ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮೇಲೆ ಆ ರುಚಿಕರವಾದ ಲಡ್ಡು ಪ್ರಸಾದ ಸಿಗದಿದ್ದರೆ ಯಾತ್ರೆಯೇ ಪೂರ್ಣವಾಗಲ್ಲ. ಈಗ ಆ ವಿಶ್ವಪ್ರಸಿದ್ಧ ಲಡ್ಡುವಿನ ರುಚಿ ಮತ್ತಷ್ಟು ಹೆಚ್ಚಾಗಲಿದೆ. ಯಾಕಂದ್ರೆ, ಕನ್ನಡಿಗರ ನೆಚ್ಚಿನ 'ನಂದಿನಿ' ತುಪ್ಪ ಮತ್ತೆ ತಿರುಪತಿ ಲಡ್ಡು ತಯಾರಿಕೆಗೆ ಮರಳಿದೆ.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಮತ್ತು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಡುವೆ ಈ ಬಗ್ಗೆ ಮಹತ್ವದ ಒಪ್ಪಂದ ನಡೆದಿದ್ದು, ಇಂದಿನಿಂದಲೇ ತುಪ್ಪದ ಪೂರೈಕೆ ಆರಂಭವಾಗಿದೆ. ಬೆಂಗಳೂರು ಡೇರಿ ಆವರಣದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ತುಪ್ಪದ ಟ್ಯಾಂಕರ್ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದರು.
ದಿನಕ್ಕೆ 12 ಟನ್ ತುಪ್ಪದ ಪಯಣ!
ಈ ಒಪ್ಪಂದದ ಪ್ರಕಾರ, ಮುಂದಿನ ಆರು ತಿಂಗಳ ಕಾಲ ಬಮುಲ್ ಸುಮಾರು 2 ಲಕ್ಷ ಕೆಜಿ ತುಪ್ಪವನ್ನು ತಿರುಪತಿಗೆ ಕಳುಹಿಸಲಿದೆ. ಅಂದರೆ ಪ್ರತಿದಿನ ಸುಮಾರು 11.5 ರಿಂದ 12 ಟನ್ ಶುದ್ಧ ನಂದಿನಿ ತುಪ್ಪ ತಿರುಪತಿ ಬೆಟ್ಟಕ್ಕೆ ಪಯಣ ಬೆಳೆಸಲಿದೆ. ಸುಮಾರು 136 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪೂರೈಕೆ ನಡೆಯುತ್ತಿರುವುದು ನಮ್ಮ ಹೈನುಗಾರಿಕೆ ಕ್ಷೇತ್ರಕ್ಕೆ ಸಂದ ದೊಡ್ಡ ಜಯ.
ತಿರುಪತಿ ತಿಮ್ಮಪ್ಪನ ದೈವ ಸೇವೆಗೆ ನಮ್ಮ ನಂದಿನಿ ತುಪ್ಪ ಪೂರೈಕೆ
— DK Suresh (@DKSureshINC) April 29, 2026
ಬೆಂಗಳೂರು ಡೇರಿಯ ಆವರಣದಲ್ಲಿಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ (ಬಮೂಲ್) ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಮಾಡುವ ಪವಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪರಿಶುದ್ಧತೆಗೆ ಮತ್ತೊಂದು ಹೆಸರೇ ನಂದಿನಿ ತುಪ್ಪ. ಈ ತುಪ್ಪವನ್ನು… pic.twitter.com/AJhNcE7zWq
ಕಲಬೆರಕೆ ತಡೆಯಲು ಹೈಟೆಕ್ ವ್ಯವಸ್ಥೆ
ತಿರುಪತಿ ಲಡ್ಡು ವಿಚಾರದಲ್ಲಿ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ನಂದಿನಿ ತುಪ್ಪದ ಶುದ್ಧತೆಯನ್ನು ಕಾಪಾಡಲು ಮತ್ತು ಸಾಗಾಣಿಕೆ ವೇಳೆ ಯಾವುದೇ ಕಲಬೆರಕೆ ನಡೆಯದಂತೆ ತಡೆಯಲು 'ಡಿಜಿಟಲ್ ಲಾಕ್' ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಂದರೆ, ಬೆಂಗಳೂರಿನಲ್ಲಿ ಲಾಕ್ ಆದ ಟ್ಯಾಂಕರ್ ನೇರವಾಗಿ ತಿರುಪತಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲೇ ತೆರೆಯಲ್ಪಡುತ್ತದೆ.
ಡಿ.ಕೆ. ಸುರೇಶ್ ಹೇಳಿದ್ದೇನು?: "ನಂದಿನಿ ತುಪ್ಪ ತನ್ನ ಗುಣಮಟ್ಟಕ್ಕೆ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಟಿಟಿಡಿ ಕೂಡ ನಮ್ಮ ತುಪ್ಪದ ಕ್ವಾಲಿಟಿಯನ್ನು ಪರಿಗಣಿಸಿ ಹೆಚ್ಚಿನ ಬೇಡಿಕೆ ಇಟ್ಟಿದೆ. ಇದು ನಮ್ಮ ರಾಜ್ಯದ ಹಾಲು ಉತ್ಪಾದಕರಿಗೆ ಸಿಕ್ಕ ದೊಡ್ಡ ಗೌರವ" ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ಹಾಲು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು
ರಾಜ್ಯದಲ್ಲಿ ಕೆಎಂಎಫ್ (KMF) ಸಾಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದ್ಯ ದಿನಕ್ಕೆ ಒಂದು ಕೋಟಿ ಲೀಟರ್ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಬಮುಲ್ ಒಂದೇ 17.5 ಲಕ್ಷ ಲೀಟರ್ ಸಂಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 22 ರಿಂದ 33 ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ತಿರುಪತಿಯಂತಹ ದೊಡ್ಡ ಮಾರುಕಟ್ಟೆ ಸಿಕ್ಕಿರುವುದು ಹೈನುಗಾರರಿಗೆ ಆರ್ಥಿಕವಾಗಿ ಮತ್ತಷ್ಟು ಶಕ್ತಿ ತುಂಬಲಿದೆ.
ತಿರುಪತಿ ಲಡ್ಡುವಿನಲ್ಲಿ ಮತ್ತೆ ನಂದಿನಿ ತುಪ್ಪದ ಘಮ ಬೀರಲಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ನಮ್ಮ ರೈತರು ಬೆವರು ಸುರಿಸಿ ಉತ್ಪಾದಿಸಿದ ಹಾಲಿನಿಂದ ತಯಾರಾದ ತುಪ್ಪ, ಏಳು ಬೆಟ್ಟದ ಒಡೆಯನ ಪ್ರಸಾದದಲ್ಲಿ ಬಳಕೆಯಾಗುವುದು ನಿಜಕ್ಕೂ ವಿಶೇಷ.