ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ವರ್ಷದ ಹಸುಗೂಸೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು (ಮಾರ್ಚ್ 16) ನಡೆದಿದೆ. ಸಮಯಪ್ರಜ್ಞೆ ಮೆರೆದು ಮಗುವನ್ನು ರಕ್ಷಿಸಿದ ಪಯಾಜ್ ಚೌಟಿ ಅವರು ಈಗ ಎಲ್ಲರ ಪಾಲಿನ 'ರಿಯಲ್ ಹೀರೋ' ಆಗಿದ್ದಾರೆ.
ಶಿರಸಿಯ ಕಸ್ತೂರಬಾ ನಗರದ ನಿವಾಸಿಯಾದ ಎರಡು ವರ್ಷದ ಬಾಲಕಿ ಭುವಿ, ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಮಧ್ಯಾಹ್ನದ ಊಟದ ಸಮಯಕ್ಕೆ ಮಗು ಎಲ್ಲಿಯೂ ಕಾಣಿಸದಿದ್ದಾಗ ಮನೆಯವರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಎಲ್ಲೂ ಮಗು ಪತ್ತೆಯಾಗದಿದ್ದಾಗ, ಅಜ್ಜಿ ಅನುಮಾನಗೊಂಡು ಮನೆಯ ಹಿತ್ತಲಿನಲ್ಲಿರುವ ಬಾವಿಯ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ಬಾವಿಯ ಒಳಗಿನಿಂದ ಮಗುವಿನ ಅಳು ಕೇಳಿಬಂದಿದೆ.
ಅಜ್ಜಿ ಬಾವಿಯೊಳಗೆ ಇಣುಕಿ ನೋಡಿದಾಗ ಹೃದಯ ವಿದ್ರಾವಕ ದೃಶ್ಯವೊಂದು ಕಂಡಿದೆ. ಮಗು ಭುವಿ ಬಾವಿಯ ನೀರಿಗೆ ಬಿದ್ದಿದ್ದರೂ, ಅದೃಷ್ಟವಶಾತ್ ಅಲ್ಲಿದ್ದ ಪಂಪ್ಸೆಟ್ನ ಪೈಪನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಳು. ಮಗುವಿನ ಅಳು ಮತ್ತು ಮನೆಯವರ ಕಿರುಚಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿದ್ದಾರೆ.
ಸಾರಿಕಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಪಯಾಜ್ ಚೌಟಿ ಅವರು ಆ ಸಮಯದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಸಿದ್ಧರಾಗುತ್ತಿದ್ದರು. ಮಗು ಬಾವಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ, ಅವರು ಒಂದು ಕ್ಷಣವೂ ವ್ಯರ್ಥ ಮಾಡದೆ ಬಾವಿಯತ್ತ ಓಡಿದ್ದಾರೆ. ಅಲ್ಲಿ ನೆರೆದಿದ್ದ ಜನರ ಸಹಾಯದೊಂದಿಗೆ, ತಮ್ಮ ಜೀವದ ಹಂಗನ್ನು ತೊರೆದು ಬಾವಿಗಿಳಿದಿದ್ದಾರೆ. ನೀರು ಹೆಚ್ಚಿದ್ದರೂ ಚಾಣಾಕ್ಷತನದಿಂದ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ಮೇಲಕ್ಕೆ ಬಂದಿದ್ದಾರೆ.
ಮಗುವನ್ನು ಜೀವಂತವಾಗಿ ಮರಳಿ ಪಡೆದ ಅಜ್ಜಿ ಮತ್ತು ಕುಟುಂಬದವರು ಭಾವುಕರಾಗಿದ್ದಾರೆ. "ನನ್ನ ಮೊಮ್ಮಗಳನ್ನು ಕಾಪಾಡಿದ ಪಯಾಜ್ ಅವರೇ ನಮ್ಮ ಪಾಲಿನ ದೇವರು" ಎಂದು ಅಜ್ಜಿ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ವಿನಯದಿಂದ ಮಾತನಾಡಿದ ಪಯಾಜ್ ಅವರು, "ಆ ಕ್ಷಣದಲ್ಲಿ ಮಗು ಯಾರದ್ದೇ ಇರಲಿ, ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ ಅಷ್ಟೆ" ಎಂದು ಹೇಳಿದ್ದಾರೆ.
ಸದ್ಯ ಮಗು ಸುರಕ್ಷಿತವಾಗಿದ್ದು, ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಯಾಜ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾವಿಯ ಸುತ್ತ ಸುರಕ್ಷತಾ ಗೋಡೆ ಅಥವಾ ಮುಚ್ಚಳ ಇಲ್ಲದಿರುವುದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.