'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಲಿಯಾಸ್ ಡಿ-ಬಾಸ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳುಗಳೇ ಕಳೆದಿದ್ದರೂ, ಅವರ ಅಭಿಮಾನಿಗಳ ಅಂಧಾಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಮದುವೆಯಾದ ನವದಂಪತಿಯೊಬ್ಬರು ವಿವಾಹದ ಉಡುಗೆಯಲ್ಲೇ ನೇರವಾಗಿ ದರ್ಶನ್ ಅವರ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಭೇಟಿ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಕಲ್ಯಾಣ ಮಂಟಪದಿಂದ ದರ್ಶನ್ ಮನೆಗೆ!
ಸಾಮಾನ್ಯವಾಗಿ ನವದಂಪತಿಗಳು ಮದುವೆಯ ನಂತರ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆಯುವುದು ಸಂಪ್ರದಾಯ. ಆದರೆ ಈ ಜೋಡಿ ಮಾತ್ರ, ಮದುವೆ ಮುಗಿದ ತಕ್ಷಣವೇ ನೇರವಾಗಿ ದರ್ಶನ್ ಅವರ ನಿವಾಸದತ್ತ ಹೆಜ್ಜೆ ಹಾಕಿದ್ದಾರೆ. ದರ್ಶನ್ ಅವರ ಮನೆಯೇ ತಮಗೆ ದೇಗುಲ, ಅವರೇ ತಮಗೆ ದೇವರು ಎಂಬಂತೆ ವರ್ತಿಸಿರುವ ಈ ಜೋಡಿ, ಮದುವೆಯ ಬಟ್ಟೆಯಲ್ಲೇ ಬಂದು ಅಲ್ಲಿ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ದರ್ಶನ್ ನಿವಾಸದ ಮುಂದೆ ಇರುವ ಗಣಪತಿಯ ವಿಗ್ರಹಕ್ಕೆ ಮೊದಲು ಪೂಜೆ ಸಲ್ಲಿಸಿದ ದಂಪತಿಗಳು, ನಂತರ ಅಲ್ಲಿರುವ ದರ್ಶನ್ ಅವರ ಬೃಹತ್ ಕಟೌಟ್ಗೆ ಹಾರ ಹಾಕಿ, ಕರ್ಪೂರ ಹಚ್ಚಿ ಆರತಿ ಬೆಳಗಿದ್ದಾರೆ. ದರ್ಶನ್ ಅವರು ನಮಗೆ ದೇವರು, ಎಂತಹ ಪರಿಸ್ಥಿತಿ ಬಂದರೂ ನಮ್ಮ ಬೆಂಬಲ ಅವರಿಗೇ ಇರುತ್ತದೆ ಎಂದು ಸಾರುವ ಮೂಲಕ ತಮ್ಮ ಅಪ್ಪಟ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ವ್ಯಕ್ತಿಯನ್ನು ಹೀಗೆ ದೇವರಂತೆ ಪೂಜಿಸುವುದು ಎಷ್ಟು ಸರಿ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ರೇಣುಕಾಸ್ವಾಮಿಯಂತಹ ವ್ಯಕ್ತಿಯ ಜೀವಕ್ಕೆ ಡೆವಿಲ್ ಆಗಿದ್ದ ವ್ಯಕ್ತಿಯನ್ನು, ಇವರು 'ಗಾಡ್' ಎಂದು ಪೂಜಿಸುತ್ತಿರುವುದು ವಿಪರ್ಯಾಸ ಎಂಬಂತಹ ಕಮೆಂಟ್ಗಳು ಹರಿದು ಬರುತ್ತಿವೆ. ದರ್ಶನ್ ಅವರ ಅಭಿಮಾನಿಗಳು ಇದನ್ನು 'ನಿಷ್ಠೆ' ಎಂದು ಸಂಭ್ರಮಿಸುತ್ತಿದ್ದರೆ, ಸಾಮಾನ್ಯ ಜನರು ಮಾತ್ರ ಇದನ್ನು 'ಅಂಧಾಭಿಮಾನ' ಎಂದು ಜರಿಯುತ್ತಿದ್ದಾರೆ.
ಒಟ್ಟಿನಲ್ಲಿ, ಕಾನೂನು ತನ್ನ ಕೆಲಸ ಮಾಡುತ್ತಿದ್ದರೂ, ಅಭಿಮಾನಿಗಳ ವಲಯದಲ್ಲಿ ನಟ ದರ್ಶನ್ ಅವರ ಮೇಲಿನ ಅಭಿಮಾನ ಮಾತ್ರ ಬದಲಾಗಿಲ್ಲ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ವಿಡಿಯೋ ಸ್ಯಾಂಡಲ್ವುಡ್ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ.