Apr 27, 2026 Languages : ಕನ್ನಡ | English

ರೈಲಿನಿಂದ ಬಿದ್ದ ಬಾಲಕ: ಚೈನ್ ಎಳೆದರೂ ನಿಲ್ಲದ ರೈಲು - ಎಷ್ಟು ಸಾಂತ್ವನ ಹೇಳಿದರೂ ಕಡಿಯಾಗದ ಅಕ್ಕನ ಅಳಲು; ವಿಡಿಯೋ!!

ಒಂದು ಕಡೆ ಪ್ರಾಣ ಉಳಿಸಿ ಅಂತ ಕಿರುಚಾಡ್ತಿರೋ ಅಕ್ಕ, ಇನ್ನೊಂದೆಡೆ ನೂರಾರು ಜನ ಅಸಹಾಯಕ ಪ್ರಯಾಣಿಕರು. ಪಶ್ಚಿಮ ಬಂಗಾಳದ ರೈಲ್ವೆ ಮಾರ್ಗದಲ್ಲಿ ನಡೆದ ಈ ಘಟನೆ ಇಡೀ ದೇಶದ ರೈಲ್ವೆ ವ್ಯವಸ್ಥೆಯನ್ನೇ ಇವತ್ತು ಬೆ*ತ್ತಲೆ ಮಾಡಿದೆ. ಚಲಿಸುವ ರೈಲಿನಿಂದ ಬಾಲಕನೊಬ್ಬ ಕೆಳಗೆ ಬಿದ್ದರೂ, ವ್ಯವಸ್ಥೆ ಮಾತ್ರ ಕಣ್ಣು ಮುಚ್ಚಿ ಕುಳಿತಿತ್ತು.

ಬಾಲಕ ಬಿದ್ದರೂ ರೈಲು ನಿಲ್ಲಲಿಲ್ಲ - ಪ್ರಯಾಣಿಕರ ಆಕ್ರೋಶ!! | Photo Credit: https://x.com/rameshofficial0
ಬಾಲಕ ಬಿದ್ದರೂ ರೈಲು ನಿಲ್ಲಲಿಲ್ಲ - ಪ್ರಯಾಣಿಕರ ಆಕ್ರೋಶ!! | Photo Credit: https://x.com/rameshofficial0

ಜಲ್ಪೈಗುರಿ ಮತ್ತು ರಾಮನಗರ ನಡುವೆ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಜನಜಂಗುಳಿಯಿಂದ ಕೂಡಿದ್ದ ಜನರಲ್ ಬೋಗಿಯಲ್ಲಿ ತನ್ನ ಲಗೇಜುಗಳೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕನೊಬ್ಬ ಆಯತಪ್ಪಿ ಚಲಿಸುವ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಇದನ್ನು ಕಂಡ ಆತನ ಸಹೋದರಿ ಕಿರುಚಾಡುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಕೂಡಲೇ ಎಚ್ಚೆತ್ತ ಸಹ-ಪ್ರಯಾಣಿಕರು ಬಾಲಕನನ್ನು ಉಳಿಸಲು ರೈಲಿನ ತುರ್ತು ಸರಪಳಿಯನ್ನು (Emergency Chain) ಪದೇ ಪದೇ ಎಳೆದಿದ್ದಾರೆ.

ಪ್ರಯಾಣಿಕರು ಎಷ್ಟೇ ಬಾರಿ ಚೈನ್ ಎಳೆದರೂ ರೈಲು ಮಾತ್ರ ನಿಲ್ಲಲೇ ಇಲ್ಲ. ಬಾಲಕ ಬಿದ್ದ ಜಾಗದಿಂದ ರೈಲು ಸುಮಾರು 10 ರಿಂದ 15 ಕಿಲೋಮೀಟರ್ ದೂರ ಸಾಗುವವರೆಗೂ ನಿಲ್ಲಲಿಲ್ಲ ಎನ್ನಲಾಗಿದೆ. 

ವಿಡಿಯೋದಲ್ಲಿ ಸೆರೆಯಾಗಿದೆ ಭೀಕರ ದೃಶ್ಯ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಮೈ ಜುಂ ಎನ್ನುತ್ತೆ. ಜಲ್ಪೈಗುರಿ ರೈಲು ನಿಲ್ದಾಣ ದಾಟಿದ ಕೆಲವೇ ನಿಮಿಷಗಳಲ್ಲಿ ಈ ಅನಾಹುತ ನಡೆದಿದೆ. ರೈಲಿನ ಜನರಲ್ ಬೋಗಿಯಲ್ಲಿ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ನಡುವೆ ಇದ್ದ ಬಾಲಕ ಆಯತಪ್ಪಿ ಹೊರಕ್ಕೆ ಬಿದ್ದಿದ್ದಾನೆ. ಬಾಲಕ ಬಿದ್ದ ತಕ್ಷಣ ಇಡೀ ಬೋಗಿಯಲ್ಲಿದ್ದವರು ಕಿರುಚಾಡುತ್ತಾ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಆದ್ರೆ, ಆ ಚೈನ್ ಕೆಲಸ ಮಾಡಲೇ ಇಲ್ಲ!

ಬಾಲಕನ ಸಹೋದರಿ ಗಾಬರಿಯಿಂದ ಅಳುತ್ತಾ ಟಿಟಿಇ (TTE) ಬಳಿ ಓಡಿ ಹೋಗಿದ್ದಾಳೆ. ರೈಲ್ವೆ ಹೆಲ್ಪ್‌ಲೈನ್‌ಗೆ ಫೋನ್ ಮಾಡಿದ್ದಾಳೆ. ಆದರೆ ಅಲ್ಲಿಂದಲೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂಬ ಆರೋಪ ಕೇಳಿಬಂದಿದೆ. "ಒಂದು ಕಡೆ ಚೈನ್ ಎಳೆದರೂ ರೈಲು ನಿಲ್ಲುತ್ತಿಲ್ಲ, ಇನ್ನೊಂದೆಡೆ ಅಧಿಕಾರಿಗಳು ಸಹಾಯಕ್ಕೆ ಬರುತ್ತಿಲ್ಲ" ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಘಟನೆಯನ್ನು ಅಲ್ಲಿನ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಧಿಕಾರಿಗಳ ಮೌನಕ್ಕೆ ಬೆಲೆ ಏನು?

ಪ್ರಯಾಣಿಕರು ಹೇಳುವ ಪ್ರಕಾರ, ಬಾಲಕ ಬಿದ್ದ ಮೇಲೆ ರೈಲು ಬರೋಬ್ಬರಿ 10 ರಿಂದ 15 ಕಿಲೋಮೀಟರ್ ದೂರ ಸಾಗಿದೆ.

ಚೈನ್ ಎಳೆದರೂ ನಿಲ್ಲದ ರೈಲು: ತಾಂತ್ರಿಕ ದೋಷವೋ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೋ?

ನೆರವಿಗೆ ಬಾರದ ಹೆಲ್ಪ್‌ಲೈನ್: ನಡುಗುತ್ತಿದ್ದ ಬಾಲಕನ ಸಹೋದರಿಗೆ ಸಾಂತ್ವನ ಹೇಳುವವರು ಯಾರೂ ಇರಲಿಲ್ಲ.

ಟಿಟಿಇ ಅಸಹಕಾರ: ಅಧಿಕಾರಿಗಳ ಗಮನಕ್ಕೆ ತಂದರೂ ಅವರು ತಕ್ಷಣದ ಕ್ರಮ ಕೈಗೊಳ್ಳಲು ವಿಫಲರಾದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಾವು ಎಲ್ಲಿ ತಪ್ಪು ಮಾಡ್ತಿದ್ದೀವಿ?

ರೈಲ್ವೆ ಇಲಾಖೆ ಕೋಟಿ ಕೋಟಿ ಹಣ ಖರ್ಚು ಮಾಡಿ ಹೈಟೆಕ್ ರೈಲುಗಳನ್ನ ತರ್ತಿದೆ. ಆದ್ರೆ ಸಾಮಾನ್ಯ ಜನರ ಪ್ರಯಾಣಿಸುವ ಬೋಗಿಗಳಲ್ಲಿ ಕನಿಷ್ಠ ಸುರಕ್ಷತೆಯೂ ಇಲ್ಲವೇ? ಬಾಲಕ ಬಿದ್ದಾಗ ಚೈನ್ ಎಳೆದರೂ ರೈಲು ನಿಲ್ಲದಿರುವುದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ಅದು ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ಪರಿಸ್ಥಿತಿ. ಬಾಲಕನ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ವಿಡಿಯೋ ವೈರಲ್ ಆದ ಮೇಲಾದ್ರೂ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

ಸಾರ್ವಜನಿಕರಿಗೆ ಒಂದು ಮನವಿ: ರೈಲಿನಲ್ಲಿ ಪ್ರಯಾಣಿಸುವಾಗ, ಅದರಲ್ಲೂ ಬಾಗಿಲ ಹತ್ತಿರ ನಿಂತು ಪ್ರಯಾಣಿಸಬೇಡಿ. ನಿಮ್ಮ ಜೀವ ನಿಮ್ಮ ಕೈಯಲ್ಲಿದೆ, ರೈಲ್ವೆ ವ್ಯವಸ್ಥೆಯನ್ನೇ ನಂಬಿ ಕೂರೋ ಕಾಲ ಇದಲ್ಲ!

Latest News