ನಟಿ ಕಾರುಣ್ಯ ರಾಮ್ ತಮ್ಮ ತಂಗಿ ವಿರುದ್ಧ ವಂಚನೆ ಪ್ರಕರಣದ ವಿಚಾರಣೆಗೆ ಸಿಸಿಬಿ ಕಚೇರಿಗೆ ಹಾಜರಾದ ಬಳಿಕ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರು ನೀಡಿದ ಹೇಳಿಕೆ ಜನರಲ್ಲಿ ಕುತೂಹಲ ಮೂಡಿಸಿದೆ. ಕಾರುಣ್ಯ ರಾಮ್, “ನಾನು ಅನಾಮಧೇಯ 5 ಜನರ ವಿರುದ್ಧ ಮಾತ್ರ ದೂರು ಕೊಟ್ಟಿದ್ದೆ. ಅವರನ್ನ ಬಿಟ್ಟು ಬೇರೆ ಯಾರ ಮೇಲೂ ನಾನು ದೂರು ಕೊಟ್ಟಿಲ್ಲ. ನನಗೆ ಕರೆ ಮಾಡಿ, ಕೆಟ್ಟ ಕಾಮೆಂಟ್ಗಳನ್ನು ಮಾಡಿದವರ ವಿರುದ್ಧವೇ ದೂರು ಕೊಟ್ಟಿದ್ದೆ” ಎಂದು ಸ್ಪಷ್ಟಪಡಿಸಿದರು.
ವಿಚಾರಣೆಯ ವೇಳೆ ಆರೋಪಿಗಳನ್ನು ಅವರ ಮುಂದೆ ಕರೆಸಿ ವಿಚಾರಣೆ ನಡೆಸಲಾಗಿದೆ. “ಆರೋಪಿಗಳು ನನ್ನ ಮುಂದೆ ಒಪ್ಪಿಕೊಂಡಿದ್ದಾರೆ. ಯಾವುದೋ ಭರದಲ್ಲಿ ಮಾತಾಡಿದ್ದೇವೆ ಎಂದು ಹೇಳಿದ್ದಾರೆ. ಅವರು ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ ಎಂಬುದು ಗೊತ್ತಾಯಿತು. ಅವರು ಕ್ಷಮಾಪಣೆಯ ಪತ್ರವನ್ನು ಕೂಡ ಬರೆದಿದ್ದಾರೆ” ಎಂದು ನಟಿ ಕಾರುಣ್ಯ ವಿವರಿಸಿದರು.
ಅವರು ಮುಂದುವರಿಸಿ, “ನನಗೆ ಕೆಲ ಪ್ರೋಟೋಕಾಲ್ ಇದೆ. ಈ ಕೇಸ್ ಬಗ್ಗೆ ನಾನು ಎಲ್ಲೂ ಮಾತಾಡುವಂತಿಲ್ಲ ಅನ್ನೋದು. ತಪ್ಪು ಪ್ರತಿಯೊಬ್ಬರೂ ಮಾಡ್ತಾರೆ. ಆದರೆ ಅದನ್ನು ತಿದ್ದಿ ಸರಿಯಾಗಿ ನಡೆಯುವುದು ಮನುಷ್ಯ ಗುಣ” ಎಂದು ಹೇಳಿದರು.
ಕಾರುಣ್ಯ ತಮ್ಮ ಜೀವನದಲ್ಲಿ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡದಿರುವುದಾಗಿ ತಿಳಿಸಿದರು. “ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಯಾರಿಗೂ ಉತ್ತರ ಕೊಡುವ ಉದ್ದೇಶ ನನಗೆ ಇಲ್ಲ. ನಾನು ಕಾನೂನು ಮೊರೆ ಹೋಗಿದ್ದೆ. ಅವರು ವಿಚಾರಣೆ ಮಾಡಿ ನನಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ” ಎಂದು ಹೇಳಿದರು.
ಕೊನೆಯಲ್ಲಿ, “ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ಸತ್ಯಮೇವ ಜಯತೆ” ಎಂದು ನಟಿ ಕಾರುಣ್ಯ ರಾಮ್ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಈ ಹೇಳಿಕೆ ಮೂಲಕ ಕಾರುಣ್ಯ ರಾಮ್ ಅವರು, ಅವರ ನಿಲುವನ್ನು ಸ್ಪಷ್ಟಪಡಿಸಿದ್ದು, ಕಾನೂನಿನ ಮೇಲೆ ನಂಬಿಕೆ ಇಟ್ಟು ನ್ಯಾಯಕ್ಕಾಗಿ ಹೋರಾಡುವ ದೃಢತೆಯನ್ನು ತೋರಿಸಿದ್ದಾರೆ.