May 9, 2026 Languages : ಕನ್ನಡ | English

ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ದೇವಸ್ಥಾನಕ್ಕೆ ಗುದ್ದಿದ ಬಿಎಂಟಿಸಿ ಬಸ್ - ತಪ್ಪಿದ ಭಾರಿ ಅನಾಹುತ!!

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಯಾವಾಗ ಏನು ನಡೆಯುತ್ತೆ ಅಂತ ಹೇಳೋಕಾಗಲ್ಲ. ಇಂದು ಮಧ್ಯಾಹ್ನ ಅಂಧ್ರಹಳ್ಳಿಯಲ್ಲಿ ಬಿಎಂಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಒಬ್ಬ ಬೈಕ್ ಸವಾರನ ಪ್ರಾಣವೇನೋ ಉಳಿಯಿತು, ಆದರೆ ನಿಯಂತ್ರಣ ತಪ್ಪಿದ ಬಸ್ ನೇರವಾಗಿ ದೇವಸ್ಥಾನವೊಂದಕ್ಕೆ ನುಗ್ಗಿದ ಘಟನೆ ನಡೆದಿದೆ.

ಅಂಧ್ರಹಳ್ಳಿಯಲ್ಲಿ ಬಿಎಂಟಿಸಿ ಬಸ್ ದೇವಸ್ಥಾನಕ್ಕೆ ಡಿಕ್ಕಿ;
ಅಂಧ್ರಹಳ್ಳಿಯಲ್ಲಿ ಬಿಎಂಟಿಸಿ ಬಸ್ ದೇವಸ್ಥಾನಕ್ಕೆ ಡಿಕ್ಕಿ;

ಘಟನೆ ನಡೆದಿದ್ದು ಹೇಗೆ?

ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸಮಯ. ಅಂಧ್ರಹಳ್ಳಿಯಿಂದ 8ನೇ ಮೈಲಿ ಕಡೆಗೆ ಬಿಎಂಟಿಸಿ ಬಸ್ ಎಂದಿನಂತೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಅಂಧ್ರಹಳ್ಳಿ ರಸ್ತೆಯ ತಿರುವೊಂದರಲ್ಲಿ ಬಸ್ ಚಲಿಸುತ್ತಿದ್ದಾಗ, ಏಕಾಏಕಿ ಬಸ್‌ನ ಮುಂದೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿ ಬಸ್ಸನ್ನು ಪಕ್ಕಕ್ಕೆ ತಿರುಗಿಸಿದ್ದಾರೆ.

ದೇಗುಲಕ್ಕೆ ಗುದ್ದಿದ ಬಸ್!

ಬೈಕ್ ಸವಾರನನ್ನು ತಪ್ಪಿಸುವ ಭರದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ಬಸ್ ವೇಗವಾಗಿ ಹೋಗಿ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇವಸ್ಥಾನದ ಮುಂಭಾಗದ ಗೋಡೆ ಮತ್ತು ಕಂಬಗಳು ಭಾಗಶಃ ಹಾನಿಗೊಳಗಾಗಿವೆ. ಬಸ್‌ನ ಮುಂಭಾಗ ಕೂಡ ಜಖಂಗೊಂಡಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ದೇವಸ್ಥಾನದ ಒಳಗೆ ಅಥವಾ ಮುಂಭಾಗದಲ್ಲಿ ಭಕ್ತರು ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಚಾಲಕ ಮತ್ತು ಪ್ರಯಾಣಿಕರಿಗೆ ಗಾಯ;

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಒಳಗೆ ಕುಳಿತಿದ್ದ ಪ್ರಯಾಣಿಕರು ಒಮ್ಮೆಲೇ ದಬಾಬಿಸಿ ಬಿದ್ದಿದ್ದಾರೆ. ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬೈಕ್ ಸವಾರನ ಜೀವ ಉಳಿಸಲು ಹರಸಾಹಸ ಪಟ್ಟ ಬಸ್ ಚಾಲಕನಿಗೂ ಲಘು ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ದೇವಸ್ಥಾನದ ಒಂದು ಭಾಗ ಜಖಂಗೊಂಡಿದ್ದು, ಬಸ್ ಚಾಲಕ ಹಾಗೂ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕ ಚಾಲನೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. 

ಸ್ಥಳೀಯರ ಆಕ್ರೋಶ;

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಂಧ್ರಹಳ್ಳಿ ರಸ್ತೆಯಲ್ಲಿ ಜನ ಜಮಾಯಿಸಿದ್ದರು. 'ಬೈಕ್ ಸವಾರರು ಅಜಾಗರೂಕತೆಯಿಂದ ಗಾಡಿ ಚಲಾಯಿಸುವುದರಿಂದ ಇಂತಹ ಘಟನೆಗಳು ನಡೆಯುತ್ತವೆ. ಚಾಲಕ ಸಮಯಪ್ರಜ್ಞೆ ಮೆರೆಯದಿದ್ದರೆ ಇಂದು ರಸ್ತೆಯಲ್ಲಿ ಹೆ*ಣ ಬೀಳುತ್ತಿತ್ತು' ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ದೇವಸ್ಥಾನದ ಹಾನಿಯ ಬಗ್ಗೆ ದೇವಸ್ಥಾನ ಸಮಿತಿ ಮತ್ತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ!

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ನಿಮ್ಮ ಒಂದು ಸಣ್ಣ ತಪ್ಪು ಇತರರ ಜೀವಕ್ಕೆ ಮತ್ತು ಸಾರ್ವಜನಿಕ ಆಸ್ತಿಗೆ ಧಕ್ಕೆ ತರಬಹುದು!

Latest News