ಮೈಸೂರು ರೇಷ್ಮೆ ಸೀರೆ ಎಂದರೆ ಕೇವಲ ಒಂದು ವಸ್ತ್ರವಲ್ಲ, ಅದು ಕರ್ನಾಟಕದ ಹೆಮ್ಮೆ ಮತ್ತು ಪರಂಪರೆಯ ಪ್ರತೀಕ. ಅತಿ ಮೃದುವಾದ ವಿನ್ಯಾಸ ಮತ್ತು ಆಕರ್ಷಕ ನೋಟದಿಂದಾಗಿ ಪ್ರತಿಯೊಬ್ಬ ಮಹಿಳೆಯ ವಾರ್ಡ್ರೋಬ್ನಲ್ಲಿ ಒಂದು ಮೈಸೂರು ಸಿಲ್ಕ್ ಸೀರೆಯಾದರೂ ಇರಲೇಬೇಕು ಎಂಬ ಕನಸು ಇರುತ್ತದೆ. ಅದರಲ್ಲೂ ವಿಶೇಷವಾಗಿ ಕೆಂಪು ಬಣ್ಣದ, ಅಪ್ಪಟ ಚಿನ್ನದ ಜರಿ ಇರುವ ಸೀರೆಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಬೇಡಿಕೆಯು ಇತ್ತೀಚಿನ 'ಮಹಿಳಾ ದಿನಾಚರಣೆ'ಯಂದು ದಾಖಲೆ ಮಟ್ಟಕ್ಕೆ ತಲುಪಿದ್ದು, ಮೈಸೂರು ರೇಷ್ಮೆಯ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮಾರ್ಚ್ 8ರ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ನಿಗಮ (ಕೆಎಸ್ಐಸಿ) ಅಭೂತಪೂರ್ವ ಯಶಸ್ಸು ಕಂಡಿದೆ. ರಾಜ್ಯದ ವಿವಿಧೆಡೆ ಇರುವ ಕೆಎಸ್ಐಸಿ ಮಳಿಗೆಗಳಲ್ಲಿ ಒಂದೇ ದಿನ 1,407 ಸೀರೆಗಳು ಮಾರಾಟವಾಗಿದ್ದು, ಬರೋಬ್ಬರಿ 7.13 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ. ಈ ಅಂಕಿಅಂಶಗಳು ಮೈಸೂರು ರೇಷ್ಮೆಯ ಮೇಲಿರುವ ಜನರ ವಿಶ್ವಾಸ ಮತ್ತು ಕ್ರೇಜ್ ಅನ್ನು ಎತ್ತಿ ತೋರಿಸುತ್ತವೆ.
ಮೈಸೂರು ರೇಷ್ಮೆ ಸೀರೆಗಳು ಏಕೆ ಇಷ್ಟೊಂದು ಪ್ರಸಿದ್ಧ ಎನ್ನುವುದಕ್ಕೆ ಕೆಲವು ಮುಖ್ಯ ಕಾರಣಗಳಿವೆ:
ಶೇ.100 ಶುದ್ಧತೆ - ಈ ಸೀರೆಗಳನ್ನು ತಯಾರಿಸಲು ನೈಸರ್ಗಿಕ ರೇಷ್ಮೆಯನ್ನು ಬಳಸಲಾಗುತ್ತದೆ. ಕಾವೇರಿ ನದಿಯ ನೀರನ್ನು ಬಳಸಿ ರೇಷ್ಮೆ ನೂಲನ್ನು ಸಂಸ್ಕರಿಸುವುದರಿಂದ ಈ ಸೀರೆಗಳಿಗೆ ಒಂದು ವಿಶಿಷ್ಟವಾದ ಮೆರುಗು ಮತ್ತು ಮೃದುತ್ವ ದೊರೆಯುತ್ತದೆ.
ಅಪ್ಪಟ ಚಿನ್ನದ ಜರಿ - ಈ ಸೀರೆಗಳಲ್ಲಿ ಬಳಸುವ ಜರಿಯು ಶೇ.100ರಷ್ಟು ಶುದ್ಧ ಚಿನ್ನ ಮತ್ತು ಬೆಳ್ಳಿಯ ಲೇಪನವನ್ನು ಹೊಂದಿರುತ್ತದೆ. ಇದರಿಂದಾಗಿ ಸೀರೆಯ ಹೊಳಪು ದಶಕಗಳ ಕಾಲ ಮಾಸುವುದಿಲ್ಲ.
ಪಾರಂಪರಿಕ ಮೌಲ್ಯ - ಮೈಸೂರು ಮಹಾರಾಜರ ಕಾಲದಲ್ಲಿ ಪ್ರಾರಂಭವಾದ ಈ ಕಾರ್ಖಾನೆಯು ಇಂದಿಗೂ ತನ್ನ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದೆ. ಇದು ಭೌಗೋಳಿಕ ಸೂಚಿ (GI) ಮಾನ್ಯತೆಯನ್ನು ಕೂಡ ಹೊಂದಿದೆ.
ವಿವಾದಗಳ ನಡುವೆಯೂ ಸಾಧನೆ
ಇತ್ತೀಚೆಗೆ ಟಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ವಿಚಾರವಾಗಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಇದರಿಂದ ಉತ್ಪಾದನೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿತ್ತು. ಆದರೆ, ಇಂತಹ ಅಡೆತಡೆಗಳ ನಡುವೆಯೂ ಮಹಿಳಾ ದಿನಾಚರಣೆಯಂದು ಸೀರೆಗಳಿಗೆ ಭಾರಿ ಬೇಡಿಕೆ ಬಂದಿರುವುದು ನಿಗಮದ ಅಧಿಕಾರಿಗಳಿಗೆ ಸಂತಸ ತಂದಿದೆ. ಸದ್ಯಕ್ಕೆ ಕಾರ್ಮಿಕರು ಕೆಲಸಕ್ಕೆ ಮರಳಿರುವುದರಿಂದ ಉತ್ಪಾದನೆ ಸುಗಮವಾಗಿ ಸಾಗುತ್ತಿದೆ.
ಯುಗಾದಿ ಮತ್ತು ರಂಜಾನ್ ಹಬ್ಬಗಳು ಹತ್ತಿರ ಬರುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಇನ್ನೂ 3 ರಿಂದ 4 ಸಾವಿರ ಸೀರೆಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ನಿಗಮ ಸಕಲ ಸಿದ್ಧತೆ ಮಾಡಿಕೊಂಡಿದೆ.