Feb 16, 2026 Languages : ಕನ್ನಡ | English

ಉಡುಪಿಯಲ್ಲಿ ಕಾರು ಬೆಂಕಿ – ಚಾಲಕನ ಸಮಯ ಪ್ರಜ್ಞೆಯಿಂದ ಐವರು ಪಾರು!!

ಉಡುಪಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಕಾರು ಸುಟ್ಟು ಭಸ್ಮವಾದ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಶಿರ್ವ ಸಮೀಪ ನಡೆದಿದೆ. ಮಧ್ಯರಾತ್ರಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಚಾಲಕನ ಅಪ್ರತಿಮ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಂಜಿನ್ ಭಾಗದಿಂದ ಹೊಗೆ – ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಕಾರು
ಎಂಜಿನ್ ಭಾಗದಿಂದ ಹೊಗೆ – ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ ಕಾರು

ಮಂಗಳೂರಿನಿಂದ ಉಡುಪಿಯ ಕಾಪು ತಾಲೂಕಿನ ಶಿರ್ವದತ್ತ ಸಾಗುತ್ತಿದ್ದ ಕಾರು ಮಧ್ಯರಾತ್ರಿ ಸುಮಾರಿಗೆ ಶಿರ್ವ ತಲುಪುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ಕಾರು ರಸ್ತೆಯಲ್ಲಿ ಚಲಿಸುತ್ತಿರುವಾಗಲೇ ಎಂಜಿನ್ ಭಾಗದಿಂದ ದಟ್ಟವಾದ ಹೊಗೆ ಬರತೊಡಗಿದೆ. ಇದನ್ನು ಕೂಡಲೇ ಗಮನಿಸಿದ ಚಾಲಕ, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಕಾರನ್ನು ರಸ್ತೆಯ ಬದಿಗೆ ನಿಲ್ಲಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಅವರು, ಕಾರಿನಲ್ಲಿದ್ದ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಕ್ಷಣವೂ ವಿಳಂಬ ಮಾಡದೆ ಕೆಳಗಿಳಿಯುವಂತೆ ಸೂಚಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಕಾರಿನಿಂದ ಕೆಳಗಿಳಿದ ಕೆಲವೇ ಸೆಕೆಂಡುಗಳಲ್ಲಿ, ಇಡೀ ಕಾರಿಗೆ ಬೆಂಕಿ ವ್ಯಾಪಿಸಿದೆ. ಬೆಂಕಿಯ ಜ್ವಾಲೆಗಳು ಆಕಾಶಕ್ಕೆ ಮುಟ್ಟುವಂತೆ ಕಾಣುತ್ತಿದ್ದು, ನಡುರಸ್ತೆಯಲ್ಲೇ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳೀಯರು ಪೈಪ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಅಷ್ಟರಲ್ಲಾಗಲೇ ಕಾರು ಅಸ್ಥಿಪಂಜರವಾಗಿತ್ತು. 

ಚಾಲಕ ಒಂದು ವೇಳೆ ಹೊಗೆ ಬಂದ ತಕ್ಷಣ ಕಾರು ನಿಲ್ಲಿಸಿ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸದಿದ್ದರೆ, ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಸದ್ಯ ಕುಟುಂಬ ಸದಸ್ಯರೆಲ್ಲರೂ ಸುರಕ್ಷಿತವಾಗಿದ್ದು, ಚಾಲಕನ ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Latest News