"ಸುಳ್ಳು ಕೇಸ್ ಹಾಕಿ 10 ಲಕ್ಷ ಪೀಕಿದ್ರು, ಈಗ ಮತ್ತೆ ಕಾಡ್ತಿದ್ದಾರೆ" - ಕಾಡುಗೋಡಿ ಪಾಪಣ್ಣ ಆತ್ಮಹತ್ಯೆಗೂ ಮುನ್ನ ಬಿಚ್ಚಿಟ್ಟ ಕರಾಳ ಸತ್ಯದ ಶಾಕಿಂಗ್ ವಿಡಿಯೋ!!

ರಾಜಧಾನಿ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು (Atrocity Act) ದುರ್ಬಳಕೆ ಮಾಡಿಕೊಂಡು, ಅಮಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುವ ಜಾಲವೊಂದು ಸಕ್ರಿಯವಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ದಾಖಲಿಸಲಾದ ಸುಳ್ಳು ಅಟ್ರಾಸಿಟಿ ಪ್ರಕರಣ ಮತ್ತು ಆರೋಪಿಗಳ ನಿರಂತರ ಆರ್ಥಿಕ ಬೇಡಿಕೆಯಿಂದ ಮನನೊಂದ ಬಡ ವ್ಯಾಪಾರಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಅಟ್ರಾಸಿಟಿ ಬ್ಲ್ಯಾಕ್‌ಮೇಲ್ ಜಾಲ ಪತ್ತೆ
ಬೆಂಗಳೂರಿನಲ್ಲಿ ಅಟ್ರಾಸಿಟಿ ಬ್ಲ್ಯಾಕ್‌ಮೇಲ್ ಜಾಲ ಪತ್ತೆ

ಸಾವಿಗೂ ಮುನ್ನ ತಮಗಾಗುತ್ತಿರುವ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸೆಲ್ಫಿ ವಿಡಿಯೋ ಮಾಡಿರುವ ವ್ಯಕ್ತಿ, ಆ ಬಳಿಕ ಅಲ್ಯುಮಿನಿಯಮ್ ಪಾಸಫೈಟ್ (ವಿಷ) ಸೇವಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮೃತ ವ್ಯಕ್ತಿಯ ಹಿನ್ನೆಲೆ ಮತ್ತು ಆತ್ಮಹತ್ಯೆಯ ವಿವರ

ಕಾಡುಗೋಡಿ ಸಮೀಪದ ಚನ್ನಸಂದ್ರ ನಿವಾಸಿಯಾದ ಪಾಪಣ್ಣ (41) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಸ್ಥಳೀಯವಾಗಿ ಸಣ್ಣದೊಂದು ವ್ಯಾಪಾರ ಮಾಡಿಕೊಂಡು ಹೆಂಡತಿ, ಮಕ್ಕಳೊಂದಿಗೆ ಸಾಧಾರಣ ಜೀವನ ನಡೆಸುತ್ತಿದ್ದರು. ಅತ್ಯಂತ ಸಭ್ಯ ಹಾಗೂ ಕಷ್ಟಪಟ್ಟು ದುಡಿಯುವ ವ್ಯಕ್ತಿ ಎಂದು ಹೆಸರಾಗಿದ್ದ ಪಾಪಣ್ಣ, ಜೂನ್ 19ರ ಶುಕ್ರವಾರ ತಡರಾತ್ರಿ ತಮ್ಮ ಮನೆಯಲ್ಲೇ ತೀವ್ರವಾಗಿ ವಿಷ ಸೇವಿಸಿದ್ದರು.

ವಿಷದ ತೀವ್ರತೆಗೆ ನರಳಾಡುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಪಾಪಣ್ಣ ಅವರ ಸಾವಿನ ಬೆನ್ನಲ್ಲೇ ಅವರು ರೆಕಾರ್ಡ್ ಮಾಡಿದ್ದ ಡೆತ್ ನೋಟ್ ರೂಪದ ಭೀಕರ ವಿಡಿಯೋ ಹೊರಬಂದಿದ್ದು, ಇಡೀ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದೆ.

"ಸುಳ್ಳು ಕೇಸ್ ಹಾಕಿ 10 ಲಕ್ಷ ಪೀಕಿದ್ದರು, ಈಗ ಮತ್ತೆ ಡಿಮ್ಯಾಂಡ್ ಮಾಡ್ತಿದ್ದಾರೆ!" – ವಿಡಿಯೋದಲ್ಲಿ ಕಣ್ಣೀರು

ಪಾಪಣ್ಣ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್‌ನಲ್ಲಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ, ತಮಗೆ ಕಿರುಕುಳ ನೀಡುತ್ತಿದ್ದವರ ಇಂಚಿಂಚು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆ ವಿಡಿಯೋದಲ್ಲಿ ಪಾಪಣ್ಣ ಹೇಳಿರುವ ಮಾತುಗಳು ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತವೆ.

ಪಾಪಣ್ಣ ಅವರ ಕೊನೆಯ ಮಾತುಗಳು: "ನಾನೊಬ್ಬ ಬಡ ವ್ಯಾಪಾರಿ. ಕಷ್ಟಪಟ್ಟು ಸಂಸಾರ ನಡೆಸುತ್ತಿದ್ದೇನೆ. ಆದರೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಎಕೆಜಿ ಕಾಲೋನಿಯಲ್ಲಿರುವ ಜೋಗಿ ಶೀನಾ ಮತ್ತು ಆತನ ಕುಟುಂಬದವರು ನಮಗೆ ಬದುಕಲು ಬಿಡುತ್ತಿಲ್ಲ. ಇವರ ಮನೆಯಲ್ಲಿ ಯಾರೂ ಕೆಲಸಕ್ಕೆ ಹೋಗಲ್ಲ, ಕೇವಲ ಅಮಾಯಕರ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಹಣ ಮಾಡುವುದೇ ಇವರ ಧಂದೆಯಾಗಿದೆ. ಈ ಹಿಂದೆ 2021 ರಲ್ಲಿ ನಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿದ್ದರು. ಅಂದು ಆ ಕೇಸ್ ವಾಪಸ್ ಪಡೆಯಲು ಬರೋಬ್ಬರಿ 10 ಲಕ್ಷ ರೂಪಾಯಿ ಹಣವನ್ನು ಬ್ಲ್ಯಾಕ್‌ಮೇಲ್ ಮಾಡಿ ಪಡೆದುಕೊಂಡಿದ್ದರು. ಈಗ ಮತ್ತೆ ನಯನಾ ಎಂಬಾಕೆಯ ಮೂಲಕ ನಮ್ಮ ಇಡೀ ಕುಟುಂಬ ಹಾಗೂ ನನ್ನ ತಂಗಿಯ ಮೇಲೆ ಫೇಕ್ ಅಟ್ರಾಸಿಟಿ ದೂರು ದಾಖಲಿಸಿದ್ದಾರೆ. ಮತ್ತೊಮ್ಮೆ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇವರ ಸುಳ್ಳು ಆರೋಪಗಳಿಂದ ಸಮಾಜದಲ್ಲಿ ತಲೆ ಎತ್ತಿ ನಡೆಯದಂತಾಗಿದ್ದು, ನಾನು ಮನನೊಂದಿದ್ದೇನೆ. ನನ್ನ ಸಾವಿಗೆ ಜೋಗಿ ಶೀನಾ, ಪ್ರಶಾಂತ್, ಸಂತೋಷ್ ಮತ್ತು ಲಲಿತ್ ಕುಮಾರ್ ನೇರ ಕಾರಣ."

ವಿಡಿಯೋದ ಕೊನೆಯಲ್ಲಿ, "ನಾನು ಹೋಗುತ್ತಿದ್ದೇನೆ, ಆದರೆ ಇವರಿಂದ ನನ್ನ ಕುಟುಂಬವನ್ನು ಮತ್ತು ನನ್ನ ತಂಗಿಯನ್ನು ಪೊಲೀಸರು ಕಾಪಾಡಬೇಕು, ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಪಾಪಣ್ಣ ಕಣ್ಣೀರಿಡುತ್ತಾ ಬೇಡಿಕೊಂಡಿದ್ದಾರೆ.

ನಾಲ್ವರು ಆರೋಪಿಗಳು ವಶಕ್ಕೆ

ಪಾಪಣ್ಣ ಅವರ ಆತ್ಮಹತ್ಯೆಯ ಬಳಿಕ ಅವರ ತಂಗಿ ಭಾಗ್ಯಶ್ರೀ ಅವರು ನೀಡಿದ ಲಿಖಿತ ದೂರು ಹಾಗೂ ಮೃತರ ಸೆಲ್ಫಿ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳಾದ ಜೋಗಿ ಸೀನಾ, ಪ್ರಶಾಂತ್, ಪ್ರಶಾಂತ್ (ಮತ್ತೊಬ್ಬ ಆರೋಪಿ) ಮತ್ತು ಸಂತೋಷ್ ಎಂಬ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಲಲಿತ್ ಕುಮಾರ್ ಹಾಗೂ ನಯನಾಳಿಗಾಗಿ ಹುಡುಕಾಟ ಮುಂದುವರಿದಿದೆ.

ಕಾನೂನಿನ ದುರ್ಬಳಕೆಗೆ ಬಲಿಯಾದ ಬಡ ಜೀವ

ಪರಿಶಿಷ್ಟ ಜಾತಿಗಳ ರಕ್ಷಣೆಗಾಗಿ ತರಲಾದ ಕಾನೂನನ್ನು ಕೆಲ ಕಿಡಿಗೇಡಿಗಳು ಬಂಡವಾಳ ಮಾಡಿಕೊಂಡು, ಹಣ ಗಳಿಸುವ ಸಾಧನವನ್ನಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಈ ಘಟನೆ ಜ್ವಲಂತ ಉದಾಹರಣೆಯಾಗಿದೆ. ಆರೋಪಿಗಳ ಕಿರುಕುಳಕ್ಕೆ ಹೆದರಿ ಈಗಾಗಲೇ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದ ಪಾಪಣ್ಣ, ಮತ್ತೊಮ್ಮೆ ಸುಳ್ಳು ಕೇಸ್ ಎದುರಿಸಲು ಸಾಧ್ಯವಾಗದೆ, ಮಾನ ಹರಾಜಾಗುವ ಭೀತಿಯಲ್ಲಿ ಜೀವ ಬಿಟ್ಟಿದ್ದಾರೆ.

ಸ್ಥಳೀಯ ನಿವಾಸಿಗಳು ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಈ ಗ್ಯಾಂಗ್ ಕೇವಲ ಪಾಪಣ್ಣ ಮಾತ್ರವಲ್ಲದೆ ಇನ್ನೂ ಹಲವರನ್ನು ಇದೇ ರೀತಿ ಹೆದರಿಸಿ ಹಣ ವಸೂಲಿ ಮಾಡಿದೆ. ಇಂತಹ ಸುಳ್ಳು ದೂರು ನೀಡುವ ಜಾಲಗಳ ವಿರುದ್ಧ ಪೊಲೀಸರು ಕಠಿಣ ನಿಲುವು ತಳೆಯಬೇಕು" ಎಂದು ಒತ್ತಾಯಿಸಿದ್ದಾರೆ.

ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ

ಬಡ ವ್ಯಾಪಾರಿ ಪಾಪಣ್ಣ ಅವರ ಸಾವು ಇಡೀ ಸಮಾಜಕ್ಕೆ ನೋವು ತಂದಿದೆ. ಪೊಲೀಸರು ಸದ್ಯ ನಾಲ್ವರನ್ನು ವಶಕ್ಕೆ ಪಡೆದಿದ್ದರೂ, ಪ್ರಕರಣದ ಸಂಪೂರ್ಣ ತನಿಖೆಯಾಗಬೇಕಿದೆ. ಇಂತಹ ಸುಳ್ಳು ಪ್ರಕರಣಗಳ ಹಿಂದೆ ಯಾರೆಲ್ಲಾ ಇದ್ದಾರೆ, ದೂರು ನೀಡಲು ಇವರಿಗೆ ಯಾರು ಪ್ರಚೋದನೆ ನೀಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ಆ ಮೂಲಕ ಮೃತ ಪಾಪಣ್ಣ ಅವರ ಆತ್ಮಕ್ಕೆ ಹಾಗೂ ನೊಂದ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

Latest News