ಇತ್ತೀಚೆಗೆ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕಾರ್ಕಳದ ಯುವ ಉದ್ಯಮಿ ಸುದೀಪ್ ಶೆಟ್ಟಿ ಆ*ತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುದೀಪ್ ಪತ್ನಿ ಸೌಮ್ಯ ಶೆಟ್ಟಿಗೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಹೌದು, ಉಡುಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದು, ಇದರಿಂದ ಅವರಿಗೆ ಜೈಲೇ ಗತಿಯಾಗಿದೆ.
ಕಾರ್ಕಳದಲ್ಲಿ ನೆಲೆಸಿದ್ದ ನೆಲ್ಯಾಡಿ ಮೂಲದ ಯುವ ಉದ್ಯಮಿ ಸುದೀಪ್ ಶೆಟ್ಟಿ ಅವರು ಕಳೆದ ಮಾರ್ಚ್ 22ರಂದು ಆ*ತ್ಮಹತ್ಯೆ ಮಾಡಿಕೊಂಡಿದ್ದರು. ಸುದೀಪ್ ಅವರ ಸಾ*ವಿನ ಸುದ್ದಿ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಒಬ್ಬ ಯಶಸ್ವಿ ಉದ್ಯಮಿ ಈ ರೀತಿ ಸಾವನ್ನಪ್ಪಿದ್ದು ಯಾಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ತಂದೆಯ ದೂರು ಮತ್ತು ತನಿಖೆ
ಸುದೀಪ್ ಶೆಟ್ಟಿ ಅವರ ಸಾವಿನ ಬೆನ್ನಲ್ಲೇ ಅವರ ತಂದೆ ದಾಮೋದರ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. "ನನ್ನ ಮಗನ ಸಾ*ವಿಗೆ ಆತನ ಪತ್ನಿ ಸೌಮ್ಯ ಶೆಟ್ಟಿಯೇ ಕಾರಣ. ಆಕೆ ನೀಡುತ್ತಿದ್ದ ಕಿರುಕುಳ ಮತ್ತು ಮಾನಸಿಕ ಒತ್ತಡ ತಾಳಲಾರದೆ ನನ್ನ ಮಗ ಪ್ರಾಣ ಕಳೆದುಕೊಂಡಿದ್ದಾನೆ" ಎಂದು ಅವರು ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದರು.
ಈ ದೂರಿನ ಅನ್ವಯ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಅವರು ತನಿಖೆ ಕೈಗೆತ್ತಿಕೊಂಡು ಸೌಮ್ಯ ಶೆಟ್ಟಿ ಅವರನ್ನ ಬಂಧಿಸಿದ್ದರು. ಈ ವೇಳೆ ಕಾರ್ಕಳ ತಾಲೂಕು ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಕೋರ್ಟ್ನಲ್ಲಿ ನಡೆದಿದ್ದೇನು?
ಜೈಲಿನಲ್ಲಿದ್ದ ಸೌಮ್ಯ ಶೆಟ್ಟಿ ಅವರು ತಮ್ಮ ವಕೀಲರ ಮೂಲಕ ಉಡುಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣದ ಗಾಂಭೀರ್ಯತೆ ಮತ್ತು ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಗಮನಿಸಿ ಜಾಮೀನು ನೀಡಲು ಒಪ್ಪಲಿಲ್ಲ. ಹೀಗಾಗಿ ಸೌಮ್ಯ ಶೆಟ್ಟಿ ಅವರ ಜಾಮೀನು ಅರ್ಜಿ ವಜಾಗೊಂಡಿದೆ.
ಸುದೀಪ್ ಶೆಟ್ಟಿ ಒಬ್ಬ ಚಟುವಟಿಕೆಯುಳ್ಳ ಯುವಕನಾಗಿದ್ದರು. ಅಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ದಂಪತಿಗಳ ನಡುವೆ ಅಂತಹದ್ದೇನಾಗಿತ್ತು? ಎಂಬ ವಿಷಯಗಳು ಈಗ ತನಿಖೆಯ ಪ್ರಮುಖ ಭಾಗವಾಗಿವೆ. ಪೊಲೀಸರು ಈಗ ಪ್ರಕರಣದ ಆಳ-ಅಗಲವನ್ನು ಜಾಲಾಡುತ್ತಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.