ಕುವೈತ್ ಏರ್‌ಪೋರ್ಟ್‌ ಮೇಲೆ ಇರಾನ್ ಡ್ರೋನ್ ದಾಳಿ - ಕನ್ನಡಿಗರು ಸೇರಿ ಲಕ್ಷಾಂತರ ಭಾರತೀಯರಲ್ಲಿ ನಡುಕ!!

ಗಲ್ಫ್ ದೇಶಗಳಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಜೋರಾಗಿದೆ. ಇಷ್ಟು ದಿನ ನೆಮ್ಮದಿಯಾಗಿದ್ದ ಕುವೈತ್ ದೇಶದಲ್ಲೀಗ ಅಕ್ಷರಶಃ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಮಿಲಿಟರಿ ಏಕಾಏಕಿ ಭೀಕರ ಡ್ರೋನ್ ದಾಳಿ ನಡೆಸಿದ್ದು, ದುರದೃಷ್ಟವಶಾತ್ ಅಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಹೆಮ್ಮೆಯ ಭಾರತೀಯ ಪ್ರಜೆಯೊಬ್ಬರು ಈ ದಾಳಿಗೆ ಬಲಿಯಾಗಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ಕುವೈತ್ ಮತ್ತು ಇತರ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರ ಕುಟುಂಬಗಳಲ್ಲಿ ನಡುಕ ಶುರುವಾಗಿದೆ. ಜೂನ್ 3 ರಂದು ನಡೆದ ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಗಲ್ಫ್ ಉದ್ಯೋಗಿಗಳಿಗೆ ಕಾದಿದೆಯಾ ಕಂಟಕ? ಕುವೈತ್ ಘೋರ ದುರಂತ! | Photo Credit: Sushma Chakre
ಗಲ್ಫ್ ಉದ್ಯೋಗಿಗಳಿಗೆ ಕಾದಿದೆಯಾ ಕಂಟಕ? ಕುವೈತ್ ಘೋರ ದುರಂತ! | Photo Credit: Sushma Chakre

ರನ್-ವೇ ಮೇಲೆಯೇ ಅಪ್ಪಳಿಸಿದ ಸರಣಿ ಡ್ರೋನ್‌ಗಳು!

ಸ್ಥಳೀಯ ಮೂಲಗಳ ಪ್ರಕಾರ, ಬುಧವಾರದಂದು ಕುವೈತ್ ಏರ್‌ಪೋರ್ಟ್ ಎಂದಿನಂತೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ವಿಮಾನಗಳ ಹಾರಾಟ, ಪ್ರಯಾಣಿಕರ ಓಡಾಟ ಜೋರಾಗಿಯೇ ಇತ್ತು. ಆದರೆ, ನೋಡನೋಡುತ್ತಿದ್ದಂತೆ ಆಕಾಶದಿಂದ ಬಂದ ಸರಣಿ ಡ್ರೋನ್‌ಗಳು ವಿಮಾನ ನಿಲ್ದಾಣದ ಪ್ರಮುಖ ಟರ್ಮಿನಲ್ ಮತ್ತು ತಾಂತ್ರಿಕ ವಿಭಾಗಗಳ ಮೇಲೆ ಅಪ್ಪಳಿಸಲು ಶುರುಮಾಡಿದವು. ಭಾರಿ ಶಬ್ದದೊಂದಿಗೆ ಡ್ರೋನ್‌ಗಳು ಬ್ಲಾಸ್ಟ್ ಆಗುತ್ತಿದ್ದಂತೆ ಇಡೀ ಏರ್‌ಪೋರ್ಟ್ ಆವರಣ ಧೂಳು ಮತ್ತು ಹೊಗೆಯಿಂದ ಆವೃತವಾಯಿತು. ಅಲ್ಲಿ ಸಾಲು ಸಾಲು ವಿಮಾನಗಳು ಲ್ಯಾಂಡ್ ಆಗಬೇಕಿತ್ತು, ನೂರಾರು ಪ್ರಯಾಣಿಕರು ಲಗೇಜ್ ಹಿಡಿದು ನಿಂತಿದ್ದರು. ಅಷ್ಟರಲ್ಲೇ ಈ ದುರಂತ ಸಂಭವಿಸಿದೆ.

ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಪ್ಯಾಸೆಂಜರ್ ಟರ್ಮಿನಲ್ ಕಟ್ಟಡದ ಗಾಜುಗಳು ಪುಡಿಪುಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕುವೈತ್ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಅಧಿಕಾರಿಗಳು ತಕ್ಷಣವೇ ರನ್-ವೇ ಆಪರೇಷನ್ಸ್‌ಗಳನ್ನು ಬಂದ್ ಮಾಡಿದರು. ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿ, ಹತ್ತಿರದಲ್ಲಿದ್ದ ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಯಿತು. ಇಡೀ ಏರ್‌ಪೋರ್ಟ್ ಅನ್ನು ಸೇನಾ ಕಂಟ್ರೋಲ್‌ಗೆ ಒಪ್ಪಿಸಲಾಗಿದೆ.

ಕರ್ತವ್ಯದಲ್ಲಿದ್ದಾಗಲೇ ಭಾರತೀಯನ ಸಾವು: ಮರುಗಿದ ರಾಯಭಾರ ಕಚೇರಿ

ಈ ಭೀಕರ ದಾಳಿ ನಡೆಯುವಾಗ ಕುವೈತ್ ಏರ್‌ಪೋರ್ಟ್‌ನ ತಾಂತ್ರಿಕ ಹಾಗೂ ಮೇಂಟೆನೆನ್ಸ್ (ನಿರ್ವಹಣಾ) ವಿಭಾಗದಲ್ಲಿ ನಮ್ಮ ಭಾರತೀಯ ಪ್ರಜೆಯೊಬ್ಬರು ಪ್ರಾಮಾಣಿಕವಾಗಿ ತಮ್ನ ಕೆಲಸ ನಿರ್ವಹಿಸುತ್ತಿದ್ದರು. ದುರದೃಷ್ಟವಶಾತ್, ಡ್ರೋನ್ ಒಂದು ಇವರು ಕೆಲಸ ಮಾಡುತ್ತಿದ್ದ ಜಾಗದ ಮೇಲೆಯೇ ಬಿದ್ದಿದ್ದರಿಂದ, ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರ ಹೆಸರು ಮತ್ತು ಊರಿನ ವಿವರಗಳನ್ನು ಭದ್ರತಾ ಕಾರಣಗಳಿಗಾಗಿ ಕುವೈತ್ ಸರ್ಕಾರಿ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರ ಕಚೇರಿ ಇನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಘಟನೆ ತಿಳಿಯುತ್ತಿದ್ದಂತೆ ಅಲರ್ಟ್ ಆಗಿರುವ ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ (Indian Embassy), ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ರವಾನಿಸಲು ಕುವೈತ್ ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಕುವೈತ್‌ನಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಬಹುತೇಕರು ಇಂಜಿನಿಯರ್‌ಗಳು, ಐಟಿ ಉದ್ಯೋಗಿಗಳು, ನರ್ಸ್‌ಗಳು ಮತ್ತು ಲೇಬರ್ ಕೆಲಸ ಮಾಡುವವರಾಗಿದ್ದಾರೆ. ಈ ಘಟನೆಯಿಂದಾಗಿ ಎಲ್ಲರಲ್ಲೂ ಭೀತಿ ಮೂಡಿದ್ದು, ರಾಯಭಾರ ಕಚೇರಿಯು "ಯಾರೂ ಗಾಬರಿಯಾಗಬೇಡಿ, ಅನಗತ್ಯವಾಗಿ ಹೊರಗಡೆ ಓಡಾಡಬೇಡಿ ಮತ್ತು ಸ್ಥಳೀಯ ಸರ್ಕಾರದ ಗೈಡ್‌ಲೈನ್ಸ್‌ ಪಾಲಿಸಿ" ಎಂದು ಪ್ರಕಟಣೆ ಹೊರಡಿಸಿದೆ.

ಯುದ್ಧದ ಕಿಚ್ಚಿಗೆ ಅಮಾಯಕರು ಬಲಿ: ರಕ್ಷಣಾ ತಜ್ಞರ ವಿಶ್ಲೇಷಣೆ

ನಿಮಗೆ ಗೊತ್ತಿರಲಿ, ಇತ್ತೀಚಿನ ದಿನಗಳಲ್ಲಿ ಇರಾನ್ ದೇಶ ಹಾಗೂ ಅಮೆರಿಕದ ಬೆಂಬಲ ಹೊಂದಿರುವ ಗಲ್ಫ್ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ತಾರಕಕ್ಕೇರಿದೆ. ಅಮೆರಿಕದ ಮಿಲಿಟರಿ ಬೇಸ್‌ಗಳು ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಪೋರ್ಟ್ ಮಾಡುವ ದೇಶಗಳನ್ನು ಟಾರ್ಗೆಟ್ ಮಾಡಿ ಇರಾನ್ ಈ ತರಹದ ದಾಳಿಗಳನ್ನು ನಡೆಸುತ್ತಿದೆ ಎಂದು ಡಿಫೆನ್ಸ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಆದರೆ, ಕುವೈತ್‌ನಂತಹ ಯಾವುದೇ ವಿವಾದಗಳಿಲ್ಲದ, ಶಾಂತಿಯುತ ದೇಶದ ಸಿವಿಲಿಯನ್ (ನಾಗರಿಕ) ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ಮಾಡಿರುವುದು ಇಡೀ ವಿಶ್ವ ಸಂಸ್ಥೆ ಮತ್ತು ಜಾಗತಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಯುದ್ಧದ ಹೆಸರಲ್ಲಿ ಅಮಾಯಕ ನಾಗರಿಕರನ್ನು, ಅದರಲ್ಲೂ ಬೇರೆ ದೇಶದಿಂದ ಬಂದು ದುಡಿಯುತ್ತಿರುವ ಕಾರ್ಮಿಕರನ್ನು ಬಲಿಪಡೆಯುತ್ತಿರುವುದು ನಿಜಕ್ಕೂ ಖಂಡನೀಯ.

ಪ್ರಸ್ತುತ ಕುವೈತ್ ಏರ್‌ಪೋರ್ಟ್‌ನಲ್ಲಿ ಬಿಗಿ ಪೊಲೀಸ್ ಹಾಗೂ ಮಿಲಿಟರಿ ಭದ್ರತೆ ನಿಯೋಜಿಸಲಾಗಿದೆ. ಹಾನಿಗೊಳಗಾದ ಭಾಗಗಳನ್ನು ದುರಸ್ತಿ ಮಾಡುವ ಕೆಲಸ ಯುದ್ಧೋಪಾದಿಯಲ್ಲಿ ಸಾಗುತ್ತಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ವಿಮಾನಗಳ ಸಂಚಾರ ಎಂದಿನ ಸ್ಥಿತಿಗೆ ಬರಬಹುದು ಎನ್ನಲಾಗಿದೆ. ಆದರೆ, ಈ ದಾಳಿ ಗಲ್ಫ್ ದೇಶಗಳಲ್ಲಿರುವ ಭಾರತೀಯರ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಮ್ಮ ದೇಶದ ವಿದೇಶಾಂಗ ಸಚಿವಾಲಯ ಕೂಡ ಈ ಇಡೀ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

Latest News

Related News