲಿದೆ.
ಬೆಂಗಳೂರಿನ ಬನ್ನೇರುಘಟ್ಟ ಈಗ ಮತ್ತೊಂದು ದೊಡ್ಡ ಆಕರ್ಷಣೆಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಚಿವರ ಈ ಕಾಳಜಿ ಮತ್ತು ಅಧಿಕಾರಿಗಳ ಶ್ರಮದಿಂದ ಈ ಆಫ್ರಿಕನ್ ಚೀತಾಗಳು ನಮ್ಮ ಬೆಂಗಳೂರಿನಲ್ಲಿ ಹಾಯಾಗಿ ಇರಲಿ ಅನ್ನೋದು ಎಲ್ಲರ ಆಶಯ.