May 9, 2026 Languages : ಕನ್ನಡ | English

ಸ್ಪೀಕರ್ ಯು.ಟಿ. ಖಾದರ್‌ಗೆ ಸ್ವಪಕ್ಷದವರಿಂದಲೇ ಘೆರಾವ್! ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ಕಿರಿಕ್; ಏನಿದು ಗಲಾಟೆ?

ಮಂಗಳೂರು: ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜನ ಆದಿಸ್ಥಳ ಕುತ್ತಾರಿನಲ್ಲಿ ಈಗ 'ಸರ್ಕಲ್' ರಾಜಕೀಯ ಶುರುವಾಗಿದೆ. ಸ್ವತಃ ವಿಧಾನಸಭಾ ಸ್ಪೀಕರ್ ಮತ್ತು ಸ್ಥಳೀಯ ಶಾಸಕರೂ ಆಗಿರುವ ಯು.ಟಿ. ಖಾದರ್ ಅವರಿಗೆ ಅವರದ್ದೇ ಕ್ಷೇತ್ರದ ಮುಸ್ಲಿಂ ಗುಂಪೊಂದು ಘೆರಾವ್ ಹಾಕುವ ಮೂಲಕ ಶಾಕ್ ನೀಡಿದೆ. ಕುತ್ತಾರಿನಲ್ಲಿ 'ಕೊರಗಜ್ಜ ಸರ್ಕಲ್' ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಡೆದ ಈ ಹೈಡ್ರಾಮಾ ಈಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರಿನಲ್ಲಿ ಕೊರಗಜ್ಜ ಸರ್ಕಲ್ ವಿವಾದ;
ಮಂಗಳೂರಿನಲ್ಲಿ ಕೊರಗಜ್ಜ ಸರ್ಕಲ್ ವಿವಾದ;

ಮದುವೆಗೆ ಬಂದವರಿಗೆ ಪ್ರತಿಭಟನೆಯ ಬಿಸಿ!

ಘಟನೆ ನಡೆದಿದ್ದು ಉಳ್ಳಾಲದ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ. ಯು.ಟಿ. ಖಾದರ್ ಅವರು ಅಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಅವರು ಮದುವೆ ಮುಗಿಸಿ ಹೊರಬರುತ್ತಿದ್ದಂತೆ, ನಾಸೀರ್ (ಡಾನ್ ನಾಸೀರ್) ಎಂಬಾತನ ನೇತೃತ್ವದಲ್ಲಿ ಬಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಸ್ಲಿಂ ಗುಂಪೊಂದು ಖಾದರ್ ಅವರನ್ನು ಸುತ್ತುವರಿದಿದೆ. ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದು ಘೆರಾವ್ ಹಾಕಿದ್ದಷ್ಟೇ ಅಲ್ಲದೆ, ಸ್ಪೀಕರ್ ಜೊತೆ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.

ಕೊರಗಜ್ಜ ಸರ್ಕಲ್ ಸುತ್ತ ಏಕಿಷ್ಟು ವಿವಾದ?

ಕುತ್ತಾರು ಎಂಬುದು ಸ್ವಾಮಿ ಕೊರಗಜ್ಜನ ಆದಿಕ್ಷೇತ್ರ. ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಈ ಹಿಂದೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಇಲ್ಲಿ ಕೊರಗಜ್ಜನ ಮುಟ್ಟಾಳೆಯ (ಟೋಪಿ) ಪ್ರತಿಕೃತಿಯುಳ್ಳ ಪುಟ್ಟ ವೃತ್ತವೊಂದನ್ನು ನಿರ್ಮಿಸಿದ್ದರು. ಈಗ ಇದೇ ಜಾಗದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ಒಂದು ಸುಸಜ್ಜಿತವಾದ 'ಕೊರಗಜ್ಜ ಸರ್ಕಲ್' ನಿರ್ಮಾಣ ಮಾಡಲು ಮುಂದಾಗಿತ್ತು.

ಆದರೆ, ಇದಕ್ಕೆ ಸ್ಥಳೀಯ ಮುಸ್ಲಿಂ ಗುಂಪು ವಿರೋಧ ವ್ಯಕ್ತಪಡಿಸುತ್ತಿದೆ. "ಅಲ್ಲಿ ಸರ್ಕಲ್ ನಿರ್ಮಾಣಕ್ಕೆ ಅವಕಾಶ ನೀಡಬೇಡಿ" ಎಂದು ಖಾದರ್ ಮೇಲೆ ಒತ್ತಡ ಹೇರಲು ಹೋಗಿ, ಅದು ಈಗ ಘೆರಾವ್ ಮತ್ತು ಮಾತಿನ ಚಕಮಕಿಯ ಹಂತಕ್ಕೆ ತಲುಪಿದೆ.

ಭದ್ರತಾ ವೈಫಲ್ಯದ ಪ್ರಶ್ನೆ: ಪೊಲೀಸರು ಎಲ್ಲಿ ಹೋದ್ರು?

ಈ ಘಟನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಕೇಳಿಬರುತ್ತಿರುವುದು 'ಭದ್ರತಾ ವೈಫಲ್ಯ'ದ ಮಾತು. ಒಬ್ಬ ಸ್ಪೀಕರ್ ದರ್ಜೆಯ ವ್ಯಕ್ತಿ, ಅದೂ ಅವರದ್ದೇ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಈ ರೀತಿ ಘೆರಾವ್ ಹಾಕಿಸಿಕೊಂಡಾಗ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ. ಸ್ಥಳೀಯ ಪೊಲೀಸರು ಯು.ಟಿ. ಖಾದರ್ ಅವರಿಗೆ ಸೂಕ್ತ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!

ಸ್ಪೀಕರ್ ಖಾದರ್ ಅವರಿಗೆ ಕೈಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಮತ್ತು ಅಬ್ಬರಿಸುತ್ತಿರುವ ದೃಶ್ಯಗಳು ಈಗ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿವೆ. "ಕುತ್ತಾರಿನ ಭಕ್ತರ ಭಾವನೆಗೆ ಬೆಲೆ ಕೊಡುತ್ತೀರಾ ಅಥವಾ ಈ ಗುಂಪಿನ ಒತ್ತಡಕ್ಕೆ ಮಣಿಯುತ್ತೀರಾ?" ಎಂದು ಭಕ್ತಾದಿಗಳು ಪ್ರಶ್ನಿಸುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕಾದ ಖಾದರ್ ಅವರಿಗೆ ಇದು ದೊಡ್ಡ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ.

ಒಟ್ಟಿನಲ್ಲಿ, ದೈವದ ಹೆಸರಿನಲ್ಲಿ ನಡೆಯುತ್ತಿರುವ ಈ ಸರ್ಕಲ್ ವಿವಾದ ಕುತ್ತಾರಿನಲ್ಲಿ ಶಾಂತಿ ಕದಡುವಂತೆ ಮಾಡಿದೆ. ಯು.ಟಿ. ಖಾದರ್ ಅವರು ಈ ಕಿರಿಕ್ ಅನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. 

Latest News