ಕನ್ನಡ ಕಿರುತೆರೆಯ ಜನಪ್ರಿಯ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ಹಠಾತ್ ನಿಧನ ಇಡೀ ಸ್ಯಾಂಡಲ್ವುಡ್ ಅನ್ನು ಬೆಚ್ಚಿಬೀಳಿಸಿದೆ. ಸದಾ ಲವಲವಿಕೆಯಿಂದ ಇರುತ್ತಿದ್ದ, ಜಿಮ್ಗೆ ಹೋಗಿ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದ 47 ವರ್ಷದ ನಟ ಹೃದಯಾಘಾತದಿಂದ ವಿಧಿವಶರಾಗಿರುವುದು ಹಲವರಿಗೆ ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ..
ಈ ದುಃಖದ ನಡುವೆಯೇ, ದಿಲೀಪ್ ರಾಜ್ ಅವರ ಆಪ್ತ ಸ್ನೇಹಿತೆ ಹಾಗೂ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ದಿಲೀಪ್ ರಾಜ್ ಒಬ್ಬ ಯಶಸ್ವಿ ನಿರ್ಮಾಪಕನಾಗಿದ್ದರೂ, ತೆರೆಯ ಮರೆಯಲ್ಲಿ ಅವರು ಅನುಭವಿಸುತ್ತಿದ್ದ ಒತ್ತಡ ಎಂಥದ್ದು ಎಂಬ ಅನುಮಾನ ಈಗ ಎಲ್ಲರಲ್ಲೂ ಮೂಡಿದೆ..
ಶ್ರುತಿ ನಾಯ್ಡು ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಚಿತ್ರರಂಗ ಮತ್ತು ಕಿರುತೆರೆಯ ನಿರ್ಮಾಪಕರು ಎದುರಿಸುವ ಮಾನಸಿಕ ಮತ್ತು ದೈಹಿಕ ಶ್ರಮದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಪೋಸ್ಟ್ನ ಸಾರಾಂಶ ಹೀಗಿದೆ;
ನಿರ್ಮಾಪಕರಾಗುವ ಹುಚ್ಚು - ಕಲಾವಿದರಾಗಿ ಹೆಸರು, ಹಣ ಮಾಡಿದ ಮೇಲೂ ನಾವು ಯಾಕೆ ನಿರ್ದೇಶಕರು ಅಥವಾ ನಿರ್ಮಾಪಕರು ಆಗಬೇಕು?. ಯಾವುದೋ ಒಂದು ಹುರುಪು, ಹೊಸಬರನ್ನು ಪರಿಚಯಿಸಬೇಕು ಎನ್ನುವ ಹಂಬಲ ನಮ್ಮನ್ನು ಈ ಕ್ಷೇತ್ರಕ್ಕೆ ಎಳೆದು ತರುತ್ತದೆ.
ಎಲ್ಲರಿಗೂ ಆಸರೆ - ನೂರಾರು ತಂತ್ರಜ್ಞರಿಗೆ ಕೆಲಸ ಕೊಡಬೇಕು, ಹಿರಿಯ ಕಲಾವಿದರಿಗೆ ಆಸರೆಯಾಗಬೇಕು, ಅವರೆಲ್ಲ ಹರಸಬೇಕು ಎನ್ನುವ ದೊಡ್ಡ ಮನಸ್ಸಿನಿಂದ ನಾವು ಕೆಲಸ ಮಾಡುತ್ತೇವೆ.
ಅತೀವ ಶ್ರಮ - ಸೀರಿಯಲ್ ಎಷ್ಟು ದಿನ ನಡೆಯುತ್ತದೋ ಅಷ್ಟು ದಿನ ಎಲ್ಲರ ಜೀವನವೂ ಸುಂದರವಾಗಿ ಇರುತ್ತದೆ ಎಂಬ ಕಾರಣಕ್ಕೆ ನಾವು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಗುನಗುತಲೇ ಸಹಿಸಿಕೊಳ್ಳುತ್ತೇವೆ.
ಒಂದು ಪ್ರಶ್ನೆ - ಆದರೆ, ಇದೆಲ್ಲವೂ ಯಾರ ಬೆಲೆ ತೆತ್ತು? (At the cost of what?) ಎಂದು ಶ್ರುತಿ ನಾಯ್ಡು ನೋವಿನಿಂದ ಪ್ರಶ್ನಿಸಿದ್ದಾರೆ.
ದಿಲೀಪ್ ರಾಜ್ ಒತ್ತಡಕ್ಕೆ ಒಳಗಾಗಿದ್ರಾ?
ಶ್ರುತಿ ನಾಯ್ಡು ಅವರ ಈ ಪೋಸ್ಟ್ "ದಿಲೀಪ್ ರಾಜ್ ಅವರು ಸತತವಾಗಿ ಧಾರಾವಾಹಿಗಳನ್ನು ನಿರ್ಮಾಣ ಮಾಡುವ ಭರದಲ್ಲಿ ಅತಿಯಾದ ಒತ್ತಡಕ್ಕೆ ಒಳಗಾಗಿದ್ರಾ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಬ್ಬ ನಿರ್ಮಾಪಕನಾಗಿ ನೂರಾರು ಜನರ ಸಂಸಾರವನ್ನು ಸಲಹುವ ಜವಾಬ್ದಾರಿ ಅವರ ಮೇಲಿತ್ತು. ಈ ಜವಾಬ್ದಾರಿಯನ್ನು ಪೂರೈಸುವ ಭರದಲ್ಲಿ ಅವರು ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿದ್ರಾ ಎಂಬ ಸಂಶಯ ಈಗ ಕಾಡುತ್ತಿದೆ.
ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಮತ್ತು ಲೇಖಕ ಡಾ. ಶರಣು ಹುಲ್ಲೂರು, 'ದಿಲೀಪ್ ರಾಜ್ ಸಾವು ಈ ಉದ್ಯಮದ ಮತ್ತೊಂದು ಮಗ್ಗಲನ್ನು ಪರಿಚಯಿಸಿದೆ. ಯಾರದೋ ಖುಷಿಗಾಗಿ ನಾವು ಕಾಣೆಯಾಗಬಾರದು' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೊನೆಯ ಮಾತು;
ಮೇ 13ರಂದು ಬೆಳಗ್ಗೆ ತೀವ್ರ ಎದೆನೋವಿನಿಂದ ಕುಸಿದುಬಿದ್ದ ದಿಲೀಪ್ ರಾಜ್ ಇಂದು ನಮ್ಮೊಂದಿಗಿಲ್ಲ. ಅವರ ಸಾವು ಕೇವಲ ನಷ್ಟವಲ್ಲ, ಬದಲಾಗಿ ಗ್ಲಾಮರ್ ಪ್ರಪಂಚದ ಹಿಂದೆ ಇರುವ ಕಠಿಣ ಪರಿಶ್ರಮ ಮತ್ತು ಒತ್ತಡದ ಬದುಕಿನ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ.
ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ನೂರಾರು ಕುಟುಂಬಗಳಿಗೆ ಬೆಳಕಾಗಿದ್ದ ದಿಲೀಪ್ ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಆಶಿಸೋಣ!