ಹುಬ್ಬಳ್ಳಿಯ ಜನತಾ ಬಜಾರ್ ಬಳಿ ಬುಧವಾರ ರಾತ್ರಿ ನಡೆದ ಕಳ್ಳತನದ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ರಾತ್ರೋರಾತ್ರಿ ಕಳ್ಳನ ಕೈಚಳಕದಿಂದ ಸ್ಕೂಟಿ ಎಗರಿಸಿದ ಖದೀಮ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದಾನೆ. ಹೌದು, ಗಣೇಶಪೇಟ ನಿವಾಸಿ ಪ್ರೇಮ್ ಭೋಜಗಾರ ಅವರಿಗೆ ಸೇರಿದ ಕೆಎ 63 ವಿ 7378 ನಂಬರಿನ ಸ್ಕೂಟಿ, ನಕಲಿ ಚಾವಿ ಬಳಸಿ ಕಳ್ಳತನ ಮಾಡಲಾಗಿದೆ. ಕಳ್ಳನು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಸ್ಕೂಟಿ ಹತ್ತಿ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ನಗರದ ಪ್ರಮುಖ ರಸ್ತೆಯಲ್ಲೇ ನಡೆದ ಈ ಕಳ್ಳತನ, ಭದ್ರತಾ ಲೋಪ ಮತ್ತು ಪೊಲೀಸ್ ನಿರ್ಲಕ್ಷತನವನ್ನು ಬಯಲಿಗೆಳೆದಿದೆ. ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿಯ ಅವಳಿನಗರದಲ್ಲಿ ಕಳ್ಳತನ, ಪಿಕ್ ಪಾಕೇಟ್ ಸೇರಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಪ್ರೇಮ್ ಭೋಜಗಾರ ಅವರು ತಮ್ಮ ವಾಹನ ಕಳೆದುಕೊಂಡು ಕಂಗಾಲಾಗಿದ್ದು, ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರು, ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ಗಟ್ಟಿಯಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ದೊರೆತಿರುವುದರಿಂದ, ಕಳ್ಳನನ್ನು ಪತ್ತೆಹಚ್ಚುವಲ್ಲಿ ಸಹಾಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಜನತಾ ಬಜಾರ್ ಬಳಿ ನಡೆದ ಸ್ಕೂಟಿ ಕಳ್ಳತನ, ನಗರದಲ್ಲಿ ಭದ್ರತಾ ವ್ಯವಸ್ಥೆಯ ಕೊರತೆಯನ್ನು ತೋರಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಶೀಘ್ರ ಕ್ರಮ ಕೈಗೊಂಡು ಕಳ್ಳನನ್ನು ಪತ್ತೆಹಚ್ಚುವ ನಿರೀಕ್ಷೆಯಿದೆ.