May 9, 2026 Languages : ಕನ್ನಡ | English

ಜಿವಿವಿ ಕುಲಪತಿಗೆ 'ಆಸಿಡ್' ದಾಳಿ ಬೆದರಿಕೆ - ಬಿಇಡಿ ಅಕ್ರಮ ಬಯಲಿಗೆಳೆದಿದ್ದಕ್ಕೇ ಬಂತಾ ಅನಾಮಧೇಯ ಪತ್ರ; ಏನಿದೆ ಪತ್ರದಲ್ಲಿ?

ಕಲಬುರಗಿ: ವಿದ್ಯೆ ಕಲಿಸುವ ದೇಗುಲದಂತಿರಬೇಕಾದ ವಿಶ್ವವಿದ್ಯಾಲಯದಲ್ಲಿ ಈಗ ರೌಡಿಸಂ ಛಾಯೆ ಕಾಣಿಸಿಕೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಗಳು 'ಮುಖಕ್ಕೆ ಆ*ಸಿಡ್ ಹಾಕುತ್ತೇವೆ' ಎಂದು ಬೆದರಿಕೆ ಪತ್ರ ಬರೆದಿದ್ದು, ಇಡೀ ಕ್ಯಾಂಪಸ್‌ನಲ್ಲಿ ಈಗ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳ ಅಕ್ರಮದ ಆಟ: ಆಸಿಡ್ ದಾಳಿ ಎಚ್ಚರಿಕೆ;
ವಿದ್ಯಾರ್ಥಿಗಳ ಅಕ್ರಮದ ಆಟ: ಆಸಿಡ್ ದಾಳಿ ಎಚ್ಚರಿಕೆ;

ಅಸಲಿ ಕಿರಿಕ್ ಶುರುವಾಗಿದ್ದು ಎಲ್ಲಿ?

ವಿಷಯ ಏನೆಂದರೆ, 2024ರಲ್ಲಿ ನಡೆದ ಬಿಇಡಿ (B.Ed) ಪರೀಕ್ಷೆಯ ಮೌಲ್ಯಮಾಪನದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿತ್ತು. ಅಂಕಗಳನ್ನು ತಿದ್ದುಪಡಿ ಮಾಡಿ, ಅನರ್ಹರಿಗೆ ಅಂಕ ನೀಡಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕುಲಪತಿ ಶಶಿಕಾಂತ್ ಅವರು ಸುಮ್ಮನೆ ಕೂರದೆ, ವಿವಿಯ ಆಂತರಿಕ ಸಮಿತಿಯಿಂದ ತನಿಖೆ ಮಾಡಿಸಿದ್ದರು. ಅಕ್ರಮ ನಡೆದಿರುವುದು ದೃಢಪಟ್ಟ ತಕ್ಷಣ ವಿಷಯವನ್ನು ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತಂದಿದ್ದರು.

ರಾಜ್ಯಪಾಲರ ಎಂಟ್ರಿ ಮತ್ತು ಮರುಮೌಲ್ಯಮಾಪನ

ಕುಲಪತಿಗಳ ದೂರಿನ ಮೇರೆಗೆ ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿದ್ದರು. ಈ ಸಮಿತಿಯ ಆದೇಶದಂತೆ ಈಗ ಬಿಇಡಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಪ್ರಕ್ರಿಯೆ ನಡೆದಿದೆ. ಆದರೆ, ಈ ಮರುಮೌಲ್ಯಮಾಪನದಿಂದ ಕೆಲವು 'ಕಿಲಾಡಿ' ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ.

"ನರಳಿ ನರಳಿ ಬದುಕುವಂತೆ ಮಾಡ್ತೇವೆ": ಪತ್ರದಲ್ಲಿ ಏನಿದೆ?

ಅನಾಮಧೇಯ ವ್ಯಕ್ತಿಗಳು ಬರೆದಿರುವ ಪತ್ರದಲ್ಲಿನ ಭಾಷೆ ಮಾತ್ರ ತುಂಬಾ ಭಯಾನಕವಾಗಿದೆ. "ನಾವು ಎರಡು ಲಕ್ಷ ರೂಪಾಯಿ ಕೊಟ್ಟು ಬಿಇಡಿ ಸೇರಿದ್ದೇವೆ, ಎರಡು ವರ್ಷದಿಂದ ರಿಸಲ್ಟ್‌ಗಾಗಿ ಕಾಯುತ್ತಿದ್ದೇವೆ. ಈಗ ನೀವು ಮಾಡುತ್ತಿರುವ ಮರುಮೌಲ್ಯಮಾಪನ ನಮಗೆ ಇಷ್ಟವಿಲ್ಲ. ಒಂದು ವೇಳೆ ಈ ಪ್ರಕ್ರಿಯೆಯಿಂದಾಗಿ ನಮ್ಮ ಅಂಕಗಳು ಕಡಿಮೆಯಾದರೆ ಅಥವಾ ನಾವು ಫೇಲ್ ಆದರೆ, ನಿಮ್ಮ ಮುಖಕ್ಕೆ ಆ*ಸಿಡ್ ಹಾಕುತ್ತೇವೆ. ನೀವು ಸಾಯಬಾರದು, ಮುಖ ಸುಟ್ಟುಕೊಂಡು ನರಳಿ ನರಳಿ ಬದುಕುವಂತೆ ಮಾಡುತ್ತೇವೆ" ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಕೋರ್ಟ್ ಮೆಟ್ಟಿಲೇರಿದ ಕುಲಪತಿ

ಈ ಬೆದರಿಕೆ ಪತ್ರದಿಂದ ಆತಂಕಗೊಂಡ ಕುಲಪತಿ ಶಶಿಕಾಂತ್ ಅವರು ಕೂಡಲೇ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಈಗ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಅನಾಮಧೇಯ ಪತ್ರದ ಹಿಂದೆ ಯಾರಿದ್ದಾರೆ? ಇದು ವಿದ್ಯಾರ್ಥಿಗಳ ಕೆಲಸವೇ ಅಥವಾ ಅಕ್ರಮದಲ್ಲಿ ಭಾಗಿಯಾದ ದೊಡ್ಡ ಗ್ಯಾಂಗ್ ಕೈವಾಡವೇ? ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

"ತಪ್ಪು ಮಾಡಿದವರನ್ನು ಶಿಕ್ಷಿಸಬೇಕಾದ ಕುಲಪತಿಗಳಿಗೆ ಈ ರೀತಿ ಬೆದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಅಕ್ರಮವಾಗಿ ಪಾಸ್ ಆಗಲು ಹವಣಿಸುವ ಇಂತಹವರು ಮುಂದೆ ಶಿಕ್ಷಕರಾಗಿ ಮಕ್ಕಳಿಗೆ ಏನು ಕಲಿಸುತ್ತಾರೆ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ತನಿಖೆ ನಡೆಸಿ ಅಕ್ರಮ ಎಸಗಿದವರನ್ನು ಜೈಲಿಗಟ್ಟಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಬಿಇಡಿ ಅಂಕಗಳ ಆಟ ಈಗ ಆಸಿಡ್ ದಾಳಿಯ ಬೆದರಿಕೆ ಮಟ್ಟಕ್ಕೆ ತಲುಪಿರುವುದು ಮಾತ್ರ ದುರದೃಷ್ಟಕರ. 

Latest News