ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ರಾಜ್ಯಸಭಾ ಮಾಜಿ ಸದಸ್ಯೆ, ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ಬಿ. ಜಯಶ್ರೀ ತಮ್ಮ ಭೂಮಿಯನ್ನು ರಂಗ ಚಟುವಟಿಕೆಗಳಿಗೆ ದಾನ ನೀಡಲು ಸರ್ವೆಗೆ ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದರು. ಆದರೆ ಭೂಮಾಪನ ಇಲಾಖೆಯ ನಿರ್ಲಕ್ಷ್ಯದಿಂದ ಅವರು ಒಂದು ತಿಂಗಳಿನಿಂದ ಕಚೇರಿಗೆ ಅಲೇದಾಡುತ್ತಿದ್ದಾರೆ.
ಗುರುವಾರ ಕಚೇರಿಗೆ ಬರಲು ಹೇಳಿದ್ದ ಸರ್ವೆ ಅಧಿಕಾರಿ ಶಿವಾನಂದ್, ಕಚೇರಿಗೆ ಕರೆಸಿ ತಾನೇ ನಾಪತ್ತೆಯಾಗಿದ್ದರಿಂದ ಬಿ. ಜಯಶ್ರೀ ಅವರು ಬೇಸರಗೊಂಡರು. ತಮ್ಮ ಕೆಲಸಕ್ಕಿಂತ ಮೇಲಾಧಿಕಾರಿಗಳ ಕೆಲಸ ಮುಖ್ಯ ಎಂದು ಹೇಳಿದ ಸರ್ವೆಯರ್ ನಡೆಗೆ ಹಿರಿಯ ಕಲಾವಿದೆ ಅಸಮಾಧಾನ ವ್ಯಕ್ತಪಡಿಸಿದರು.
ಹೌದು, ಭೂಮಿ ಸರ್ವೆಗಾಗಿ ಕಚೇರಿಯಲ್ಲಿ ಅಧಿಕಾರಿಗಾಗಿ ಕಾದು ಕುಳಿತಿದ್ದ ಬಿ. ಜಯಶ್ರೀ ಅವರು , “ನಾನು ಸಮಾಜಕ್ಕೆ ಕೊಡುಗೆ ನೀಡಲು ಭೂಮಿಯನ್ನು ದಾನ ಮಾಡುತ್ತಿದ್ದೇನೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ನನ್ನ ಸಮಯ, ಶ್ರಮ ವ್ಯರ್ಥವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಸ್ಥಳೀಯರು ಕೂಡಾ ಈ ಘಟನೆಗೆ ಅಸಮಾಧಾನಗೊಂಡು, “ಹಿರಿಯ ಕಲಾವಿದೆಯನ್ನೇ ಅಲೆದಾಡಿಸುವುದು ಕರ್ತವ್ಯಲೋಪ. ಸಾಮಾನ್ಯ ಜನರಿಗೆ ಆಗುವ ಕಷ್ಟವನ್ನು ಊಹಿಸಬಹುದು” ಎಂದು ಅಭಿಪ್ರಾಯಪಟ್ಟರು.
ಒಂದು ತಿಂಗಳಿನಿಂದ ಸರ್ವೆ ಕಚೇರಿಗೆ ಅಲೇದಾಡುತ್ತಿರುವ ಬಿ. ಜಯಶ್ರೀ ಅವರಿಗೆ ನ್ಯಾಯ ದೊರೆಯಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಾಜ ಸೇವೆಗೆ ಮುಂದಾಗಿರುವ ಕಲಾವಿದೆಯೇ ಸಂಕಷ್ಟ ಅನುಭವಿಸುವಂತಾಗಿದೆ.
ಒಟ್ಟಾರೆ, ಗುಬ್ಬಿಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದರೂ, ಭೂಮಾಪನ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿದೆ. ಹಿರಿಯ ಕಲಾವಿದೆಯ ಅಸಮಾಧಾನವು ಕೇವಲ ಅವರ ವೈಯಕ್ತಿಕ ನೋವಲ್ಲ, ಸಾರ್ವಜನಿಕರ ಹಕ್ಕುಗಳನ್ನು ನಿರ್ಲಕ್ಷಿಸುವ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿದೆ ಎಂದು ಹೇಳಬಹದು.