May 5, 2026 Languages : ಕನ್ನಡ | English

'ಗೋಟ್' ಸಿನಿಮಾದ ಆ ನಂಬರ್ ಪ್ಲೇಟ್ ಸುಳ್ಳಾಗಲಿಲ್ಲ - 2026ಕ್ಕೆ ಸಿಎಂ ಆಗಿ ವಿಜಯ್ ಅಬ್ಬರ!!

ಸಿನಿಮಾ ಸ್ಟೈಲ್‌ನಲ್ಲಿ ಹೇಳಬೇಕಂದ್ರೆ, ‘ದಳಪತಿ’ ವಿಜಯ್ ತಮಿಳುನಾಡು ರಾಜಕೀಯದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ. 2024ರಲ್ಲೇ ಒಂದು ಸುಳಿವು ಸಿಕ್ಕಿತ್ತು, ಅದು ಈಗ 2026ರಲ್ಲಿ ಅಕ್ಷರಶಃ ನಿಜವಾಗಿದೆ. ವಿಜಯ್ ಅವರ 'ತಮಿಳಗ ವೆಟ್ರಿ ಕಳಗಮ್' (TVK) ಪಕ್ಷ ಬರೋಬ್ಬರಿ 106 ಸೀಟ್ ಗೆದ್ದು ಈಗ ತಮಿಳುನಾಡಿನ ಗದ್ದುಗೆ ಹಿಡಿದಿದೆ. ಇದು ಬರಿ ಗೆಲುವಲ್ಲ, ಒಬ್ಬ ನಟನ ಮೇಲಿನ ಅಭಿಮಾನ ಜನಾದೇಶವಾಗಿ ಬದಲಾದ ಮ್ಯಾಜಿಕ್!

2026ರಲ್ಲಿ ಸಿಎಂ ಕುರ್ಚಿ ಏರಿದ ‘ದಳಪತಿ’ ವಿಜಯ್ | Photo Credit: https://www.instagram.com/asd.in_/
2026ರಲ್ಲಿ ಸಿಎಂ ಕುರ್ಚಿ ಏರಿದ ‘ದಳಪತಿ’ ವಿಜಯ್ | Photo Credit: https://www.instagram.com/asd.in_/

ಆ ‘ನಂಬರ್ ಪ್ಲೇಟ್’ ಭವಿಷ್ಯ ನಿಜವಾಯ್ತು ನೋಡಿ!

ನಿಮಗೆಲ್ಲ ನೆನಪಿರಬಹುದು, 2024ರಲ್ಲಿ ವಿಜಯ್ ಅವರ ‘ಗೋಟ್’ (GOAT) ಸಿನಿಮಾ ರಿಲೀಸ್ ಆಗೋ ಟೈಮಲ್ಲಿ ಒಂದು ಫೋಟೋ ಸಖತ್ ವೈರಲ್ ಆಗಿತ್ತು. ವಿಜಯ್ ಓಡಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್ ಮೇಲೆ 'TN 07 CM 2026' ಅಂತ ಇತ್ತು. ಅಂದು ಎಲ್ಲರೂ ಇದನ್ನ ನೋಡಿ ಸಿನಿಮಾ ಪ್ರಚಾರ ಇರಬಹುದು ಅಂದುಕೊಂಡಿದ್ದರು. ಆದರೆ, ವಿಜಯ್ ಅಭಿಮಾನಿಗಳು ಮಾತ್ರ "ನಮ್ಮ ಅಣ್ಣ 2026ಕ್ಕೆ ಸಿಎಂ ಆಗೋದು ಗ್ಯಾರಂಟಿ" ಅಂತ ಬಾಜಿ ಕಟ್ಟಿದ್ದರು. ಆ ಫೋಟೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಅಂದು ಕಾರಿನ ನಂಬರ್ ಪ್ಲೇಟ್ ಮೇಲೆ ಇದ್ದಿದ್ದೇ ಇವತ್ತು ತಮಿಳುನಾಡಿನ ಭವಿಷ್ಯವಾಗಿದೆ!

ಸಿನಿಮಾಗೆ ಗುಡ್‌ಬೈ, ಜನಸೇವೆಗೆ ವೆಲ್‌ಕಮ್

ವಿಜಯ್ ಅವರಿಗೆ ರಾಜಕೀಯ ಅಂದ್ರೆ ಟೈಮ್‌ಪಾಸ್ ಅಲ್ಲ ಅನ್ನೋದು ಈಗ ಸಾಬೀತಾಗಿದೆ. ಸದ್ಯಕ್ಕೆ ಅವರು ನಟಿಸುತ್ತಿರೋ ‘ಜನ ನಾಯಗನ್’ ಚಿತ್ರವೇ ಅವರ ಕೆರಿಯರ್‌ನ ಕೊನೆಯ ಸಿನಿಮಾ ಅಂತ ಅವರೇ ಅನೌನ್ಸ್ ಮಾಡಿದ್ದಾರೆ. ಶೂಟಿಂಗ್ ಮುಗಿದ ಮೇಲೆ ಕ್ಯಾಮೆರಾ ಮುಂದೆ ಬಣ್ಣ ಹಚ್ಚೋದನ್ನ ಬಿಟ್ಟು, ಪೂರ್ತಿಯಾಗಿ ಜನರ ಮಧ್ಯೆ ಇರಲು ಅವರು ನಿರ್ಧರಿಸಿದ್ದಾರೆ. 2025 ಇಡೀ ವರ್ಷ ಒಂದು ಕಡೆ ಸಿನಿಮಾ ಕೆಲಸ, ಇನ್ನೊಂದು ಕಡೆ ಪಕ್ಷದ ಸಂಘಟನೆ ಅಂತ ಹಗಲಿರುಳು ಕಷ್ಟಪಟ್ಟಿದ್ದಾರೆ. ಅದಕ್ಕೆ ತಮಿಳುನಾಡಿನ ಜನ ಇವತ್ತು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್‌ಗೆ ಈಗ ಡಬಲ್ ಧಮಾಕ!

ವಿಜಯ್ ಅವರ ಕೊನೆಯ ಸಿನಿಮಾವನ್ನು ನಮ್ಮ ಹೆಮ್ಮೆಯ ಬೆಂಗಳೂರು ಮೂಲದ ಕೆವಿಎನ್ (KVN) ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಅವರಿಗೆ ಈಗ ಸಂಭ್ರಮವೋ ಸಂಭ್ರಮ! ಯಾಕೆಂದರೆ ಒಂದು ಕಡೆ ಅವರು ಪ್ರೊಡ್ಯೂಸ್ ಮಾಡಿರೋ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ, ಇನ್ನೊಂದೆಡೆ ಅವರ ಮುಂದಿನ ಸಿನಿಮಾದ ಹೀರೋ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಇದಕ್ಕಿಂತ ದೊಡ್ಡ ಪ್ರಚಾರ ಇನ್ನೇನು ಬೇಕು ಅಲ್ವಾ?

ತಮಿಳುನಾಡಿನಲ್ಲಿ ಎಷ್ಟೋ ಸಿನಿಮಾ ಸ್ಟಾರ್‌ಗಳು ರಾಜಕೀಯಕ್ಕೆ ಬಂದಿದ್ದಾರೆ, ಆದರೆ ವಿಜಯ್ ಅವರ ಎಂಟ್ರಿ ಮತ್ತು ಈ ಭರ್ಜರಿ ಗೆಲುವು ಇಡೀ ದಕ್ಷಿಣ ಭಾರತದ ರಾಜಕೀಯವನ್ನೇ ತಿರುಗಿ ನೋಡುವಂತೆ ಮಾಡಿದೆ. ದಳಪತಿ ಈಗ ನಿಜವಾದ ‘ಜನ ನಾಯಗನ್’ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಸಿನೆಮಾ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿದ್ದವರು ಈಗ ಅಸೆಂಬ್ಲಿಯಲ್ಲಿ ಹೇಗೆ ಘರ್ಜಿಸುತ್ತಾರೆ ಅನ್ನೋದನ್ನ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ.

Latest News