ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಹಿನ್ನೆಲೆಯಲ್ಲಿ, ಅವರು ಮಹತ್ವದ ಮತ್ತು ಅಪರೂಪದ ನಿರ್ಧಾರ ಕೈಗೊಂಡಿದ್ದಾರೆ. ತಮ್ಮನ್ನು ಪದಚ್ಯುತಗೊಳಿಸುವ ನಿರ್ಣಯದ ಕುರಿತು ಸದನದಲ್ಲಿ ಸಂಪೂರ್ಣ ಚರ್ಚೆ ನಡೆದು ಅಂತಿಮ ತೀರ್ಮಾನವಾಗುವವರೆಗೆ, ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಹಾಗೂ ಸ್ಪೀಕರ್ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಓಂ ಬಿರ್ಲಾ ಘೋಷಿಸಿದ್ದಾರೆ. ಅವರ ಈ ನಿಲುವು ಸಂಸದೀಯ ಪರಂಪರೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಪಾಡುವ ನೈತಿಕ ನಿರ್ಧಾರವೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ವಿಚಾರದಲ್ಲಿ ಓಂ ಬಿರ್ಲಾ ಬಹಳ ಸ್ಪಷ್ಟ ನಿಲುವು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಸತ್ಯಾಸತ್ಯತೆ ಸದನದಲ್ಲಿ ಚರ್ಚೆಯ ಮೂಲಕ ಹೊರಬರಬೇಕು ಎಂಬ ಕಾರಣದಿಂದ ಅವರು ಸ್ವಯಂಪ್ರೇರಿತವಾಗಿ ಸದನದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ. ಸರ್ಕಾರದ ಕೆಲ ಹಿರಿಯ ಸಚಿವರು ಮತ್ತು ಕೆಲವು ವಿರೋಧ ಪಕ್ಷದ ನಾಯಕರು, ಬಿರ್ಲಾ ಅವರನ್ನು ಮರಳಿ ಸದನದ ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡುವ ಸಾಧ್ಯತೆಯೂ ಇದೆ. ಆದರೆ, ಸದನವು ತಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ನಂತರ ಮಾತ್ರ ನೈತಿಕ ನೆಲೆಯಲ್ಲಿ ಮರಳುವ ನಿರ್ಧಾರಕ್ಕೆ ಬಿರ್ಲಾ ಬದ್ಧರಾಗಿದ್ದಾರೆ ಎನ್ನಲಾಗಿದೆ.
ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭವಾಗಲಿರುವ ಮಾರ್ಚ್ 9ರಂದು, ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಅಧಿವೇಶನ ಗದ್ದಲದಿಂದ ಕೂಡಿರುವ ನಿರೀಕ್ಷೆಯಿದ್ದು, ಪ್ರತಿಪಕ್ಷಗಳು ವಿಷಯವನ್ನು ತೀವ್ರವಾಗಿ ಮುಂದಿಟ್ಟುಕೊಳ್ಳಲಿವೆ. ನಿಯಮಗಳ ಪ್ರಕಾರ, ಇಂತಹ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲು ಕನಿಷ್ಠ 50 ಸಂಸದರ ಬೆಂಬಲ ಅಗತ್ಯವಿರುತ್ತದೆ. ಈ ಬೆಂಬಲ ದೊರೆತರೆ, ಉಪಸಭಾಪತಿ ಅಥವಾ ಅಧ್ಯಕ್ಷರ ಸಮಿತಿಯ ಸದಸ್ಯರೊಬ್ಬರು ಚರ್ಚೆಗೆ ಅವಕಾಶ ನೀಡುತ್ತಾರೆ. ಚರ್ಚೆಯ ನಂತರ ಸದನದಲ್ಲಿ ಮತದಾನ ನಡೆಯಲಿದ್ದು, ಓಂ ಬಿರ್ಲಾ ತಮ್ಮ ಸ್ಥಾನದಲ್ಲಿ ಮುಂದುವರೆಯುವಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.
ಸಂವಿಧಾನಾತ್ಮಕವಾಗಿ ನೋಡಿದರೆ, ಓಂ ಬಿರ್ಲಾ ಸದನದ ಕಲಾಪಗಳಲ್ಲಿ ಭಾಗವಹಿಸದಿರುವ ನಿರ್ಧಾರ ಕಡ್ಡಾಯವಲ್ಲ. ಭಾರತೀಯ ಸಂವಿಧಾನದ ವಿಧಿ 96ರ ಪ್ರಕಾರ, ಸ್ಪೀಕರ್ ವಿರುದ್ಧ ಪದಚ್ಯುತಗೊಳಿಸುವ ನಿರ್ಣಯ ಬಾಕಿ ಇದ್ದರೂ ಅವರು ಸದನದಲ್ಲಿ ಹಾಜರಿರಬಹುದು. ಆದರೆ ಅಧ್ಯಕ್ಷ ಸ್ಥಾನದಲ್ಲಿ ಕೂರುವ ಹಕ್ಕು ಅವರಿಗೆ ಇರುವುದಿಲ್ಲ. ಮಾತನಾಡಲು ಹಾಗೂ ಮೊದಲ ಹಂತದ ಮತ ಚಲಾಯಿಸಲು ಅವಕಾಶ ಇದ್ದರೂ, ನಿರ್ಣಾಯಕ ಮತ ಹಾಕಲು ಅವಕಾಶವಿಲ್ಲ. ಇಂತಹ ಹಕ್ಕುಗಳಿದ್ದರೂ, ತಮ್ಮ ಸ್ಥಾನವೇ ಪ್ರಶ್ನೆಯಾದ ಸಂದರ್ಭದಲ್ಲಿ ಗೌರವಾನ್ವಿತ ಕುರ್ಚಿಯಿಂದ ದೂರವಿದ್ದು, ಸದನವೇ ತೀರ್ಮಾನಿಸಲಿ ಎಂಬ ಸಂಪ್ರದಾಯವನ್ನು ಅನುಸರಿಸಲು ಓಂ ಬಿರ್ಲಾ ಆಯ್ಕೆ ಮಾಡಿಕೊಂಡಿದ್ದಾರೆ.a