ಕನ್ನಡ ಚಿತ್ರರಂಗದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ರಕ್ಕಸಪುರದೊಳ್ ಇದೀಗ ದೇಶದ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸ್ವತಃ ಈ ಚಿತ್ರದ ಟ್ರೈಲರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರದ ತಂಡಕ್ಕೆ ದೊಡ್ಡ ಉತ್ತೇಜನವಾಗಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳಿಗೆ ಸಲ್ಮಾನ್ ಖಾನ್ ಅವರ ನೇರ ಸಂಪರ್ಕ ಕಡಿಮೆ. ಆದರೆ ಈ ಬಾರಿ ಹಠಾತ್ತನೆ ಅವರು ಟ್ರೈಲರ್ ನೋಡಿ “ವಾವ್” ಎಂದಿರುವುದು ವಿಶೇಷ.
ಈ ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಫರ್ ರವಿವರ್ಮ ಬಂಡವಾಳ ಹೂಡಿದ್ದಾರೆ. ರವಿವರ್ಮ ಅವರು ಹಿಂದಿಯಲ್ಲಿ ಸಲ್ಮಾನ್ ಖಾನ್ ನಟಿಸಿದ ಹಲವು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಆತ್ಮೀಯರು. ಇತ್ತೀಚೆಗೆ ಸಲ್ಮಾನ್ ಅಭಿನಯದ Galwan ಸಿನಿಮಾದ ಶೂಟಿಂಗ್ ವೇಳೆ ರವಿವರ್ಮ, ತಾವು ನಿರ್ಮಿಸಿರುವ ‘ರಕ್ಕಸಪುರದೊಳ್’ ಚಿತ್ರದ ಟ್ರೈಲರ್ ಅವರನ್ನು ತೋರಿಸಿದ್ದಾರೆ ಎನ್ನಲಾಗಿದೆ.
ಟ್ರೈಲರ್ ವೀಕ್ಷಿಸಿದ ಸಲ್ಮಾನ್ ಖಾನ್, ಚಿತ್ರದ ಗುಣಮಟ್ಟ ಮತ್ತು ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ “ಕನ್ನಡ ಚಿತ್ರರಂಗದಲ್ಲಿ ಸೃಜನಾತ್ಮಕ ಪ್ರಯತ್ನಗಳು ಸದಾ ವಿಭಿನ್ನವಾಗಿರುತ್ತವೆ” ಎಂದು ಪ್ರಶಂಸಿಸಿದ್ದಾರಂತೆ. ಜೊತೆಗೆ “ಈ ಸಿನಿಮಾದ ಹಿಂದಿ ಆವೃತ್ತಿ ಯಾವಾಗ ತೋರಿಸುತ್ತೀರ?” ಎಂದು ಪ್ರಶ್ನಿಸಿರುವುದು ಕುತೂಹಲ ಮೂಡಿಸಿದೆ. ಇದರಿಂದ ಸಿನಿಮಾ ತಂಡಕ್ಕೆ ಹಿಂದಿಗೆ ಡಬ್ ಮಾಡುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ರಕ್ಕಸಪುರದೊಳ್’ ಒಂದು ಸೈಕಾಲಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ ಸಿನಿಮಾ. ಚಿತ್ರದಲ್ಲಿ ನಟ ರಾಜ್ ಬಿ ಶೆಟ್ಟಿ ಶಿವ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಡಿತದ ವ್ಯಸನ ಮತ್ತು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿ ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆ ಪ್ರಕರಣಗಳನ್ನು ಹೇಗೆ ಬಗೆಹರಿಸುತ್ತಾನೆ ಎಂಬುದು ಚಿತ್ರದ ಮುಖ್ಯ ಕಥೆ. ಟ್ರೈಲರ್ನಲ್ಲಿನ ರಾಜ್ ಬಿ ಶೆಟ್ಟಿಯ ಮೌನ ಮತ್ತು ತೀವ್ರ ಅಭಿನಯವನ್ನು ಸಲ್ಮಾನ್ ಮೆಚ್ಚಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರವನ್ನು ರವಿ ಸಾರಂಗ್ ನಿರ್ದೇಶಿಸಿದ್ದಾರೆ. ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಫೆಬ್ರವರಿ 6ರಂದು ಬಿಡುಗಡೆಗೊಂಡ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ವಿಶೇಷವಾಗಿ ಅದರ ಥ್ರಿಲ್ಲಿಂಗ್ ಸ್ಕ್ರೀನ್ಪ್ಲೇ ಮತ್ತು ವಿಭಿನ್ನ ಕಥನ ಶೈಲಿ ಸಿನಿರಸಿಕರ ಮೆಚ್ಚುಗೆ ಗಳಿಸಿದೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಮೆಚ್ಚುಗೆ ಹಾಗೂ ಹಿಂದಿ ಡಬ್ ಸಲಹೆ ಚಿತ್ರತಂಡಕ್ಕೆ ಹೊಸ ಅವಕಾಶಗಳನ್ನು ತೆರೆದಂತಾಗಿದೆ. ಇದರಿಂದ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ. ಈಗ ಎಲ್ಲರ ಕಣ್ಣೂ ‘ರಕ್ಕಸಪುರದೊಳ್’ ತಂಡದ ಮುಂದಿನ ನಿರ್ಧಾರಗಳ ಮೇಲೆ ನೆಟ್ಟಿದೆ.