Apr 17, 2026 Languages : ಕನ್ನಡ | English

ನಮ್ಮದು ಒಂದೇ ಬಣ, ಅದು ಕಾಂಗ್ರೆಸ್ ಬಣ - ಪಕ್ಷದ ಒಳಜಗಳದ ವದಂತಿಗಳಿಗೆ ತೆರೆ ಎಳೆದ ಡಿ.ಕೆ. ಶಿವಕುಮಾರ್!!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಹೈಡ್ರಾಮಾ ಶುರುವಾಗಿದೆ. ಫಲಿತಾಂಶ ಹೊರಬೀಳುವ ಮೊದಲೇ ಪಕ್ಷದ ವಿರುದ್ಧ ಕೆಲಸ ಮಾಡಿದ ಆರೋಪದ ಮೇಲೆ ಹಲವು ಮುಸ್ಲಿಂ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರ ಈಗ ಕೈ ಪಾಳೆಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಕ್ರಮವನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ-ಡಿಕೆಶಿ ಬಣ ರಾಜಕೀಯಕ್ಕೆ ಬ್ರೇಕ್
ಸಿದ್ದರಾಮಯ್ಯ-ಡಿಕೆಶಿ ಬಣ ರಾಜಕೀಯಕ್ಕೆ ಬ್ರೇಕ್

ನನ್ನ ವೈಯಕ್ತಿಕ ನಿರ್ಧಾರವಲ್ಲ!
ಅಲ್ಪಸಂಖ್ಯಾತ ನಾಯಕರ ವಿರುದ್ಧದ ಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, "ಇಲ್ಲಿ ನನ್ನ ವೈಯಕ್ತಿಕ ದ್ವೇಷವೇನೂ ಇಲ್ಲ. ಪಕ್ಷಕ್ಕೆ ತನ್ನದೇ ಆದ ಗುಪ್ತಚರ ವರದಿಗಳಿವೆ. ದೆಹಲಿಯ ಹೈಕಮಾಂಡ್ ನಾಯಕರ ಸೂಚನೆ ಮತ್ತು ಸಲಹೆಯ ಮೇರೆಗೆ ನಾವು ಈ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪಕ್ಷದ ಶಿಸ್ತು ಕಾಪಾಡುವುದು ನಮ್ಮ ಜವಾಬ್ದಾರಿ," ಎಂದು ಸ್ಪಷ್ಟಪಡಿಸಿದರು. ಯಾರೇ ನನ್ನ ವಿರುದ್ಧ ಮಾತನಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಮುಖ್ಯ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

"ಸಿದ್ದರಾಮಯ್ಯ ಬಣ - ಡಿಕೆಶಿ ಬಣ ಅಂತೆಲ್ಲ ಏನೂ ಇಲ್ಲ"
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಬಣ ರಾಜಕೀಯ ನಡೆಯುತ್ತಿದೆ ಎಂಬ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ, "ನಾವೆಲ್ಲರೂ ಒಂದೇ ಬಣ. ನಮ್ಮದು ಕಾಂಗ್ರೆಸ್ ಬಣ ಅಷ್ಟೇ. ಸಿದ್ದರಾಮಯ್ಯ ಅವರಾಗಲಿ ಅಥವಾ ನಾನಾಗಲಿ ನಮ್ಮ ಬಣ ಎಂದು ಬೋರ್ಡ್ ಹಾಕಿಕೊಂಡಿದ್ದೇವಾ? ನಾನು ಮತ್ತು ಸಿಎಂ ಪ್ರತಿದಿನ ಕುಳಿತು ಮಾತನಾಡುತ್ತೇವೆ. ಪಕ್ಷದ 140ಕ್ಕೂ ಹೆಚ್ಚು ಶಾಸಕರು ಕೂಡ ನಮ್ಮ ಗುಂಪೇ," ಎಂದು ವದಂತಿಗಳಿಗೆ ತೆರೆ ಎಳೆದರು.

ಅಲ್ಪಸಂಖ್ಯಾತರ ಪರ ಕಾಂಗ್ರೆಸ್
ಮುಸ್ಲಿಂ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, "ಕಾಂಗ್ರೆಸ್ ಪಕ್ಷ ಯಾವಾಗಲೂ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಪಕ್ಷ. ನಾವು ಎಲ್ಲಾ ವರ್ಗದವರಿಗೂ ನ್ಯಾಯ ಕೊಡಲು ಬದ್ಧರಾಗಿದ್ದೇವೆ. ಆದರೆ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.

ದಾವಣಗೆರೆ ಉಪಚುನಾವಣೆ ಎಫೆಕ್ಟ್!
ದಾವಣಗೆರೆ ದಕ್ಷಿಣದ ಉಪಚುನಾವಣೆಯಲ್ಲಿ ಒಳಸಂಚು ನಡೆದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಶಿಸ್ತು ಕ್ರಮವು ಕೆಲವು ನಾಯಕರಲ್ಲಿ ಅಸಮಾಧಾನ ಮೂಡಿಸಿದ್ದರೂ, ಡಿಕೆಶಿ ಮಾತ್ರ "ಶಿಸ್ತೇ ಮೊದಲು" ಎನ್ನುವ ನಿಲುವಿಗೆ ಅಂಟಿಕೊಂಡಿದ್ದಾರೆ.

ದಾವಣಗೆರೆ ಉಪಚುನಾವಣೆಯ ಫಲಿತಾಂಶ ಬರುವ ಮೊದಲೇ ಶುರುವಾಗಿರುವ ಈ 'ಕೈ' ಕದನ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.