ನವದೆಹಲಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಡಿಸೆಂಬರ್ 19ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ದೇಶದ ಪ್ರಮುಖ ಜ್ವಲಂತ ವಿಷಯಗಳನ್ನು ಚರ್ಚಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಅಧಿವೇಶನದಲ್ಲಿ ಹಲವು ರಾಜಕೀಯ, ಆರ್ಥಿಕ ಹಾಗೂ ಭದ್ರತಾ ವಿಷಯಗಳು ಪ್ರಸ್ತಾಪವಾಗಲಿವೆ.
ವಿಪಕ್ಷಗಳು ದೆಹಲಿಯ ರೆಡ್ ಪೋರ್ಟ್ ಕಾರ್ ಬಾಂಬ್ ಸ್ಪೋಟ ಹಾಗೂ ಎಸ್.ಐ.ಆರ್. ವಿಷಯವನ್ನು ಪ್ರಸ್ತಾಪಿಸಲು ತಯಾರಾಗಿವೆ. ಜೊತೆಗೆ ಭಾರತ-ಅಮೆರಿಕಾ ವ್ಯಾಪಾರ ಬಿಕ್ಕಟ್ಟು, ಅಮೆರಿಕಾದಿಂದ ಭಾರತದ ಉತ್ಪನ್ನಗಳ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆ ಕುರಿತು ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಮತಕಳವು ಆರೋಪದ ಬಗ್ಗೆ ಪ್ರಸ್ತಾಪಿಸಲು ಕಾತರವಾಗಿದೆ.
ವಿಪಕ್ಷಗಳು ಎಸ್.ಐ.ಆರ್. ಚರ್ಚೆಗೆ ಅವಕಾಶ ನೀಡದಿದ್ದರೆ ಕಲಾಪಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಸಜ್ಜಾಗಿದ್ದು, ಕಾರ್ಮಿಕರ ಹಕ್ಕುಗಳ ಕುರಿತಂತೆ ತೀವ್ರವಾದ ವಾದ-ಪ್ರತಿವಾದ ನಡೆಯುವ ನಿರೀಕ್ಷೆಯಿದೆ.
ಅಧಿವೇಶನದಲ್ಲಿ ರಾಷ್ಟ್ರೀಯ ಭದ್ರತೆ, ರೈತರ ಬೆಳೆಗಳ ಬೆಲೆ ನಿಗದಿ, ಮಸೂದೆಗೆ ಅಂಕಿತ ಹಾಕುವ ರಾಜ್ಯಪಾಲರ ಅಧಿಕಾರದ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಅನುದಾನ ಬಿಡುಗಡೆ ಕೊರತೆ ಹಾಗೂ ತಾರತಮ್ಯದ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಲಿವೆ.
ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧಾರವಾದ ವಿಷಯಗಳ ಬಗ್ಗೆ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದೆ. ಹೀಗಾಗಿ ಈ ಚಳಿಗಾಲದ ಅಧಿವೇಶನವು ರಾಜಕೀಯವಾಗಿ ತೀವ್ರ ಚರ್ಚೆಗಳಿಗೆ ವೇದಿಕೆಯಾಗಲಿದ್ದು, ಸರ್ಕಾರ-ವಿಪಕ್ಷಗಳ ನಡುವೆ ಬಿರುಸಿನ ವಾದ-ಪ್ರತಿವಾದಗಳು ನಡೆಯುವ ಸಾಧ್ಯತೆ ಇದೆ.