2026ನೇ ಸಾಲಿನ ಪದ್ಮ ಪ್ರಶಸ್ತಿಗಳ ಘೋಷಣೆಯಲ್ಲಿ ಕರ್ನಾಟಕದ ಎಂಟು ಸಾಧಕರು ರಾಷ್ಟ್ರ ಮಟ್ಟದ ಗೌರವಕ್ಕೆ ಭಾಜನರಾಗಿದ್ದಾರೆ. ಇವರಲ್ಲಿ ಒಬ್ಬರು ಪದ್ಮಭೂಷಣ ಹಾಗೂ ಏಳು ಮಂದಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಲಾ ಕ್ಷೇತ್ರದಲ್ಲಿ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದ್ದು, ಇದು ಕನ್ನಡ ಸಾಹಿತ್ಯ ಮತ್ತು ಅವಧಾನ ಕಲೆಗೆ ಮಹತ್ವದ ಗುರುತಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಂಡ್ಯದ ಅಂಕೇಗೌಡ ಎಮ್ ಹಾಗೂ ಬೆಂಗಳೂರಿನ ಎಸ್.ಜಿ. ಸುಶಿಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಇವರ ಸೇವಾ ಮನೋಭಾವ ಹಾಗೂ ಸಮಾಜಮುಖಿ ಕಾರ್ಯಗಳು ರಾಷ್ಟ್ರದ ಗಮನ ಸೆಳೆದಿವೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬೆಳಗಾವಿಯ ಡಾ. ಪ್ರಭಾಕರ್ ಕೋರೆ ಹಾಗೂ ಬೆಂಗಳೂರಿನ ಶಶಿಶೇಖರ್ ವೆಂಪತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಗುರುತಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಶುಭ ವೆಂಕಟೇಶ ಅಯ್ಯಂಗಾರ್ (ಬೆಂಗಳೂರು) ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ದೊರೆತಿದೆ.
ಈ ಸಾಧಕರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರವಾಣಿ ಮೂಲಕ ಶುಭಾಶಯ ಕೋರಿದ್ದು, ವಿಶೇಷವಾಗಿ ಶತಾವಧಾನಿ ಆರ್. ಗಣೇಶ್ ಹಾಗೂ ಡಾ. ಪ್ರಭಾಕರ್ ಕೊರೆ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ, ಈ ವರ್ಷ ದೇಶದಾದ್ಯಂತ ಐವರು ಪದ್ಮವಿಭೂಷಣ, 13 ಮಂದಿ ಪದ್ಮಭೂಷಣ ಹಾಗೂ 113 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾಗೇನೇ ಕ್ರಿಕೆಟ್ ಕ್ಷೇತ್ರದಲ್ಲಿ ರೋಹಿತ್ ಶರ್ಮ, ಹರ್ಮನ್ ಪ್ರೀತ್ ಕೌರ್ ಅವರಿಗೆ ಪದ್ಮಶ್ರೀ ದೊರೆತಿದ್ದು, ನಟ ಧರ್ಮೇಂದ್ರರಿಗೆ ಮರಣೋತ್ತರ ಪದ್ಮವಿಭೂಷಣ ನೀಡಲಾಗಿದೆ. ಜಾರ್ಖಂಡ್ ಮಾಜಿ ಸಿಎಂ ಶಿಭು ಸೋರೆನ್ ಹಾಗೂ ನಟ ಮುಮುಟಿ ಅವರಿಗೆ ಪದ್ಮಭೂಷಣ ಗೌರವ ದೊರೆತಿದೆ. ಭಾರತೀಯ ಸೇನೆಯ ಗ್ರೂಪ್ ಕ್ಯಾಪ್ಟನ್ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಬಾಹ್ಯಾಕಾಶ ಯಾತ್ರೆಯ ಸಾಧನೆಗಾಗಿ ಅಶೋಕ ಚಕ್ರ ಪುರಸ್ಕಾರ ಘೋಷಿಸಲಾಗಿದೆ. ಈ ಪ್ರಶಸ್ತಿಗಳು ಸಾಧಕರ ಜೀವನದ ಪರಿಶ್ರಮ, ಸೇವೆ ಮತ್ತು ಸಮರ್ಪಣೆಗೆ ರಾಷ್ಟ್ರ ನೀಡಿದ ಗೌರವವಾಗಿದ್ದು, ಕರ್ನಾಟಕದ ಹೆಮ್ಮೆ ಹೆಚ್ಚಿಸುವಂತಾಗಿದೆ.