ಕರ್ನಾಟಕ ರಾಜಕೀಯದಲ್ಲಿ ಬಿಗ್ ಬಾಂಬ್ - ದಿಢೀರ್ ದೆಹಲಿಗೆ ಓಡಿದ ಸಿಎಂ-ಡಿಸಿಎಂ! ಆ ನಾಲ್ವರು ಯುವ ನಾಯಕರಿಗೆ ಸಿಕ್ತು ಲಕ್!!

ಕರ್ನಾಟಕ ರಾಜಕೀಯದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆಯ ಹೈಡ್ರಾಮಾ ಜೋರಾಗಿದೆ. ಮಂತ್ರಿಗಿರಿ ಸಿಗದ ನಾಯಕರ ಬೆಂಬಲಿಗರು ಒಂದೆಡೆ ಭಾರಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಹಿರಿಯ ಸಚಿವರು ತಮಗೆ ಬೇಕಾದ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಗೊಂದಲಗಳ ಗಂಟನ್ನು ಬಿಚ್ಚಲು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್ ದೆಹಲಿ ತಲುಪಿದ್ದು, ಹೈಕಮಾಂಡ್ ಜೊತೆ ಮ್ಯಾರಥಾನ್ ಚರ್ಚೆ ನಡೆಸುತ್ತಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ | Photo Credit: https://x.com/DKShivakumar
ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ | Photo Credit: https://x.com/DKShivakumar

ವಿಶೇಷ ಅಂದ್ರೆ, ಈ ಬಾರಿ ಸಂಪುಟದಲ್ಲಿ ಭಾರಿ ಬದಲಾವಣೆಯಾಗುವ ಲಕ್ಷಣಗಳಿದ್ದು, ನೆರೆಯ ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ 3-4 ಯುವ ಮುಖಗಳಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗುತ್ತಿದೆ.

ಯುವ ನಾಯಕರಿಗೆ 'ಮಂತ್ರಿ ಭಾಗ್ಯ' ಸಾಧ್ಯತೆ

ನೆರೆಯ ರಾಜ್ಯಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಸಕ್ಸಸ್ ಆಗಿರೋ ಫಾರ್ಮುಲಾವನ್ನು ಕರ್ನಾಟಕದಲ್ಲೂ ಅಪ್ಲೈ ಮಾಡಲು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಯೋಚಿಸುತ್ತಿದೆ. ಸದ್ಯ ಖಾಲಿ ಇರುವ ಒಟ್ಟು 20 ಸಚಿವ ಸ್ಥಾನಗಳ ಪೈಕಿ ಕನಿಷ್ಠ 3 ರಿಂದ 4 ಸೀಟುಗಳನ್ನು ಮೊದಲ ಬಾರಿ ಶಾಸಕರಾದವರಿಗೆ ಅಥವಾ ಯುವ ನಾಯಕರಿಗೆ ಕೊಡುವ ಸಾಧ್ಯತೆ ದಟ್ಟವಾಗಿದೆ.

ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್‌ಗೆ ಟಕ್ಕರ್: ಬಳ್ಳಾರಿ ಭಾಗದಲ್ಲಿ ರೆಡ್ಡಿ ಸಹೋದರರ ರಾಜಕೀಯ ಪ್ರಭಾವವನ್ನು ಕಮ್ಮಿ ಮಾಡಲು ಯುವ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಮಂತ್ರಿಗಿರಿ ನೀಡುವ ಪ್ರಸ್ತಾಪ ಜೋರಾಗಿ ಕೇಳಿಬರುತ್ತಿದೆ.

ರೇಸ್‌ನಲ್ಲಿರುವ ಇತರ ಯುವ ಸಿಂಹಗಳು: ಇದರ ಜೊತೆಗೆ ಚಿಕ್ಕಬಳ್ಳಾಪುರದ ಫೈರ್‌ಬ್ರಾಂಡ್ ಶಾಸಕ ಪ್ರದೀಪ್ ಈಶ್ವರ್, ಅಜಯ್ ಸಿಂಗ್, ಪ್ರಿಯಾಕೃಷ್ಣ ಹಾಗೂ ಬೆಂಗಳೂರಿನ ರಿಜ್ವಾನ್ ಅರ್ಷದ್ ಹೆಸರುಗಳು ದೆಹಲಿ ವಲಯದಲ್ಲಿ ಸಖತ್ ಸೌಂಡ್ ಮಾಡ್ತಿವೆ.

ಈ ಬಗ್ಗೆ ಮಾತನಾಡಿರೋ ಶಾಸಕ ಪ್ರದೀಪ್ ಈಶ್ವರ್, ಒಬಿಸಿ (OBC) ಕೋಟಾದಡಿ ಯುವಕರಿಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ನಂಬಿಕೆ ನನಗಿದೆ ಅಂತ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಹಿರಿಯ ಸಚಿವರ ಖಾತೆ ಕ್ಯಾತೆ

ಒಂದೆಡೆ ಹೊಸಬರ ಸೇರ್ಪಡೆ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ಸದ್ಯ ಮಂತ್ರಿಗಳಾಗಿರೋ ಹಿರಿಯ ನಾಯಕರಲ್ಲೇ ಖಾತೆಗಳ ಬಗ್ಗೆ ಸಖತ್ ಅಸಮಾಧಾನ ಹೊಗೆಯಾಡುತ್ತಿದೆ.

ಕೃಷ್ಣಭೈರೇಗೌಡರ ಪಟ್ಟು: ಇವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದ್ದರೂ, ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಸಂಸ್ಥೆಗಳನ್ನು ಹೊರತುಪಡಿಸಿದ ಇಲಾಖೆ ತಮಗೆ ಬೇಡವೇ ಬೇಡ ಅಂತ ಪಟ್ಟು ಹಿಡಿದು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.

ಮುನಿಯಪ್ಪ ಅಸಮಾಧಾನ: ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ತಮ್ಮ ಖಾತೆ ಬದಲಾಯಿಸುವಂತೆ ಸಿಎಂ ಬೆನ್ನಬಿದ್ದಿದ್ದಾರೆ. ಬುಧವಾರ ಸಿಎಂ ದೆಹಲಿಗೆ ಹೊರಡುವಾಗ ದೇವನಹಳ್ಳಿ ಏರ್‌ಪೋರ್ಟ್‌ವರೆಗೂ ಜೊತೆಯಲ್ಲೇ ಬಂದು ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಜಯಚಂದ್ರ ಬೇಸರ: ಇನ್ನು ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಮುಂದುವರಿಸಿ ಹೊರಡಿಸಿರುವ ಆರ್ಡರ್ ಅವರಿಗೆ ಅಷ್ಟಾಗಿ ಇಷ್ಟವಾಗಿಲ್ಲ ಎನ್ನಲಾಗಿದೆ.

ಆದ್ರೆ ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂ.ಬಿ. ಪಾಟೀಲ್, "ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವನ್ನೂ ಹೈಕಮಾಂಡ್ ತಾನೇ ಕುಳಿತು ಬಗೆಹರಿಸಲಿದೆ" ಅಂತ ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ.

ಬೆಂಬಲಿಗರ ಹೈಡ್ರಾಮಾ, ದೆಹಲಿಯಲ್ಲಿ ಹೈಕಮಾಂಡ್ ಭೇಟಿ

ಮೊದಲ ಲಿಸ್ಟ್‌ನಲ್ಲಿ ಸಚಿವ ಸ್ಥಾನ ಮಿಸ್ ಆಗಿದ್ದಕ್ಕೆ ಹಿರಿಯ ನಾಯಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಬಾಗಲಕೋಟೆ, ಜಮಖಂಡಿ, ಹಾಸನ ಭಾಗಗಳಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. "ಅಲ್ಪಸಂಖ್ಯಾತ ನಾಯಕನಿಗೆ ಮಂತ್ರಿಗಿರಿ ಕೊಡಲೇಬೇಕು" ಅಂತ ಡಿಮ್ಯಾಂಡ್ ಮಾಡಿದ್ದಾರೆ. ಆದ್ರೆ ಕೆಪಿಸಿಸಿ ಆಫೀಸ್‌ಗೆ ಬಂದಿದ್ದ ಜಮೀರ್ ಮಾತ್ರ ಈ ಬಗ್ಗೆ ಏನೂ ಮಾತನಾಡದೆ ಸೈಲೆಂಟ್ ಆಗಿ ಜಾರಿಕೊಂಡಿದ್ದಾರೆ.

ಇತ್ತ ಗದಗದಲ್ಲಿ ಜಿ.ಎಸ್. ಪಾಟೀಲ್ ಬೆಂಬಲಿಗರು ತಮ್ಮ ನಾಯಕನಿಗೆ ಒಳ್ಳೆಯದಾಗಲಿ ಅಂತ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ರೆ, ಬಳ್ಳಾರಿಯಲ್ಲಿ ಬಿ. ನಾಗೇಂದ್ರ, ಬೀದರ್‌ನಲ್ಲಿ ರಹೀಂ ಖಾನ್ ಮತ್ತು ಹಾವೇರಿಯಲ್ಲಿ ಎಚ್.ಕೆ. ಪಾಟೀಲ್ ಬೆಂಬಲಿಗರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇಷ್ಟೆಲ್ಲಾ ರಾಜಕೀಯ ಹೈಡ್ರಾಮಾ ನಡುವೆ, ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಯ 10 ಜನಪಥ್ ರಸ್ತೆಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಥ್ಯಾಂಕ್ಸ್ ಹೇಳಿದ್ದಾರೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಫೈನಲ್ ಆಗಿ ಹೈಕಮಾಂಡ್ ಯಾರಿಗೆ ಮಂತ್ರಿಗಿರಿ ಕೊಡಲಿದೆ ಅನ್ನೋ ಕುತೂಹಲ ಸದ್ಯಕ್ಕೆ ಎಲ್ಲರಲ್ಲೂ ಮನೆಮಾಡಿದೆ.

Latest News