Mar 18, 2026 Languages : ಕನ್ನಡ | English

ಮೈಸೂರು ಅರಮನೆಯಲ್ಲಿ ಯುಗಾದಿ ಸಂಗೀತೋತ್ಸವ - ಸಾಂಸ್ಕೃತಿಕ ಕಲಾ ವೈಭವಕ್ಕೆ ಸಾಕ್ಷಿಯಾದ ಅರಮನೆ ನಗರಿ!!

ಸಾಂಸ್ಕೃತಿಕ ನಗರಿ ಮೈಸೂರು ಯಾವಾಗಲೂ ತನ್ನ ಕಲೆ ಮತ್ತು ಪರಂಪರೆಗೆ ಹೆಸರುವಾಸಿ. ಈ ಬಾರಿ 2026ರ "ಪರಾಭವ ಸಂವತ್ಸರ" ಯುಗಾದಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಮೈಸೂರು ಅರಮನೆ ಮಂಡಳಿಯು ಅದ್ದೂರಿಯಾದ "ಯುಗಾದಿ ಸಂಗೀತೋತ್ಸವ-2026" ಅನ್ನು ಆಯೋಜಿಸಿದೆ. ಮಾರ್ಚ್ 16 ರಿಂದ ಮಾರ್ಚ್ 22 ರವರೆಗೆ ನಡೆಯುತ್ತಿರುವ ಈ ಕಲಾ ಉತ್ಸವವು ಅರಮನೆಯ ಆವರಣದಲ್ಲಿ ಸಂಗೀತ ಮತ್ತು ನೃತ್ಯದ ಹೊಳೆಯನ್ನೇ ಹರಿಸುತ್ತಿದೆ.

ಅರಮನೆ ಆವರಣದಲ್ಲಿ ಏಳು ದಿನಗಳ ಕಲಾ ಸಂಭ್ರಮ;
ಅರಮನೆ ಆವರಣದಲ್ಲಿ ಏಳು ದಿನಗಳ ಕಲಾ ಸಂಭ್ರಮ;

ಉತ್ಸವದ ವಿಶೇಷತೆ ಮತ್ತು ಉದ್ದೇಶ

ಈ ಸಂಗೀತೋತ್ಸವದ ಮುಖ್ಯ ಉದ್ದೇಶವೆಂದರೆ ನಮ್ಮ ನಾಡಿನ ಸಂಸ್ಕೃತಿ, ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಕಲೆಗಳನ್ನು ಜನ ಸಾಮಾನ್ಯರಿಗೆ ಹತ್ತಿರ ಮಾಡುವುದು. ಯುಗಾದಿ ಎಂದರೆ ಹೊಸ ವರ್ಷದ ಆರಂಭ, ಈ ಸಂಭ್ರಮವನ್ನು ಕೇವಲ ಮನೆಯಲ್ಲಿ ಆಚರಿಸದೆ, ಎಲ್ಲರೂ ಒಟ್ಟಾಗಿ ಅರಮನೆಯಂತಹ ಪವಿತ್ರ ಹಾಗೂ ಐತಿಹಾಸಿಕ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ವಿಶೇಷವಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅವರು, "ಸಂಸ್ಕೃತಿಯ ಮೂಲಕ ಹಬ್ಬದ ಸಂತೋಷವನ್ನು ಹಂಚುವುದೇ ಈ ಉತ್ಸವದ ಗುರಿ" ಎಂದು ತಿಳಿಸಿದ್ದಾರೆ.

ದಿನಾಂಕವಾರು ಪ್ರಮುಖ ಕಾರ್ಯಕ್ರಮಗಳ ವಿವರ

ಈ ಏಳು ದಿನಗಳ ಉತ್ಸವದಲ್ಲಿ ಪ್ರತಿದಿನವೂ ಒಂದಲ್ಲ ಒಂದು ವಿಶೇಷ ಕಲಾ ಪ್ರದರ್ಶನಗಳು ನಡೆಯುತ್ತಿವೆ.

 ಮಾರ್ಚ್ 19ರ ಸಂಭ್ರಮ: ಈ ದಿನದ ಕಾರ್ಯಕ್ರಮವು ವಿದ್ವಾನ್ ರವಿ ಎಂ.ಬಿ. ಅವರ ಸ್ಯಾಕ್ಸೋಫೋನ್ ವಾದನದೊಂದಿಗೆ ಅದ್ಧೂರಿಯಾಗಿ ಆರಂಭವಾಗಲಿದೆ. ಯುಗಾದಿಯ ವಿಶೇಷವಾದ  'ಪಂಚಾಂಗ ಶ್ರವಣ' ಕೂಡ ಇದೇ ದಿನ ನಡೆಯಲಿದೆ. ರಾತ್ರಿಯ ವೇಳೆಯಲ್ಲಿ ಖ್ಯಾತ ಗಾಯಕ ಅಜಯ್ ವಾರಿಯರ್ ಮತ್ತು ಅವರ ತಂಡದಿಂದ ನಡೆಯುವ 'ಗೀತೋತ್ಸವ' ಪ್ರೇಕ್ಷಕರನ್ನು  ಮಂತ್ರಮುಗ್ಧಗೊಳಿಸಲಿದೆ.

 ಮಾರ್ಚ್ 20ರ ಆಕರ್ಷಣೆ: ಅಂದು ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯದ ಜೊತೆಗೆ ಜಾನಪದ ಕಲೆಗಳ ಸಮ್ಮಿಲನವಿರಲಿದೆ. ವಿಶೇಷವಾಗಿ ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ ಅವರ  ನೇತೃತ್ವದಲ್ಲಿ, ಜನಪ್ರಿಯ ಗಾಯಕಿ ಅನುರಾಧ ಭಟ್ ಮತ್ತು ತಂಡದವರು ನಡೆಸಿಕೊಡುವ "ಭಾವ ಯುಗಾದಿ" ಸಂಗೀತ ಸಂಜೆ ಎಲ್ಲರ ಮನ ಗೆಲ್ಲಲಿದೆ.

 ಮಾರ್ಚ್ 21ರ ವೈವಿಧ್ಯತೆ: ಈ ದಿನ "ಸರ್ವಂ ಶಿವಮಯಂ" ಎಂಬ ಅದ್ಭುತ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಸಂತೂರ್ ವಾದನ ಮತ್ತು ವೇಣುತ್ರಯ ಕಛೇರಿಗಳು  ನಡೆಯಲಿವೆ. ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿರುವ ಖ್ಯಾತ ಗಾಯಕರು ಅಂದು ಸಂಗೀತ ಗಾನಾಮೃತವನ್ನು ಉಣಬಡಿಸಲಿದ್ದಾರೆ.

ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಮೈಸೂರು ಅರಮನೆಯ ವಿದ್ಯುತ್ ದೀಪಾಲಂಕಾರದ ನಡುವೆ ನಡೆಯುವ ಈ ಸಂಗೀತೋತ್ಸವವನ್ನು ನೋಡಲು ಕಣ್ಣುಗಳೇ ಸಾಲದು. ಶಾಸ್ತ್ರೀಯ ಸಂಗೀತ ಪ್ರಿಯರಿಗೆ ಮಾತ್ರವಲ್ಲದೆ, ಸಿನಿಮಾ ಗೀತೆಗಳು ಮತ್ತು ಜಾನಪದ ಹಾಡುಗಳನ್ನು ಇಷ್ಟಪಡುವ ಯುವಜನತೆಗೂ ಇಲ್ಲಿ ಸಾಕಷ್ಟು ಮನರಂಜನೆ ಇದೆ. ಕುಟುಂಬ ಸಮೇತರಾಗಿ ಬಂದು ಈ ಕಲಾ ವೈಭವವನ್ನು ಆನಂದಿಸಲು ಸಾರ್ವಜನಿಕರಿಗೆ ಮುಕ್ತವಾಗಿ ಆಹ್ವಾನ ನೀಡಲಾಗಿದೆ. ಮೈಸೂರು ಅರಮನೆ ಆವರಣವು ಈಗ ಕಲಾಕಾಶದಂತೆ ಕಂಗೊಳಿಸುತ್ತಿದೆ. ಈ ಯುಗಾದಿ ಸಂಗೀತೋತ್ಸವವು ನಗರದ ಜನರಿಗೆ ಮತ್ತು ಪ್ರವಾಸಿಗರಿಗೆ ಒಂದು ಮರೆಯಲಾಗದ ಹಬ್ಬದ ಅನುಭವವನ್ನು ನೀಡುತ್ತಿದೆ ಎಂಬುದು ಖಚಿತ.

Latest News