Dec 13, 2025 Languages : ಕನ್ನಡ | English

"ಇದ್ರೆ ನೆಮ್ಮದಿಯಾಗಿರಬೇಕ್" ಬದಲು ಯಾವ ಸಾಲು ಫಿಕ್ಸ್ ಆಗಿತ್ತು ಗೊತ್ತಾ? ಕೇಡಿಗಾಗಿ ಕೈ ಬಿಟ್ರಂತೆ

ದರ್ಶನ್ ಅಭಿನಯದ ಡೆವಿಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಮಿಲನ ಪ್ರಕಾಶ್, ಡಿಸೆಂಬರ್ 2ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊದಲ ಬಾರಿಗೆ ಚಿತ್ರದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಸಮಾಧಾನವಾಗಿ ಉತ್ತರ ನೀಡಿದ್ದು, ವಿಶೇಷವಾಗಿ “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಹಾಡಿನ ಸಾಲು ಕುರಿತು ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.

"ಇದ್ರೆ ನೆಮ್ಮದಿಯಾಗಿರಬೇಕ್" ಬದಲು ಯಾವ ಸಾಲು ಫಿಕ್ಸ್ ಆಗಿತ್ತು ಗೊತ್ತಾ? ಕೇಡಿಗಾಗಿ ಕೈ ಬಿಟ್ರಂತೆ

ಈ ಹಾಡಿನ ಸಾಲು ದರ್ಶನ್ ಅವರ ಹಿಂದಿನ ವಿವಾದಾತ್ಮಕ ಆಡಿಯೋದಲ್ಲಿ ಕೇಳಿಬಂದಿದ್ದ ಮಾತಿನಂತೆಯೇ ಇದ್ದುದರಿಂದ, ಉದ್ದೇಶಪೂರ್ವಕವಾಗಿ ಬಳಸಿದಿರಾ ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಮಿಲನ ಪ್ರಕಾಶ್, “ನನಗೆ ಗೊತ್ತೇ ಇರಲಿಲ್ಲ. ಅನಿರುದ್ಧ್ ಅವರು ಬರೆದು ಕಳಿಸಿದಾಗ ಚೆನ್ನಾಗಿದೆ ಎಂದು ಒಪ್ಪಿಕೊಂಡೆ. ನಂತರವೇ ಆ ಸಾಲಿನ ಹಿಂದೆ ಕಥೆ ಇದೆ ಎಂದು ತಿಳಿದುಬಂದಿತು” ಎಂದು ಸ್ಪಷ್ಟನೆ ನೀಡಿದರು.

ಸಿನಿ ಸಾಹಿತಿ ಅನಿರುದ್ಧ್ ಈ ಹಾಡಿಗೆ ಎರಡು ಸಾಲುಗಳನ್ನು ಬರೆದಿದ್ದರು – “ಇದ್ರೆ ನಿಮ್ಮದಿಯಾಗ್ ಇರ್ಬೇಕ್” ಹಾಗೂ “ಎಲ್ಲಾ ಶಿವನಾಟ ಕಣೋ”. ಆದರೆ, ಕೊನೆಯಲ್ಲಿ “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಸಾಲನ್ನು ಆಯ್ಕೆ ಮಾಡಲಾಯಿತು. ಮಿಲನ ಪ್ರಕಾಶ್ ಹೇಳುವಂತೆ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಶಿವನ ಕುರಿತಾದ ಹಾಡು ಇದ್ದುದರಿಂದ, “ಎಲ್ಲಾ ಶಿವನಾಟ ಕಣೋ” ಸಾಲನ್ನು ಕೈಬಿಟ್ಟು, “ನೆಮ್ಮದಿಯಾಗ್” ಸಾಲನ್ನು ಬಳಸಲಾಯಿತು.

ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಕೂಡ ಪ್ರಶ್ನೆ ಕೇಳಲಾಯಿತು. ದರ್ಶನ್ ಜೈಲಿನಿಂದ ಹೊರಬಂದ ನಂತರವೇ ಬಿಡುಗಡೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆಗೆ, “ದರ್ಶನ್ ಅವರೇ ಅಕ್ಟೋಬರ್‌ನಲ್ಲಿ ಬರೋಣ ಅಂತಿದ್ದರು. ಆದರೆ, ವಿಎಫ್‌ಎಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಮಯ ಬೇಕಾಗಿದ್ದರಿಂದ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು” ಎಂದು ಮಿಲನ ಪ್ರಕಾಶ್ ವಿವರಿಸಿದರು. ಹೀಗಾಗಿ, “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಹಾಡಿನ ಸಾಲು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಿಲ್ಲ, ಬದಲಿಗೆ ಕಥೆಯ ಅವಶ್ಯಕತೆ ಹಾಗೂ ಇತರ ಸಿನಿಮಾಗಳ ಹಾಡುಗಳ ಹಿನ್ನಲೆಯಲ್ಲಿ ಅಂತಿಮವಾಗಿ ಬಳಸಲಾಯಿತು ಎಂಬುದನ್ನು ನಿರ್ದೇಶಕ ಸ್ಪಷ್ಟಪಡಿಸಿದ್ದಾರೆ.

Latest News