Apr 4, 2026 Languages : ಕನ್ನಡ | English

"ಮಾನ-ಮರ್ಯಾದೆ ಬಗ್ಗೆ ಮಾತಾಡೋರು ನೀವಾ?" - ಮುಡಾ ಮತ್ತು ವಾಲ್ಮೀಕಿ ಹಗರಣ ಮುಂದಿಟ್ಟು ಸಿಎಂಗೆ ಸಿ.ಟಿ. ರವಿ ನೇರ ಸವಾಲ್!!

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಅಖಾಡ ಈಗ ಪಕ್ಕಾ 'ಕುರುಕ್ಷೇತ್ರ'ದಂತಾಗಿದೆ. ಒಂದೆಡೆ ಆಡಳಿತಾರೂಢ ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಮೇಲೆ ನಂಬಿಕೆ ಇಟ್ಟಿದ್ದರೆ, ಇನ್ನೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ 'ಚಾರ್ಜ್‌ಶೀಟ್' ಬಿಡುಗಡೆ ಮಾಡಿ ಅಬ್ಬರಿಸುತ್ತಿದೆ. ಅದರಲ್ಲೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಶನಿವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೀತಿ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ದಾವಣಗೆರೆ ದಕ್ಷಿಣದಲ್ಲಿ ಶುರುವಾಯ್ತು ಗ್ಯಾರಂಟಿ ಫೈಟ್
ದಾವಣಗೆರೆ ದಕ್ಷಿಣದಲ್ಲಿ ಶುರುವಾಯ್ತು ಗ್ಯಾರಂಟಿ ಫೈಟ್

ಸದ್ಯ ರಾಜ್ಯದ ಮಹಿಳೆಯರ ದೊಡ್ಡ ಪ್ರಶ್ನೆ ಅಂದ್ರೆ ಗೃಹಲಕ್ಷ್ಮಿ ಯೋಜನೆಯ ಹಣ. ಇದನ್ನೇ ಅಸ್ತ್ರ ಮಾಡಿಕೊಂಡಿರೋ ಸಿ.ಟಿ. ರವಿ, "ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಇದರ ಬಗ್ಗೆ ಕೇಳಬೇಕಾದ ಹಣಕಾಸು ಸಚಿವರಾಗಲಿ ಅಥವಾ ಸಂಬಂಧಪಟ್ಟ ಇಲಾಖೆಯ ಸಚಿವರಾಗಲಿ ತುಟಿ ಬಿಚ್ಚುತ್ತಿಲ್ಲ. ಬರಿ ಪ್ರಚಾರಕ್ಕೆ ಮಾತ್ರ ಗ್ಯಾರಂಟಿ ಸೀಮಿತವಾಗಿದೆಯಾ?" ಎಂದು ಪ್ರಶ್ನಿಸಿದ್ದಾರೆ.

'ಬಸ್ಸುಗಳು ತಳ್ಳೋ ಗಾಡಿಗಳಾಗಿವೆ'

ಸರ್ಕಾರದ ಶಕ್ತಿ ಯೋಜನೆಯ ಬಗ್ಗೆ ಮಾತನಾಡುತ್ತಾ, "ಇವತ್ತು ಹಳ್ಳಿಗಳಿಗೆ ಹೋಗೋ ಬಸ್ಸುಗಳ ಸ್ಥಿತಿ ಹೇಗಿದೆ ಅಂದ್ರೆ, ಅವು ಬಸ್ಸುಗಳಲ್ಲ, ತಳ್ಳೋ ಗಾಡಿಗಳಾಗಿವೆ. ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಸರ್ಕಾರಕ್ಕೆ ಕನಿಷ್ಠ ಮಾನ-ಮರ್ಯಾದೆ ಇದೆಯಾ?" ಎಂದು ಕಟುವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಗ್ಯಾರಂಟಿಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ ಇವತ್ತು ಸಿಎಂ ಸೇರಿದಂತೆ ಒಂದೂವರೆ ಡಜನ್ ಸಚಿವರು ಚುನಾವಣಾ ಪ್ರಚಾರದಲ್ಲಿ ಬೆವರು ಸುರಿಸುವ ಅಗತ್ಯವಿರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹಗರಣಗಳ ಸುರಿಮಲೆ!

ಮುಖ್ಯಮಂತ್ರಿಗಳು ಬಿಜೆಪಿಯವರನ್ನು 'ಮಾನಗೆಟ್ಟವರು' ಎಂದು ಕರೆದಿದ್ದಕ್ಕೆ ತಿರುಗೇಟು ನೀಡಿದ ರವಿ, "ಮುಖ್ಯಮಂತ್ರಿಗಳೇ, ನಿಜವಾಗಿ ಮಾನಗೆಟ್ಟವರು ಯಾರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ನಿಗಮದ ಹಣದಲ್ಲಿ ನಿಮ್ಮ ಸಚಿವರು ಹೆಂಡತಿಗೆ ಒಡವೆ ಕೊಡಿಸಿದ್ದು, ಚುನಾವಣೆಗೆ ಎಣ್ಣೆ ಸಪ್ಲೈ ಮಾಡಿದ್ದು ಮರ್ಯಾದೆ ಇರೋರು ಮಾಡುವ ಕೆಲಸವೇ?" ಎಂದು ನೇರವಾಗಿಯೇ ಕೇಳಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಚಿವರೇ ರಾಜೀನಾಮೆ ನೀಡಬೇಕಾಗಿ ಬಂದದ್ದು ಸರ್ಕಾರದ ಮರ್ಯಾದೆ ಹರಾಜು ಹಾಕಿದಂತಾಗಿದೆ ಎಂಬುದು ಅವರ ವಾದ.

ಶೇ. 60 ಕಮಿಷನ್ ಆರೋಪ

ಹಿಂದೆ ಬಿಜೆಪಿ ಮೇಲೆ ಶೇ. 40 ಕಮಿಷನ್ ಆರೋಪ ಹೊರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮೇಲೆ ಈಗ ಗುತ್ತಿಗೆದಾರರೇ ಶೇ. 60 ಕಮಿಷನ್ ಆರೋಪ ಮಾಡುತ್ತಿದ್ದಾರೆ. "ಇಷ್ಟೆಲ್ಲಾ ಆರೋಪಗಳು ಕೇಳಿಬಂದರೂ ಅಧಿಕಾರಕ್ಕೆ ಅಂಟಿಕೊಂಡಿರೋ ನಿಮಗೆ ಮರ್ಯಾದೆ ಅನ್ನೋದು ಇದೆಯಾ?" ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಬಾರ್ ಮಾಲೀಕರಿಂದ ತಿಂಗಳ ಮಾಮೂಲಿ ವಸೂಲಿ ಮಾಡುತ್ತಿರೋ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ.

ಜನರ ಕೋರ್ಟ್‌ನಲ್ಲಿ ತೀರ್ಪು

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಅತಿಥಿ ಉಪನ್ಯಾಸಕರಿಗೆ ಸಂಬಳವಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು ಸಾವು-ನೋವು ಸಂಭವಿಸುತ್ತಿವೆ. ಈ ಎಲ್ಲವನ್ನೂ ಗಮನಿಸುತ್ತಿರೋ ಜನತೆ ಈ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸುತ್ತಾರೆ ಎಂಬ ಆತ್ಮವಿಶ್ವಾಸ ಬಿಜೆಪಿಯಲ್ಲಿದೆ.

ಸಿ.ಟಿ. ರವಿ ಅವರ ಈ 'ಚಾರ್ಜ್‌ಶೀಟ್'ನಲ್ಲಿರೋ ಅಂಶಗಳು ಕೇವಲ ರಾಜಕೀಯ ಟೀಕೆಗಳಲ್ಲ, ಇವುಗಳಲ್ಲಿ ಜನರ ದೈನಂದಿನ ಸಮಸ್ಯೆಗಳೂ ಅಡಗಿವೆ. ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೆ ಮತ್ತು ಮತದಾರರು ಯಾರ ಕೈ ಹಿಡಿಯುತ್ತಾರೆ ಅನ್ನೋದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ನೀಡಬೇಕಿದೆ. ಸದ್ಯಕ್ಕಂತೂ ದಾವಣಗೆರೆಯಲ್ಲಿ ಈ 'ಮಾನ-ಮರ್ಯಾದೆ' ಪ್ರಶ್ನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.